Sericulture: ನನ್ನ ರೇಷ್ಮೆ ನನ್ನ ಹೆಮ್ಮೆ ಅಭಿಯಾನ: ರೇಷ್ಮೆ ಬೆಳೆಗೆಗಾರರಿಗೆ ತಂತ್ರಜ್ಞಾನದ ಆಭಿಯಾನ

IMG-20250807-WA0004

ದಾವಣಗೆರೆ (Sericulture) :  ನನ್ನ ರೇಷ್ಮೆ ನನ್ನ ಹೆಮ್ಮೆ ಎಂಬ ಮಹಾ ತಂತ್ರಜ್ಞಾನ ಹಂಚಿಕೆ ಅಭಿಯಾನವನ್ನು ಕೇಂದ್ರ ರೇಷ್ಮೆ ಮಂಡಳಿಯಿಂದ ದೇಶವ್ಯಾಪ್ತಿ ಅಭಿಯಾನ ಆರಂಭಿಸಿದೆ ಎಂದು ರೇಷ್ಮೆ ಇಲಾಖೆ ಉಪನಿರ್ದೇಶಕ ಪಿ.ಎಲ್.ಚಂದ್ರಪ್ಪ ತಿಳಿಸಿದ್ದಾರೆ.

ಕೇಂದ್ರ ರೇಷ್ಮೆ ಮಂಡಳಿಯಿಂದ ಅಭಿವೃದ್ಧಿಪಡಿಸಲಾದ ಅತ್ಯಾಧುನಿಕ ತಂತ್ರಜ್ಞಾನಗಳು ಲಭ್ಯವಿದ್ದರೂ ಸಹ, ರೇಷ್ಮೆ ಕೃಷಿಯಲ್ಲಿ ನಿರತರಾಗಿರುವ ರೈತರು ಇನ್ನೂ ಹಳೆಯ ಪದ್ಧತಿಗಳ ಮೇಲೆ ಅವಲಂಭಿತರಾಗಿದ್ದಾರೆ. ಇದಕ್ಕೆ ಪ್ರಮುಖ ಕಾರಣ ತಂತ್ರಜ್ಞಾನಗಳ ಬಗ್ಗೆ ಪರಿಚಯದ ಕೊರತೆ. ಈ ಅಂತರವನ್ನು ದೂರ ಮಾಡುವ ಉದ್ದೇಶದಿಂದ  ಈ ಅಭಿಯಾನದಡಿಯಲ್ಲಿ ಕೇಂದ್ರ ರೇಷ್ಮೆ ಸಂಶೋಧನಾ ಮತ್ತು ತರಬೇತಿ ಸಂಸ್ಥೆ, ಮೈಸೂರಿನಲ್ಲಿ ಅಭಿವೃದ್ಧಿಪಡಿಸಲಾದ ನೂತನ ತಂತ್ರಜ್ಞಾನಗಳನ್ನು ಫಲಪ್ರದವಾಗಿ ಅನುಷ್ಟಾನಗೊಳಿಸಲು ದಾವಣಗೆರೆ ಜಿಲ್ಲೆಯನ್ನು ಆಯ್ಕೆ ಮಾಡಲಾಗಿದೆ.

ಸಿಎಸ್‍ಆರ್‍ಟಿಐ ವಿಜ್ಞಾನಿಗಳು ಮತ್ತು ರಾಜ್ಯ ರೇಷ್ಮೆ ಇಲಾಖೆಯ ಸಹಯೋಗದೊಂದಿಗೆ ಈ ಕಾರ್ಯಕ್ರಮ ಅನುಷ್ಟಾನಗೊಳಿಸಲಾಗುತ್ತಿದೆ. ವಿಜ್ಞಾನಿ ಡಾ. ಮಂಜಪ್ಪ ಅವರನ್ನು ದಾವಣಗೆರೆ ಜಿಲ್ಲಾ ಸಂಯೋಜಕರಾಗಿ ನೇಮಕ ಮಾಡಲಾಗಿದೆ. ಅವರು ಜಿಲ್ಲೆಯಲ್ಲಿ ಎಂಟು ತಂತ್ರಜ್ಞಾನ ವಿಸ್ತರಣಾ ಕಾರ್ಯಕ್ರಮಗಳನ್ನು ನಡೆಸಲಿದ್ದಾರೆ.

