ಅಪ್ಪಿಕೊಂಡೇ ಪ್ರಾಣಬಿಟ್ಟ ಕುಚುಕು ಗೆಳೆಯರು ಈಜಲು ಹೋಗಿ ಸಾವನ್ನಪ್ಪಿದ್ದ ವಿದ್ಯಾರ್ಥಿಗಳು

ಅಪ್ಪಿಕೊಂಡೇ ಪ್ರಾಣಬಿಟ್ಟ ಕುಚುಕು ಗೆಳೆಯರು ಈಜಲು ಹೋಗಿ ಸಾವನ್ನಪ್ಪಿದ್ದ ವಿದ್ಯಾರ್ಥಿಗಳು

ಹೊಳಲ್ಕೆರೆ: ಜೀವದ ಗೆಳೆಯರಾಗಿದ್ದ ಈ ಮೂವರು ಗುಂಡಿಕೆರೆಯಲ್ಲಿ ಒಬ್ಬರನ್ನೊಬ್ಬರು ಅಪ್ಪಿಕೊಂಡೇ ಕೊನೆಯುಸಿರೆಳೆದೆ ಹೃದಯವಿದ್ರಾವಕ ಘಟನೆ ಇದು.
ತಾಲ್ಲೂಕಿನ ನಂದನ ಹೊಸೂರಿನ ಕೆರೆಯಲ್ಲಿ ಮಂಗಳವಾರ ಈಜಲು ಹೋಗಿ ಈ ಸ್ನೇಹಿತರು ಸಾವನ್ನಪ್ಪಿದ್ದಾರೆ.
ಮೂವರೂ ದ್ವಿತೀಯ ಪಿಯುಸಿಯ ಸಹಪಾಠಿಗಳು. ಐದು ವಿಷಯಗಳ ವಾರ್ಷಿಕ ಪರೀಕ್ಷೆ ಬರೆದ್ದ ಅವರು ಬುಧವಾರ (ಮಾರ್ಚ್ 29)ರಂದು ಸಮಾಜಶಾಸ್ತ್ರ ವಿಷಯದ ಕೊನೆಯ ಪರೀಕ್ಷೆ ಬರೆಯಬೇಕಿತ್ತು. ಅದೊಂದು ವಿಷಯದ ಪರೀಕ್ಷೆ ಬರೆದಿದ್ದರೆ ಮುಂದೆ ಪದವಿ ಕಾಲೇಜಿಗೆ ಹೋಗಬೇಕಿತ್ತು. ಅಷ್ಟರಲ್ಲಿ ವಿಧಿಯ ಆಟ್ಟಹಾಸಕ್ಕೆ ಸಿಲುಕಿ ಇಹಲೋಕ ತ್ಯಜಿಸಿದ್ದಾರೆ.
ಕಣಿವೆ ಜೋಗಿಹಳ್ಳಿಯ ಟಿ.ಎಸ್. ಮನೋಜ್‌ನ ತಂದೆ–ತಾಯಿ ತರಕಾರಿ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ‘ಮಗ ಚೆನ್ನಾಗಿ ಓದಿ ನಮಗೆ ಆಸರೆಯಾಗುತ್ತಾನೆ’ ಎಂದು ನಂಬಿ ಜೀವನ ನಡೆಸುತ್ತಿದ್ದರು. ಮಗನ ಆಸೆಗಳಿಗೆ ತಣ್ಣೀರು ಎರಚುತ್ತಿರಲಿಲ್ಲ. ಪ್ರೀತಿಯ ಮಗನಾಗಿದ್ದ ಮನೋಜ್ ಕೇಳಿದ್ದನ್ನೆಲ್ಲ ಕೊಡಿಸುತ್ತಿದ್ದರು. ಆದರೆ ವಿಧಿಯ ಆಟಕ್ಕೆ ಹೆತ್ತವರು ಕನಸು ಕಮರಿ ಹೋಗಿದೆ. ಮಗನನ್ನು ಕಳೆದುಕೊಂಡು ಹೆತ್ತವರ ರೋದನ ಹೃದಯ ಕಲಕುವಂತಿತ್ತು.
ಹೊರಕೆರೆ ದೇವರಪುರದ ಎಂ.ಸಂಜಯ್ ತಂದೆ ಟೇಲರ್ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಾರೆ. 9ನೇ ತರಗತಿಯವರೆಗೆ ಬೆಂಗಳೂರಿನಲ್ಲಿ ಓದಿದ್ದ ಸಂಜಯ್ ಮೂರು ವರ್ಷಗಳ ಹಿಂದೆ ಸ್ವಂತ ಗ್ರಾಮದ ಕಾಲೇಜಿಗೆ ಸೇರಿದ್ದ. ಕಾಲೇಜಿನಲ್ಲಿ ಗೆಳೆಯರೊಂದಿಗೆ ಖುಷಿಯಾಗಿರುತ್ತಿದ್ದ ಸಂಜಯ್ ಇನ್ನು ನೆನಪು ಮಾತ್ರ.
