ದಾವಣಗೆರೆ ಮೇಯರ್ ಗದ್ದುಗೆ ವ್ಯಾಮೋಹಕ್ಕೆ ಅಂಕುಶ.! ಶಾಸಕರ ಪುತ್ರಿಗಾಗಿ ಮೇಯರ್ ಮೀಸಲಾತಿ ಗುದ್ದಾಟದಿಂದ ‘ಕೈ’ ಮೇಲು.!

ದಾವಣಗೆರೆ: ಕರ್ನಾಟಕ ಮುನ್ಸಿಪಲ್ ಕಾರ್ಪೊರೇಷನ್ಗಳ (ಚುನಾವಣೆ) (ತಿದ್ದುಪಡಿ) 2020 ರ ಮಾರ್ಗಸೂಚಿಗಳ ಅಡಿಯಲ್ಲಿ ರಾಜ್ಯದ ಮಹಾನಗರ ಪಾಲಿಕೆಗಳಿಗೆ ಸಂಬಂಧಿಸಿದಂತೆ ಇಪ್ಪತ್ನಾಲ್ಕನೇ (24) ಅವಧಿಗೆ ವಿವಿಧ ಮಿಸಲಾತಿ ವರ್ಗಗಳಿಗೆ ಮೇಯರ್ ಮತ್ತು ಉಪ ಮೇಯರ್ಗಳ ಚುನಾವಣೆಗಾಗಿ ಸರ್ಕಾರವು ನೂತನ ಮೀಸಲಾತಿ ಬಿಡುಗಡೆ ಮಾಡಿದೆ.
ದಾವಣಗೆರೆ ಮಹಾನಗರ ಪಾಲಿಕೆಗೆ ಮೇಯರ್ ಸ್ಥಾನ ಸಾಮಾನ್ಯ ಮಹಿಳೆ ಹಾಗೂ ಉಪ ಮೇಯರ್ ಸ್ಥಾನ ಬಿಸಿಎ ಮಹಿಳೆಗೆ ಮೀಸಲಾತಿ ಕಲ್ಪಿಸಿ ಸರ್ಕಾರ ಆದೇಶ ಹೊರಡಿಸಿತ್ತು ಇದೀಗ ಅದನ್ನ ಸರ್ಕಾರ ರದ್ದು ಮಾಡಿ ಮತ್ತೊಂದು ಆದೇಶ ಹೊರಡಿಸಿದೆ. ಇದರಿಂದ ದಾವಣಗೆರೆಯ ಬಿಜೆಪಿ ಶಾಸಕರ ಪುತ್ರಿಗೆ ವರದಾನವಾಗಬೇಕಿದ್ದ ಸ್ಥಾನ ಕಮಲದಿಂದ ಜಾರಿ ಕೈ ತೆಕ್ಕೆಗೆ ಹೊದಂತಾಗಿದೆ.
ಹೌದು ದಾವಣಗೆರೆ ಮಹಾ ನಗರ ಪಾಲಿಕೆಯಲ್ಲಿ ಈ ಹಿಂದೆ ಸಾಮಾನ್ಯ ವರ್ಗದ ಮೀಸಲಾತಿಯ ನಂತರ, ಪ್ರಸ್ತುತ 23 ನೇ ಅವಧಿಗೆ ಎಸ್.ಸಿ ಮೀಸಲಾತಿಗೆ ಅವಕಾಶ ಸಿಕ್ಕಿದ್ದು, ಮುಂದಿನ 24 ನೇ ಅವಧಿಗೆ ಮೇಯರ್ ಅಭ್ಯಾರ್ಥಿಗೆಂದು ಪ್ರವರ್ಗ ಎ ಮೀಸಲಾತಿ ಎಂದು ಸರ್ಕಾರದ ಆದೇಶ ಬರಬಹುದು ಎಂದು ಹಲವಾರು ರೀತಿಯ ಚರ್ಚೆಯ ವಿಷಯವಾಗಿತ್ತು ಮತ್ತು ಇದು ಸರ್ಕಾರದ ಉನ್ನತ ಮಟ್ಟದಲ್ಲಿ ನಿಗದಿಯಾಗಿತ್ತು. ಇನ್ನೇನು ಸರ್ಕಾರಿ ಅಧಿಸೂಚನೆ ಹೊರ ಹೊಮ್ಮುವುದು ಇದೇ ರೀತಿ ಎಂದು ರಾಜಕೀಯ ಮಟ್ಟದಲ್ಲಿ ಚರ್ಚೆಯಾಗಿತ್ತು. ಆದರೆ, ದಿನಾಂಕ 24-08-2022 ರ ನಗರಾಭಿವೃಧ್ಧಿ ಇಲಾಖೆಯಿಂದ ಮೇಯರ್ ಸಾಮಾನ್ಯ ಮಹಿಳೆ ಹಾಗೂ ಉಪ ಮೇಯರ್ ಬಿ.ಸಿ.ಎಂ.ಎ ಮಹಿಳೆ ಎಂದು ಹೊರಡಿಸಿದ ಅಧಿಸೂಚನೆ ಎಲ್ಲರಿಗೂ ಆಶ್ಚರ್ಯ ಉಂಟು ಮಾಡಿತ್ತು.
