ಸುಳ್ಳು ಸುದ್ದಿ, ಸಾಮಾಜಿಕ ಜಾಲತಾಣ ದುರ್ಬಳಕೆ ಮಾಡುವ ವ್ಯಕ್ತಿಗಳಿಗೆ ಶಿಕ್ಷೆ ನಿಶ್ಚಿತ – ದಾವಣಗೆರೆಯಲ್ಲಿ ಇಬ್ಬರ ವಿರುದ್ದ ಪ್ರಕರಣ ದಾಖಲು : ಎಸ್ ಪಿ ಹನುಮಂತರಾಯ

ದಾವಣಗೆರೆ: ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ಯಾರೊಬ್ಬರೂ ಸುಳ್ಳು ಸುದ್ದಿ ಹರಡುವ ಮೂಲಕ ಜನರಲ್ಲಿ ಗೊಂದಲ, ಆತಂಕ ಮೂಡಿಸಬಾರದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಹನುಮಂತರಾಯ ಮನವಿ ಮಾಡಿದ್ದಾರೆ.
ಇಲ್ಲಿನ ಎಸ್ಪಿ ಕಚೇರಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವರು ಹಳೇ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. ಇದರಿಂದ ಸಾರ್ವಜನಿಕರಿಗೆ ತಪ್ಪು ಸಂದೇಶ ರವಾನೆಯಾಗುತ್ತದೆ. ಆದ್ದರಿಂದ ಮಾಧ್ಯಮಗಳು ಹಳೇ ಫೋಟೋಗಳನ್ನು ಬಳಸಿ ತಪ್ಪು ಸಂದೇಶ ನೀಡುವ ಸುದ್ದಿಗಳನ್ನು ಪ್ರಕಟಿಸಬಾರದು. ಸತ್ಯ ಸಂಗತಿಗೆ ಹತ್ತಿರವಾಗಿರುವ ವಾಸ್ತವ ವರದಿಗಳನ್ನು ಮಾತ್ರ ಪ್ರಕಟಿಸಬೇಕು ಎಂದು ವಿನಂತಿಸಿದರು.
ಸುಳ್ಳು ಸುದ್ದಿ ಹರಡುವಂತಹ ತಪ್ಪು ಮಾಡಿದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿದ್ದೇವೆ. ಅಲ್ಲದೆ, ಕೆಲವು ವ್ಯಕ್ತಿಗಳು ದಂಡದ ರಸೀದಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ತಪ್ಪು ಸಂದೇಶ ರವಾನೆ ಮಾಡಿದ್ದಾರೆ. ಅವರ ವಿರುದ್ಧವೂ ಕ್ರಮ ಜರುಗಿಸುವುದು ನಿಶ್ಚಿತ.
ಸಂಕಷ್ಟದ ಈ ಸಂದರ್ಭದಲ್ಲಿ ಸಮಾಜದಲ್ಲಿ ತಪ್ಪು ಅಭಿಪ್ರಾಯ ರೂಪಿಸುವುದು, ಸುಳ್ಳು ಸಂದೇಶ ನೀಡುವುದು ಅಪರಾಧ. ಅಂತಹವರ ವಿರುದ್ಧ ವಿಪತ್ತು ನಿರ್ವಹಣೆ ಕಾಯ್ದೆಯಡಿ ಪ್ರಕರಣ ದಾಖಲಿಸುತ್ತೇವೆ ಎಂದು ಅವರು ಎಚ್ಚರಿಸಿದರು. ಲಾಕ್ಡೌನ್ ಸಂದರ್ಭದಲ್ಲಿ ಸಾರ್ವಜನಿಕರು ಅನಗತ್ಯವಾಗಿ ಸಂಚರಿಸಬಾರದು.112 ತುರ್ತು
ವಾಹನದಿಂದಲೂ ಸಾರ್ವನಿಕರಿಗೆ ವೈದ್ಯಕೀಯ ಸೇವೆ ದೊರೆಯಲಿದೆ. ವೈದ್ಯಕೀಯ ತುರ್ತು ಸಂದರ್ಭದಲ್ಲಿ 112 ಸಂಖ್ಯೆಗೆ ಕರೆ ಮಾಡಿದರೆ ನೆರವು ಸಿಗಲಿದೆ ಎಂದು ಅವರು ಭರವಸೆ ನೀಡಿದರು.
ಜಿಲ್ಲೆಯಲ್ಲಿ ಈವರೆಗೆ 48,820 ಮಾಸ್ಕ್ ಪ್ರಕರಣ ದಾಖಲಾಗಿವೆ. ಒಂದು ವರ್ಷದಲ್ಲಿ ಮಾಸ್ಕ್ ಪ್ರಕರಣಗಳಲ್ಲಿ 87,47,150 ರೂ. ದಂಡ ವಸೂಲು ಮಾಡಲಾಗಿದೆ. ರೆಮಿಡಿಸಿವಿರ್ ದುರ್ಬಳಕೆ ಮಾಡಿದ್ದ 2 ಪ್ರಕರಣ ದಾಖಲಿಸಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿ 13
ರೆಮಿಡಿಸಿವಿರ್ ವಾಯಲ್ಸ್ ವಶಪಡಿಸಿಕೊಳ್ಳಲಾಗಿದೆ. ಸಾಂಕ್ರಾಮಿಕ ರೋಗ ನಿಯಂತ್ರಣ ಕಾಯ್ದೆಯಡಿ 108 ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.