ಈ ಚಟುವಟಿಕೆಯ ಭಾಗವಾಗಿ, ಆಗಸ್ಟ್ 5 ರಂದು ದಾವಣಗೆರೆ ತಾಲ್ಲೂಕಿನ ಕರಿಲಕ್ಕೆನಹಳ್ಳಿಯಲ್ಲಿ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. 43 ರೇಷ್ಮೆ ಬೆಳೆಗಾರರಿಗೆ ನೂತನ ತಂತ್ರಜ್ಞಾನಗಳು, ಉತ್ತಮ ಗುಣಮಟ್ಟದ ಮಲ್ಬರಿ ಸೊಪ್ಪನ್ನು ಉತ್ಪಾದಿಸಲು ರೈತರು ಅನುಸರಿಸಬೇಕಾದ ತಂತ್ರಜ್ಞಾನಗಳಾದ ಮಣ್ಣಿನ ಪರೀಕ್ಷೆ, ಹನಿ ನೀರಾವರಿ, ಸಾವಯವ ಗೊಬ್ಬರಗಳ ಬಳಕೆ,  ಹೊಸ ಹಿಪ್ಪುನೇರಳೆ ತಳಿ, ಹಿಪ್ಪುನೇರಳೆ  ಬೆಸಾಯ ಪದ್ದತಿ, ಹಿಪ್ಪುನೇರಳೆಗೆ ಮತ್ತು ರೇಷ್ಮೆ ಹುಳುವಿಗೆ ತಗುಲುವ ಪೀಡೆಗಳು ಮತ್ತು ರೋಗಗಳು, ಅವುಗಳ ನಿರ್ವಹಣೆ ವಿಷಯಗಳ ಕುರಿತು ಮಾಹಿತಿ ನೀಡಲಾಯಿತು.

ಆಗಸ್ಟ್ 6 ರಂದು ಹೊನ್ನಾಳಿ ತಾಲ್ಲೂಕಿನ ಮದನಬಾವಿಯ ಶ್ರೀ ಶೇಖರಪ್ಪ ರೇಷ್ಮೆ ಬೆಳೆಗಾರರ ತೋಟದಲ್ಲಿ ತಂತ್ರಜ್ಞಾನ ಪ್ರದರ್ಶನ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ 37 ರೈತರಿಗೆ ರೇಷ್ಮೆ ಹುಳು ಸಾಕಣೆ ಮನೆಯ ಸ್ವಚ್ಛತೆ, ನುಶಿ, ಬಿಳಿ ನೋಣ ಮತ್ತು ಥ್ರಿಪ್ಸ್ ನುಶಿ ಕ್ರಿಮಿನಾಶಕಗಳ ಸಿಂಪರಣೆ ವಿಧಾನ, ಮಣ್ಣು ಸಂಗ್ರಹಣೆಯ ವಿಧಾನ ಇತ್ಯಾದಿಗಳ ಪ್ರದರ್ಶನ ನೀಡಲಾಯಿತು.

ಕಾರ್ಯಕ್ರಮದಲ್ಲಿ ಸಿಎಸ್‍ಆರ್‍ಟಿಐ ವಿಜ್ಞಾನಿ ಡಾ. ಮಂಜಪ್ಪ, ರೇಷ್ಮೆ ಇಲಾಖೆಯ ಉಪನಿರ್ದೇಶಕ ಚಂದ್ರಪ್ಪ ಪಿ. ಎಲ್., ಮತ್ತು ಸಹಾಯಕ ನಿರ್ದೇಶಕ ಡಾ. ಶ್ರಿ ಹರ್ಷ ಎಸ್. ಎ. ರೇಷ್ಮೆ ನಿರೀಕ್ಷಕರಾದ ಪ್ರದೀಪ್.ಸಿ ಅವರು ರೇಷ್ಮೆ ತಂತ್ರಜ್ಞಾನಗಳ ಬಗ್ಗೆ ರೈತರಿಗೆ ವಿವರವಾಗಿ ಮಾಹಿತಿ ನೀಡಿದರು.

ಮೆರೆ ರೇಷ್ಮೆ ಮೆರೆ ಅಭಿಮಾನ್” ಅಭಿಯಾನ ರೈತರು ಮತ್ತು ಸಂಶೋಧನಾ ಸಂಸ್ಥೆಗಳ ನಡುವಿನ ಅಂತರವನ್ನು ಕಡಿಮೆ ಮಾಡುವುದರೊಂದಿಗೆ, ರೇಷ್ಮೆ ಕೃಷಿಯಲ್ಲಿ ನವೀನತೆಗಳನ್ನು ಪ್ರತ್ಯಕ್ಷವಾಗಿ ರೈತರ ಹೊಲಗಳಿಗೆ ತಲುಪಿಸುವ ಮಹತ್ವದ ಹೆಜ್ಜೆ ಇದಾಗಿದೆ.

ಇತ್ತೀಚಿನ ಸುದ್ದಿಗಳು

error: Content is protected !!