ಪಂಚಾಕ್ಷರಿ ಹಾಗೂ ಡಾ.ಪುಟ್ಟರಾಜ ಗವಾಯಿಗಳ ಹುಟ್ಟುಹಬ್ಬ; ಫೆಬ್ರುವರಿ 2 ರಿಂದ ಮಾ.3 ರವರೆಗೆ ವೀರೇಶ್ವರ ಪುಣ್ಯಾಶ್ರಮದಲ್ಲಿ ರಾಜ್ಯಮಟ್ಟದ ಸಮೂಹ ಭಜನಾ ಸ್ಪರ್ಧೆ

ದಾವಣಗೆರೆ: ಶ್ರೀ ವೀರೇಶ್ವರ ಪುಣ್ಯಾಶ್ರಮ ರಾಜ್ಯ ಮಟ್ಟದ ಕನ್ನಡ ಸಮೂಹ ಭಜನಾ ಸಮಿತಿ ವತಿಯಿಂದ ಪಂಚಾಕ್ಷರಿ ಗವಾಯಿಗಳ ಮತ್ತು ಡಾ.ಪುಟ್ಟರಾಜ ಗವಾಯಿಗಳ ಹುಟ್ಟುಹಬ್ಬದ ಅಂಗವಾಗಿ ಫೆಬ್ರುವರಿ ೨ ರಿಂದ ಮಾ.೩ ರವರೆಗೆ ಒಂದು ತಿಂಗಳ ಕಾಲ ನಗರದ ಶ್ರೀ ವೀರೇಶ್ವರ ಪುಣ್ಯಾಶ್ರಮದ ಆವರಣದಲ್ಲಿರುವ ಶಿಲಾ ಮಂಟಪದಲ್ಲಿ ರಾಜ್ಯಮಟ್ಟದ ಸಮೂಹ ಭಜನಾ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಎ.ಎಚ್. ಶಿವಮೂರ್ತಿ ಸ್ವಾಮಿ ಹೇಳಿದರು.
ವೀರೇಶ್ವರ ಪುಣ್ಯಾಶ್ರಮದಲ್ಲಿ ಸುಮಾರು ೨.೫೦ ಕೋಟಿ ರು., ವೆಚ್ಚದಲ್ಲಿ ಪಂಡಿತ್ ಪುಟ್ಟರಾಜ ಗವಾಯಿಗಳ ಶಿಲಾನ್ಯಾಸ ನಿರ್ಮಿಸಲಾಗಿದ್ದು, ಮಾ೩ ರಂದು ಶಿಲಾನ್ಯಾಸ ಉದ್ಘಾಟನೆ ನಡೆಯಲಿದೆ. ಅಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಆಮಂತ್ರಿಸುವ ಯೋಜನೆಯಿದೆ ಎಂದರು.
ಭಜನಾ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದವರಿಗೆ ಪ್ರಥಮ ಬಹುಮಾನವಾಗಿ ೫೦ಸಾವಿರ ನಗದು, ದ್ವಿತೀಯ ೪೦ ಸಾವಿರ, ತೃತೀಯ ೩೦ ಸಾವಿರ, ನಾಲ್ಕನೇ ಬಹುಮಾನ ೨೫ ಸಾವಿರ, ಐದನೇ ಬಹುಮಾನ ೨೦ ಸಾವಿರ, ಆರನೇ ಬಹುಮಾನ ೧೫ ಸಾವಿರ, ಏಳನೇ ಬಹುಮಾನ ೧೦ ಸಾವಿರ, ಎಂಟನೇ ಬಹುಮಾನ ೫ಸಾವಿರ ಹಾಗೂ ಹತ್ತು ತಂಡಗಳಿಗೆ ತಲಾ ೩ಸಾವಿರ ರು., ನಂತೆ ಸಮಾಧಾನಕರ ಪುರಸ್ಕಾರ ನೀಡಲಾಗುವುದು ಎಂದು ವಿವರಿಸಿದರು.
ಭಜನಾ ಸ್ಪರ್ಧಿಗಳಿಗೆ ಮತ್ತು ಪ್ರೇಕ್ಷಕರಿಗೂ ಬೆಳಿಗ್ಗೆ ಮತ್ತು ಮಧ್ಯಾಹ್ನ ಉಚಿತ ಪ್ರಸಾದ ವ್ಯವಸ್ಥೆ ಇದೆ. ಅಂದು ಫೆಬ್ರುವರಿ ೨ ಮತ್ತು ಮಾರ್ಚ್ ೩ ರವರೆಗೆ ೧ತಿಂಗಳ ಕಾಲ ಪ್ರತಿದಿನ ಭಜನಾ ಸ್ಪರ್ಧೆಯಲ್ಲಿ ಭಾಗವಹಿಸುವವರು ೫ನೂರು ರು., ನೀಡಿ ಹೆಸರು ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ಮೊಬೈಲ್ ನಂಬರ್ ೬೩೬೦೦೫೮೯೨೬, ೯೪೮೦೧೭೬೬೦೧ ಮತ್ತು ೯೫೩೮೭೩೨೭೭೭ ಈ ಮೊಬೈಲ್ ಸಂಖ್ಯೆಗಳಿಗೆ ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಪದಾಧಿಕಾರಿಗಳಾದ ಗಣೇಶ್ ಶೆಣೈ, ಎ. ಕೊಟ್ರಪ್ಪ ಕಿತ್ತೂರು, ಬಸವನಗೌಡ, ಜೆ.ಎನ್. ಕರಿಬಸಪ್ಪ ಜಾಲೀಮರದ ಇದ್ದರು.