ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ಗೆ ಸದಾ ಸಿಎಂ ಕುರ್ಚಿ ಮೇಲೆ ಕಣ್ಣು.!ಇದೇ ಚಿಂತೆಯಲ್ಲಿ ಅವರಿಗೆ ಹಗಲುರಾತ್ರಿ ನಿದ್ರೆ ಇಲ್ಲ – ಕೆ ಎಸ್ ಈಶ್ವರಪ್ಪ

ದಾವಣಗೆರೆ: ಅತ್ಯುತ್ತಮ ಕೆಲಸ ಮಾಡಿರುವುದರಿಂದ ಹಾನಗಲ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಶ್ರೀನಿವಾಸ ಮಾನೆ ಗೆದ್ದಿದ್ದಾರೆ. ನಮ್ಮ ಅಭ್ಯರ್ಥಿ ಕೆಲಸ ಮಾಡಿಲ್ಲ, ಅದಕ್ಕೆ ಸೋತಿದ್ದಾರೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ ತಮ್ಮ ಪಕ್ಷದ ಅಭ್ಯರ್ಥಿಯನ್ನೆ ಜರಿದಿದ್ದಾರೆ.
ದಾವಣಗೆರೆಯಲ್ಲಿ ಉಪಚುನಾವಣೆ ಫಲಿತಾಂಶ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಅಭ್ಯರ್ಥಿ ಸಾಕಷ್ಟು ಶ್ರಮ ಹಾಕಿ ಸಮಾಜ ಸೇವೆ ಮಾಡಿದ್ದಾರೆ. ಆದುದರಿಂದ ಅವರು ಗೆದ್ದಿದ್ದಾರೆ ಎಂದು ಹಾಡಿ ಹೊಗಳಿದರು.
ಮಾನೆ ಎರಡ್ಮೂರು ವರ್ಷದಿಂದ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಚುನಾವಣೆಯಲ್ಲಿ ಸೋಲು ಗೆಲುವು ಸಾಮಾನ್ಯ. ಸಿದ್ದರಾಮಯ್ಯ, ಇಂದಿರಾಗಾಂಧಿ ಸೋತಿರಲಿಲ್ವಾ? ಎಂದು ಪ್ರಶ್ನಿಸಿದ ಅವರು, ಹಾನಗಲ್ನಲ್ಲಿ ನಾವು ಸೋತಿದ್ದೇವೆ. ಸಿಂದಗಿಯಲ್ಲಿ ದಿಗ್ವಿಜಯ ಸಾಧಿಸಿದ್ದೇವೆ. ಎಲ್ಲ ಚುನಾವಣೆಯಲ್ಲೂ ಎಲ್ಲರೂ ಗೆಲ್ಲಲು ಸಾಧ್ಯವಿಲ್ಲ. ಹಾನಗಲ್ ಸೋಲಿನ ಬಗ್ಗೆ ಪರಾಮರ್ಶೆ ನಡೆಸುತ್ತೇವೆ ಎಂದರು.
ಸೋಲನ್ನಾಗಲಿ, ಗೆಲುವನ್ನಾಗಲಿ ಯಾರೊಬ್ಬರ ಮೇಲೆ ಹಾಕುವುದಿಲ್ಲ. ಭವಿಷ್ಯದ ಚುನಾವಣೆಯಲ್ಲಿ ತಪ್ಪುಗಳನ್ನು ತಿದ್ದಿಕೊಳ್ಳುತ್ತೇವೆ. ಉಪಚುನಾವಣೆ ಫಲಿತಾಂಶ ಭವಿಷ್ಯದ ಚುನಾವಣೆ ದಿಕ್ಸೂಚಿ ಅಲ್ಲ ಎಂದರು.
ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ 2023ರ ಚುನಾವಣೆ ನಡೆಯುತ್ತೆ ಇದರಲ್ಲಿ ಯಾವುದೇ ಅನುಮಾನವಿಲ್ಲ. ಇದನ್ನು ಕೇಂದ್ರದ ನಾಯಕರೇ ಸ್ಪಷ್ಟಪಡಿಸಿದ್ದಾರೆ. ಅವರಿಗಿಂತ ದೊಡ್ಡವನು ನಾನಲ್ಲ ಎಂದರು.
ಉಪಚುನಾವಣೆ ಫಲಿತಾಂಶ ಭವಿಷ್ಯದ ಚುನಾವಣೆಗೆ ದಿಕ್ಸೂಚಿ ಅಲ್ಲ. ಹಾನಗಲ್ ಫಲಿತಾಂಶವನ್ನು ಕಾಂಗ್ರೆಸ್ ದಿಕ್ಸೂಚಿ ಎಂದು ಪರಿಗಣಿಸಿದ್ರೆ ಸಿಂದಗಿ ಫಲಿತಾಂಶವನ್ನು ಹೇಗೆ ಪರಿಗಣಿಸಬೇಕು ಎಂದು ಕೇಳಿದರು.
ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ಗೆ ಸದಾ ಸಿಎಂ ಕುರ್ಚಿ ಮೇಲೆ ಕಣ್ಣು.ಇದೇ ಚಿಂತೆಯಲ್ಲಿ ಅವರಿಗೆ ಹಗಲುರಾತ್ರಿ ನಿದ್ರೆ ಇಲ್ಲ. ಕನಸಲ್ಲಿ ಮಾತ್ರ ಸಿಎಂ ಸ್ಥಾನ ಇಟ್ಟುಕೊಳ್ಳಲಿ. ಹೊರಗೆ ಬಂದ್ರೆ ಪರಸ್ಪರ ಕಿತ್ತಾಡ್ತಾರೆ ಭವಿಷ್ಯದಲ್ಲಿ ಅವರ ಗುಂಪುಗಾರಿಕೆ ಯಾವ ಮಟ್ಟಕ್ಕೆ ಹೋಗುತ್ತೆ ಅಂತ ಕಾದು ನೋಡಿ ಎಂದು ಈಶ್ವರಪ್ಪ ಭವಿಷ್ಯ ನುಡಿದರು.