ಆದರೆ, ಈ ಅಧಿಸೂಚನೆಯನ್ನು ಪ್ರಶ್ನಿಸಿ ಕಾಂಗ್ರೆಸ್ ಪಕ್ಷದ ಪಾಲಿಕೆ ಸದಸ್ಯರಾದ ಸವಿತಾ ಹುಲ್ಲುಮನೆ ಗಣೇಶ್ ಇವರು ಹೈಕೋರ್ಟ್ ಮೇಟ್ಟಿಲೇರಿದ್ದರು.
ಈ ಮನವಿಯನ್ನ ಅವಲೋಕಿಸಿದ ಮಾನ್ಯ ನ್ಯಾಯಾಲಯ ಸರ್ಕಾರಕ್ಕೆ ಚಾಟಿ ಬೀಸಿತ್ತು ಮತ್ತು ಈ ಪಟ್ಟಿಯಲ್ಲಿರುವ ದೋಶಗಳನ್ನು ಸರಿಪಡಿಸಿ ಹೊಸ ಪಟ್ಟಿಯನ್ನು ಪ್ರಕಟಿಸುವಂತೆ ದಿನಾಂಕ 30-09-2022 ರವರೆಗೆ ಗಡವು ನೀಡಿತ್ತು. ಅದರಂತೆ, ದಿನಾಂಕ 29-09-2022 ರಂದು, ಸರ್ಕಾರದ ನಗರಾಭಿವೃಧ್ಧಿ ಇಲಾಖೆಯಿಂದ ಹೊಸ ಮೀಸಲಾತಿ ಪಟ್ಟಿ ಹೊರ ಬಂದಿದೆ. ಇದರಂತೆ 24 ನೇ ಅವಧಿಗೆ ಮೇಯರ್ ಎಸ್.ಟಿ ಹಾಗು ಉಪ ಮೇಯರ್ ಸಾಮಾನ್ಯ ಮಹಿಳೆ ಎಂದು ಪ್ರಕಟಿಸಲಾಗಿದ್ದು, ಇದರಿಂದ ಜಿಲ್ಲಾ ಬಿಜೆಪಿಗೆ ಭಾರಿ ಮುಖಭಂಗವಾಗಿದೆ.
ಈ ಹೊಸ ಅಧಿಸೂಚನೆಯಿಂದಾಗಿ ಕಾಂಗ್ರಸ್ ಪಕ್ಷದಲ್ಲಿ ಹರ್ಷದ ವಾತಾವರಣ ಶೃಷ್ಟಿಯಾಗಿದೆ. ಕಾಂಗ್ರೆಸ್ ಪಕ್ಷದಲ್ಲಿ ಐದು ಜನ ಎಸ್ ಟಿ ಸದಸ್ಯರಿದ್ದಾರೆ ಆದರೆ ಬಿಜೆಪಿ ಯಲ್ಲಿ ಯಾರೂ ಎಸ್.ಟಿ ಅಭ್ಯರ್ಥಿಯೇ ಇಲ್ಲದಿರುವುದರಿಂದ, ಕಾಂಗ್ರೆಸ್ ಗೆ ಈ ಬಾರಿ ಮೇಯರ್ ಗದ್ದುಗೆ ಯಾವುದೇ ಸ್ಪರ್ಧೆ ಇಲ್ಲದಂತೆ ದೊರೆಯುವಂತಿದೆ.
ಇದು ನ್ಯಾಯಕ್ಕೆ ಸಿಕ್ಕ ಜಯ ಎಂದಿರುವ ಕಾಂಗ್ರೆಸ್ ಸದಸ್ಯರು.
ಒಟ್ಟಾರೆಯಾಗಿ ಪುತ್ರಿಗೆ ಮೇಯರ್ ಗದ್ದುಗೆ ಕೊಡಿಸುವ ವ್ಯಾಮೋಹದಲ್ಲಿ, OBC ಅವರಿಗೆ ಶಾಸಕರು ಅನ್ಯಾಯಮಾಡಿದ್ದಾರೆ ಎಂದು ಸ್ವಪಕ್ಷದಲ್ಲಿ ಚರ್ಚೆ ಕೇಳಿಬಂದಿತ್ತು. ತಮ್ಮ ಕಾಲ ಮೇಲೆ ತಾವೆ ಕಲ್ಲು ಹಾಕಿಕೊಂಡ ದಾವಣಗೆರೆಯ ಬಿಜೆಪಿ ಶಾಸಕರು ಎಂದು ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಯಾಗುತ್ತಿದೆ.