ಶ್ರೀರಾಮುಲುಗೆ ಡಿಸಿಎಂ ಸ್ಥಾನ ಕೊಡುವಂತೆ ಕರ್ನಾಟಕ ಬಿ. ಶ್ರೀರಾಮುಲು ಯುವಪಡೆ ಒತ್ತಾಯ

ದಾವಣಗೆರೆ: ಹಿಂದುಳಿದ ವರ್ಗಗಳ ಅಹಿಂದ ನಾಯಕ ಬಿ. ಶ್ರೀರಾಮುಲು ಅವರಿಗೆ ಉಪಮುಖ್ಯಮಂತ್ರಿ ಸ್ಥಾನವನ್ನು ನೀಡದಿರುವುದನ್ನು ಕರ್ನಾಟಕ ಬಿ. ಶ್ರೀರಾಮುಲು ಯುವ ಪಡೆ ತೀವ್ರವಾಗಿ ಖಂಡಿಸಿದೆ.
ಪ್ರತಿ ಬಾರಿ ಬಿಜೆಪಿ ಶ್ರೀರಾಮುಲು ಅವರಿಗೆ ಮೂಗಿಗೆ ತುಪ್ಪ ಸವರಿದಂತೆ ನಟನೆ ಮಾಡಲಾಗುತ್ತಿದೆ. ಶ್ರೀರಾಮುಲು ಅವರನ್ನು ಪ್ರತಿ ಚುನಾವಣೆಯಲ್ಲಿಯೂ ಮತ ಗಳಿಕೆಗಾಗಿ ಹಾಗೂ ಪ್ರಚಾರದ ಉದ್ದೇಶಕ್ಕಾಗಿ ಬಳಸಿಕೊಂಡು, ಪಕ್ಷದ ವರಿಷ್ಠರು ಈ ರೀತಿಯ ಉನ್ನತ ಹುದ್ದೆಗಳನ್ನು ನೀಡುವಲ್ಲಿ ಅವರನ್ನು ನಿರ್ಲಕ್ಷಿಸಿರುವುದು ಸಮಂಜಸವಲ್ಲ ಎಂದು ಯುವ ಪಡೆಯ ರಾಜ್ಯಾಧ್ಯಕ್ಷ ಎನ್.ಹೆಚ್. ಹಾಲೇಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಬಾರಿಯ ಸಚಿವ ಸಂಪುಟದಲ್ಲಿ ಉಪ ಮುಖ್ಯಮಂತ್ರಿ ಸ್ಥಾನ ನೀಡುವುದಾಗಿ ಭರವಸೆ ನೀಡಿ ಕೊನೆ ಗಳಿಗೆಯಲ್ಲಿ ಶ್ರೀರಾಮುಲು ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನಿಡಬೇಕಾಗುತ್ತದೆ ಎಂಬ ಉದ್ದೇಶದಿಂದ ಡಿಸಿಎಂ ಸ್ಥಾನವನ್ನೇ ತೆಗೆದು ಹಾಕಿರುವುದು ವಿರೋಧನೀಯ ಎಂದಿದ್ದಾರೆ.
ಪದೇ ಪದೇ ಈ ರೀತಿಯ ಹಿಂದುಳಿದ ವರ್ಗಗಳ ನಾಯಕರಿಗೆ ನಡೆಯುವ ರಾಜಕೀಯ ತುಳಿತ ಸಹಿಸಲಸಾಧ್ಯವಾಗಿದ್ದು, ಕೂಡಲೇ ಬಿಜೆಪಿ ಪಕ್ಷದ ವರಿಷ್ಠರು ಪಕ್ಷದಲ್ಲಿ ಹಾಗೂ ರಾಜ್ಯದಲ್ಲಿನ ಶ್ರೀರಾಮುಲು ಅವರ ಸ್ಥಾನಮಾನಗಳನ್ನು ಗುರುತಿಸಿ ಕೂಡಲೇ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ಮತ್ತು ಸಚಿವ ಸಂಪುಟದಲ್ಲಿ ಉನ್ನತ ಖಾತೆಯನ್ನು ನೀಡಬೇಕೆಂದು ಆಗ್ರಹಿಸಿದರು.