ರಾಮಜನ್ಮಭೂಮಿಯ ಹೋರಾಟದಲ್ಲಿ ಬಲಿದಾನವಾದ ಹುತಾತ್ಮರಿಗೆ ಡಿ.7 ರಂದು ವೆಂಕಟೇಶ್ವರ ವೃತ್ತದಲ್ಲಿ ಶ್ರದ್ಧಾಂಜಲಿ

ದಾವಣಗೆರೆ: ಶ್ರೀ ರಾಮಜನ್ಮಭೂಮಿ ಮಂದಿರ ರಥಯಾತ್ರೆಗೆ ಬಲಿದಾನವಾದ ಹುತಾತ್ಮರಿಗೆ ಡಿ.೬ ರಂದು ಬೆಳಿಗ್ಗೆ ೧೦ಕ್ಕೆ ನಗರದ ಬೇತೂರು ರಸ್ತೆಯ ವೆಂಕಟೇಶ್ವರ ವೃತ್ತದಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪಾಲಿಕೆ ಮಾಜಿ ಸದಸ್ಯ ಎ.ಆರ್ ರೇವಣಸಿದ್ದಪ್ಪ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀ ರಾಮಮಂದಿರ ನಿರ್ಮಾಣದ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಕಳೆದ ೩೧ ವರ್ಷದ ಹಿಂದೆ ರಾಮಜನ್ಮಭೂಮಿಯ ಹೋರಾಟದಲ್ಲಿ ಬಲಿದಾನವಾದ ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸಲಾಗುವುದು ಎಂದರು.
ರಾಮಜನ್ಮಭೂಮಿಯ ಹೋರಾಟದಲ್ಲಿ ದಾವಣಗೆರೆಯ ಎಂಟು ಜನರ ಬಲಿದಾನವಾಗಿತ್ತು. ಅವರ ಸ್ಮರಣಾರ್ಥವಾಗಿ ವೆಂಕಟೇಶ್ವರ ವೃತ್ತದಲ್ಲಿ ಸ್ಮಾರಕ ನಿರ್ಮಾಣ ಮಾಡಬೇಕಿದೆ. ಆದ್ದರಿಂದ ಶ್ರದ್ಧಾಂಜಲಿ ಕಾರ್ಯಕ್ರಮದ ನಂತರ ಸ್ಮಾರಕ ನಿರ್ಮಾಣ ಮಾಡಬೇಕೆಂದು ಆಗ್ರಹಿಸಿ ಮಹಾನಗರ ಪಾಲಿಕೆಗೆ, ಶಾಸಕರಿಗೆ ಸಂಸದರಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದರು.
ರಥಯಾತ್ರೆ ಪ್ರಾರಂಭಗೊಂಡ ಸ್ಥಳ ಬೇತೂರು ರಸ್ತೆಯ ವೆಂಕಟೇಶ್ವರ ವೃತ್ತ ಇಂದಿಗೂ ಚಿರಸ್ಮರಣೆಯಾಗಿದೆ. ಈ ಭಾಗದಲ್ಲಿ ಸ್ಮಾರಕ ನಿರ್ಮಾಣ ಮಾಡಬೇಕು ಎಂಬುದು ಸ್ಥಳೀಯರ ಅಭಿಪ್ರಾಯವಾಗಿದೆ. ಇಂದಿಗೂ ಕೂಡ ದಸರಾ ಹಾಗೂ ವಿಜಯದಶಮಿ ಹಬ್ಬದಲ್ಲಿ ಶೋಭಾಯಾತ್ರೆ ವೆಂಕಟೇಶ್ವರ ವೃತ್ತದಿಂದಲೇ ಪ್ರಾರಂಭಗೊಳ್ಳುತ್ತಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ರಮೇಶ್ ನಾಯ್ಕ್, ಪ್ರಭುಕಲ್ಬುರ್ಗಿ, ಗೌಳಿ ಲಿಂಗರಾಜ್ ಮತ್ತಿತರರಿದ್ದರು