ಮಾರ್ಚ್ 15, 16ಕ್ಕೆ ದಾವಣಗೆರೆ ನಗರ ದೇವತೆ ಶ್ರೀದುರ್ಗಾಂಭಿಕಾ ದೇವಿ ಜಾತ್ರೆ.

ದಾವಣಗೆರೆ: ಮಧ್ಯ ಕರ್ನಾಟಕ ದಾವಣಗೆರೆಯ ಪ್ರಸಿದ್ದ ನಗರ ದೇವತೆ ಶ್ರೀದುರ್ಗಾಂಬಿಕಾ ದೇವಿಯ ಜಾತ್ರಾ ಮಹೋತ್ಸವ ಮುಂಬರುವ ಮಾರ್ಚ್ 15 ಮತ್ತು 16ರಂದು ನಡೆಯಲಿದೆ ಎಂದು ನಗರ ದೇವತೆ ಶ್ರೀದುರ್ಗಾಂಬಿಕಾ ದೇವಿ ದೇವಸ್ಥಾನದ ಅಧ್ಯಕ್ಷರೂ, ಶಾಸಕರಾದ ಡಾ.ಶಾಮನೂರು ಶಿವಶಂಕರಪ್ಪ ತಿಳಿಸಿದರು.
ಶ್ರೀದುರ್ಗಾಂಬಿಕಾ ದೇವಸ್ಥಾನದಲ್ಲಿ ಜಾತ್ರಾ ಮಹೋತ್ಸವದ ಅಂಗವಾಗಿ ಪ್ರಸಾದ ನಿಲಯದಲ್ಲಿ ಕರೆಯಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಮಾಹಿತಿ ನೀಡಿದ ಅವರು, ಫೆಬ್ರವರಿ 8ರಂದು ಮಂಗಳವಾರ ಜಾತ್ರಾ ಮಹೋತ್ಸವದ ಅಂಗವಾಗಿ ಹಂದರ ಕಂಬದ ಪೂಜೆ ನಡೆಯಲಿದೆ. ಮಾರ್ಚ್ 13ರ ಭಾನುವಾರ ಬೆಳಿಗ್ಗೆ ದೇವಿಗೆ ಪಂಚಾಮೃತ ಅಭಿಷೇಕ, ರಾತ್ರಿ ಕಂಕಣಧಾರಣೆ ಮಾಡಲಾಗುವುದು. ಅಲ್ಲದೇ ಸಾರು ಹಾಕಲಾಗುವುದು ಎಂದು ತಿಳಿಸಿದರು.
ಜಾತ್ರಾ ಮಹೋತ್ಸವಕ್ಕೆ ಸಂಬಂಧಪಟ್ಟಂತೆ ವಿವಿಧ ವ್ಯಾಪಾರಸ್ಥರು ಮಳಿಗೆ ಹಾಕುತ್ತಾರೆ. ಇದ್ದಕ್ಕಿದ್ದಂತೆ ರದ್ದು ಪಡಿಸಿದರೆ ಅವರಿಗೂ ತೊಂದರೆ ಆಗಲಿದೆ. ಇಲ್ಲವೇ ಸೋಂಕು ಹೆಚ್ಚಾದಲ್ಲಿ ಅದೆಲ್ಲವನ್ನೂ ಧರ್ಮದರ್ಶಿಗಳೇ ಎದುರಿಸಬೇಕಾದ ಪರಿಸ್ಥಿತಿ ಬರಲಿದೆ. ಅಲ್ಲದೇ ಕೊನೆ ಕ್ಷಣದಲ್ಲಿ ಎಷ್ಟೋ ಜಾತ್ರೆಗಳು ರದ್ದಾಗಿವೆ. ಕಾರಣ ಜಿಲ್ಲಾಡಳಿತದ ಜಿಲ್ಲಾಧಿಕಾರಿ, ಜಿಲ್ಲಾ ರಕ್ಷಣಾಧಿಕಾರಿ ಸೇರಿದಂತೆ ಅಧಿಕಾರಿಗಳ ಸಮಕ್ಷಮದಲ್ಲಿ ಮೊತ್ತೊಂದು ಸಭೆ ನಡೆಸಿ ಯಾವ ರೀತಿಯಲ್ಲಿ ಜಾತ್ರೆ ನಡೆಸಬೇಕೆಂದು ತೀರ್ಮಾನಿಸಲಾಗುವುದು ಎಂದರು.