‘ದೇವರ ಕಾರ್ಯಕ್ಕೆಂದು ಚನ್ನಗಿರಿ ಸಮೀಪದ ಅಮ್ಮನ ಗುಡ್ಡಕ್ಕೆ ಮನೆಯವರೆಲ್ಲ ಹೋಗಿದ್ದೆವು. ನಾಳೆ ಪರೀಕ್ಷೆ ಇದೆ ಎಂದು ಮಗನನ್ನು ಬಿಟ್ಟು ಹೋಗಿದ್ದೆವು. ಅವನನ್ನೂ ಕರೆದುಕೊಂಡು ಹೋಗಿದ್ದರೆ ಮಗ ಬದುಕಿರುತ್ತಿದ್ದ. ವಯಸ್ಸಿಗೆ ಬಂದ ಮಗನನ್ನು ಮಣ್ಣಿಗೆ ಹೇಗೆ ಇಡಲಿ’ ಎಂದು ನಂದನಹೊಸೂರಿನ ಗೊಲ್ಲರಹಟ್ಟಿಯ ಟಿ. ಗಿರೀಶ್ ಅವರ ತಂದೆ ತಿಮ್ಮೇಶ್ ದುಃಖ ತೋಡಿಕೊಂಡರು.
‘ನಮ್ಮ ಕಾಲೇಜಿನ ಮೂವರು ವಿದ್ಯಾರ್ಥಿಗಳು ಒಂದೇ ದಿನ ಸಾವನ್ನಪ್ಪಿರುವ ಘಟನೆಯಿಂದ ಮನಸ್ಸು ಭಾರವಾಗಿದೆ. ನಾಳೆ ಈ ಮೂವರೂ ಕೊನೆಯ ಪರೀಕ್ಷೆ ಬರೆಯಬೇಕಿತ್ತು. ಅಷ್ಟರಲ್ಲಿ ದುರಂತ ನಡೆದಿದೆ. ವಿದ್ಯಾರ್ಥಿಗಳನ್ನು ಕಳೆದುಕೊಂಡಿರುವುದು ನಮ್ಮ ಕಾಲೇಜಿನ ಎಲ್ಲ ವಿದ್ಯಾರ್ಥಿಗಳು, ಉಪನ್ಯಾಸಕರು ಹಾಗೂ ಸಿಬ್ಬಂದಿಗೆ ನೋವು ತಂದಿದೆ’ ಎಂದು ಎಸ್‌ಎಲ್‌ಎಸ್‌ಎಸ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ರಂಗಸ್ವಾಮಿ ನೋವಿನಿಂದ ನುಡಿದರು.
‘ಬಿಸಿಲು ಹೆಚ್ಚಿದ್ದುದರಿಂದ ಮೂವರು ಗೆಳಯರೂ ನೀರಿಗೆ ಇಳಿದರು. ನಾನು ದಡದಲ್ಲಿ ಕುಳಿತು ಮೊಬೈಲ್ ನೋಡುತ್ತಿದ್ದೆ. ಕ್ಷಣಾರ್ಧದಲ್ಲಿ ಮೂವರೂ ಕಾಣೆಯಾದರು. ಕೂಗಿದರೂ ಮೇಲೆ ಏಳಲಿಲ್ಲ. ತಕ್ಷಣವೇ ಗ್ರಾಮದ ಜನರಿಗೆ ಫೋನ್ ಮಾಡಿ ವಿಷಯ ತಿಳಿಸಿದೆ. ಸ್ವಲ್ಪ ಹೊತ್ತಿಗೆ ಮೊದಲು ಜತೆಗಿದ್ದ ಗೆಳೆಯರು ಕಣ್ಮರೆಯಾಗಿದ್ದನ್ನು ನೋಡಿ ಅಳು ತಡೆಯಲಾಗಲಿಲ್ಲ’ ಎಂದು ದಡದಲ್ಲಿ ಕುಳಿತಿದ್ದ ವಿದ್ಯಾರ್ಥಿ ಜೀವನ್ ಅಳಲು ತೋಡಿಕೊಂಡನು.
ಗುಂಡಿಕೆರೆ ಗ್ರಾಮದಿಂದದೂರದಲ್ಲಿ ಇದ್ದು, ನೀರು ಸ್ವಚ್ಛವಾಗಿದೆ. ಗುಡ್ಡಗಳ ಮಧ್ಯೆ ಜಲಾಶಯದಂತೆ ಗೋಚರಿಸುವ ಕೆರೆ ಸುಮಾರು 30 ಅಡಿ ಆಳವಿದೆ. ಬಿಸಿಲಿನ ಬೇಗೆ ಹೆಚ್ಚಿದ್ದರಿಂದ ಸುತ್ತಲಿನ ಗ್ರಾಮಗಳ ಯುವಕರು, ವಿದ್ಯಾರ್ಥಿಗಳು ಮಧ್ಯಾಹ್ನ ಈಜಲು ಹೋಗುತ್ತಾರೆ. ಹೊರಕೆರೆ ದೇವರಪುರ ಕಾಲೇಜಿನ ನಾಲ್ವರು ವಿದ್ಯಾರ್ಥಿಗಳು ಈಜಲು ಹೋಗಿದ್ದು, ದಡದಲ್ಲಿ ಜೀವನ್ ಎಂಬ ವಿದ್ಯಾರ್ಥಿಯನ್ನು ಕೂರಿಸಿ ಮೂವರು ಕೆರೆಗೆ ಇಳಿದಿದ್ದಾರೆ. ಈಜಲು ಬಾರದೇ ಮೂವರೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!