ಎಸ್‍ಟಿಪಿಐ ಉಪಕೇಂದ್ರ ಏಪ್ರಿಲ್ ಮೊದಲ ವಾರದಲ್ಲಿ ಉದ್ಘಾಟನೆಗೆ ಸಿದ್ಧಗೊಳಿಸಲು ಸೂಚನೆ

stpi sub center

ದಾವಣಗೆರೆ: ದಾವಣಗೆರೆಯಲ್ಲಿ ಸಾಫ್ಟ್‌ವೇರ್ ಟೆಕ್ನಾಲಜಿಸ್ ಪಾರ್ಕ್ ಆಫ್ ಇಂಡಿಯಾದ ಉಪಕೇಂದ್ರ ಪ್ರಾರಂಭಕ್ಕೆ ಸಿದ್ಧತೆಗಳು ಪ್ರಾರಂಭಗೊಂಡಿದ್ದು, ಏಪ್ರಿಲ್ ಮೊದಲ ವಾರದೊಳಗೆ ಉಪಕೇಂದ್ರವು ಉದ್ಘಾಟನೆಗೆ ಲಭ್ಯವಾಗುವಂತೆ ಮಾಡಲು ಸಂಸದ ಡಾ.ಜಿ.ಎಂ.ಸಿದ್ದೇಶ್ವರ ಸೂಚನೆ ನೀಡಿದರು.

ಕೋವಿಡ್ ಪಾಸಿಟಿವ್ ಆದ ಕಾರಣ ಜಿಎಂಐಟಿ ಅತಿಥಿ ಗೃಹದಲ್ಲಿ ಐಸೋಲೇಷನ್‍ನಲ್ಲಿರುವ ಸಂಸದರು, ದಾವಣಗೆರೆ ಜೆ.ಹೆಚ್.ಪಟೇಲ್ ನಗರದಲ್ಲಿನ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ ಕ್ಯಾಂಪಸ್‍ನಲ್ಲಿ ಸಿದ್ಧವಾಗುತ್ತಿರುವ ಎಸ್‍ಟಿಪಿಐ ಉಪಕೇಂದ್ರದ ಕುರಿತು ಅಧಿಕಾರಿಗಳೊಂದಿಗೆ ಮಾಹಿತಿ ಪಡೆದುಕೊಂಡರು.

ಸಂಸತ್ ಅಧಿವೇಶನ ಮುಗಿದ ಕೂಡಲೆ ಅಂದರೆ ಏಪ್ರಿಲ್ ಮೊದಲ ವಾರದಲ್ಲಿ ಉದ್ಘಾಟನೆಗೆ ಎಸ್‍ಟಿಪಿಐ ಉಪಕೇಂದ್ರ ಲಭ್ಯವಾಗಬೇಕು.  ಈ ನಿಟ್ಟಿನಲ್ಲಿ ಸಿದ್ದತೆಗಳನ್ನು ಸಮರೋಪಾದಿಯಲ್ಲಿ ಕೈಗೊಳ್ಳಬೇಕು ಎಂದರು.

ಕೇಂದ್ರ ಸರ್ಕಾರದ ಎಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯದ ವತಿಯಿಂದ ದಾವಣಗೆರೆಗೆ ಸೆಂಟರ್ ಆಫ್ ಎಕ್ಸಲೆನ್ಸ್ ಕೇಂದ್ರ ತರಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ಈಗಾಗಲೇ ಸಾಫ್ಟ್‍ವೇರ್ ಟೆಕ್ನಾಲಜಿ ಪಾರ್ಕ್ ಅಫ್ ಇಂಡಿಯಾದ ಉಪಕೇಂದ್ರ ಏಪ್ರಿಲ್ ತಿಂಗಳಲ್ಲಿ ಉದ್ಘಾಟನೆಯಾಗಿ ಕಾರ್ಯ ಪ್ರಾರಂಭ ಮಾಡಲಿದೆ. ಇದರ ಜೊತೆಗೆ ಸೆಂಟರ್ ಆಫ್ ಎಕ್ಸಲೆನ್ಸ್ ಕೇಂದ್ರವನ್ನೂ ಸಹ ತರಲು ಪ್ರಸ್ಥಾವನೆ ಸಿದ್ದಪಡಿಸಲು ಸೂಚನೆ ನೀಡಿದ್ದೇನೆ.

ಎಸ್.ಟಿ.ಪಿ.ಐ. ಬೆಂಗಳೂರಿನ ಹಿರಿಯ ನಿರ್ದೇಶಕರಾದ ಶೈಲೇಂದ್ರ ತ್ಯಾಗಿಯವರು ಪ್ರಸ್ಥಾವನೆ ಸಿದ್ದಪಡಿಸಲು ಸಹಮತ ವ್ಯಕ್ತಪಡಿಸಿದ್ದಾರೆ. ಉದಯೋನ್ಮುಖ ಸ್ಟಾರ್ಟ್‍ಆಫ್‍ಗಳಿಗೆ ಮೂಲಸೌಕರ್ಯ, ಸಂಪನ್ಮೂಲಗಳು, ತರಬೇತಿ, ಮಾರ್ಗದರ್ಶನ, ತಂತ್ರಜ್ಞಾನ ಬೆಂಬಲ ಮತ್ತು ಧನಸಹಾಯವನ್ನು ಒದಗಿಸುವ ಗುರಿಯೊಂದಿಗೆ ಸೆಂಟರ್ ಆಪ್ ಎಕ್ಸಲೆನ್ಸ್ ಸ್ಥಾಪನೆ ಮಾಡುವ ಉದ್ದೇಶವಿದೆ ಎಂದು ಹೇಳಿದರು.

ಬಳಿಕ ಮಾತನಾಡಿ, ದಾವಣಗೆರೆ ಜಿಲ್ಲೆಯಲ್ಲಿ ಎಸ್‍ಟಿಪಿಐ ಉಪಕೇಂದ್ರ ಪ್ರಾರಂಭವಾಗಬೇಕೆಂಬುದು ಜಿಲ್ಲೆಯ ಜನರ ಬಹುದಿನಗಳ ಕನಸು. ಇದೀಗ ನನಸಾಗುವ ಹಂತಕ್ಕೆ ಬಂದಿರುವುದು ಸಂತಸ ತಂದಿದೆ.  ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ ಕ್ಯಾಂಪಸ್‍ನಲ್ಲಿ ತಾತ್ಕಾಲಿಕವಾಗಿ ಎಸ್‍ಟಿಪಿಐ ಉಪಕೇಂದ್ರದ ಪ್ರಾರಂಭಕ್ಕೆ ಸಿದ್ಧತಾ ಕಾರ್ಯ ಭರದಿಂದ ಸಾಗಿದೆ.

ಎಸ್‍ಟಿಪಿಐ ಕೇಂದ್ರ ಪ್ರಾರಂಭವಾದಲ್ಲಿ, ಹಲವು ಸಾಫ್ಟ್‍ವೇರ್ ಕಂಪನಿಗಳು, ಆ್ಯಪ್ ಮೂಲಕ ಕಾರ್ಯ ನಿರ್ವಹಿಸುವ ಕಂಪನಿಗಳು ಜಿಲ್ಲೆಯತ್ತ ಮುಖಮಾಡಲಿವೆ. ಹೀಗಾಗಿ ಜಿಲ್ಲೆಯಲ್ಲಿ ಐಟಿ ಉದ್ಯಮ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಗಳಾಗಲಿವೆ ಎಂದು ಹೇಳಿದರು.

 

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!