ಮಾರ್ಚ್ 14ರ ಸೋಮವಾರ ಮತ್ತು 15ರ ಮಂಗಳವಾರ ದೇವಿಗೆ ವಿಶೇಷ ಪೂಜೆ ನಡೆಸಲಾಗುವುದು. 16ರಂದು ಬುಧವಾರ ಚರಗ ಕಾರ್ಯಕ್ರಮ ನಡೆಸಲಾಗುವುದು. ನಾಗರಾಜ್ ಜೋಯಿಸ್ ಸೂಚನೆಯಂತೆ ಈ ಎಲ್ಲಾ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಪುರೋಹಿತರಾದ ನಾಗರಾಜ್ ಜೋಯಿಸ್ ಮಾತನಾಡಿ, ರಾಜ್ಯದಲ್ಲಿ ಕೋವಿಡ್ ಸೋಂಕು ಕಡಿಮೆ ಇದೆ. ಸರ್ಕಾರದ ಮಾರ್ಗಸೂಚಿ ಪ್ರಕಾರ ದೇವಸ್ಥಾನದ ಧರ್ಮದರ್ಶಿಗಳಾಗಲೀ, ಅಧ್ಯಕ್ಷರಾಗಲೀ ಎಲ್ಲರೊಂದಿಗೆ ಚರ್ಚಿಸಿ ಜಾತ್ರೆ ಯಾವ ರೀತಿ ನಡೆಸಬೇಕೆಂದು ತೀರ್ಮಾನ ಕೈಗೊಳ್ಳಲಿದ್ದಾರೆ. ಸಂಕ್ರಾಮಿಕ ರೋಗವು ಯಾವಾಗ ಯಾರ ರೀತಿ ಇರುತ್ತದೆ ಎಂದು ಹೇಳಲು ಸಾಧ್ಯವಿಲ್ಲ ಎಂದರು.
ಪೂರ್ವಭಾವಿ ಸಭೆಯಲ್ಲಿ ಜಾತ್ರಾ ಮಹೋತ್ಸವಕ್ಕೆ ಸಂಬಂಧಪಟ್ಟಂತೆ ಹಲವಾರು ಸಲಹೆ, ಸೂಚನೆಗಳು ಬಂದವು. ಈ ವೇಳೆ ದೇವಸ್ಥಾನ ಜಾತ್ರಾ ಮಹೋತ್ಸವ ಸಮಿತಿಯ ಅಥಣಿ ವೀರಣ್ಣ, ಮೋತಿ ವೀರಣ್ಣ, ಧರ್ಮದರ್ಶಿ ಗೌಡ್ರ ಚನ್ನಬಸಪ್ಪ, ಬಿ.ಹೆಚ್.ವೀರಭದ್ರಪ್ಪ, ಎಲ್.ಡಿ.ಗೋಣೆಪ್ಪ, ಉಮೇಶ್ ಸಾಳಂಕಿ, ದೂಡಾ ಅಧ್ಯಕ್ಷ ದೇವರಮನಿ ಶಿವಕುಮಾರ್, ಮೇಯರ್ ಎಸ್.ಟಿ.ವೀರೇಶ್, ಎಲ್.ಎಂ.ಹನುಮಂತಪ್ಪ, ಹನುಮಂತರಾವ್ ಸಾಳಂಕಿ, ಎಎಸ್ಪಿ ಬಸರಗಿ ಇತರರು ಇದ್ದರು.