ಸಾರ್ವಜನಿಕ ಸ್ಥಳದಲ್ಲಿ ಪಿಡಿಒ ಅಮಾನತಿಗೆ ಸೂಚಿಸಿದ ಸಚಿವ ಬೈರತಿ ಬಸವರಾಜ್

IMG-20210806-WA0064

ದಾವಣಗೆರೆ: ಹರಿಹರ ತಾಲ್ಲೂಕಿನ ಹಿರೇಹಳ್ಳದ ಕೊಂಡಜ್ಜಿ ಹಾಗೂ ಗಂಗನಹರಸಿ ಸಂಪರ್ಕ ಸೇತುವೆ ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ಕೊಚ್ಚಿ ಹೋಗಿ ಗ್ರಾಮಗಳ ನಡುವೆ ಸಂಪರ್ಕ ಕಡಿದು ಹೋಗಿದ್ದು, ಅದರ ಮೇಲ್ಸೇತುವೆ ಪುನರ್ ನಿರ್ಮಾಣಕ್ಕೆ ರೂ.2 ಕೋಟಿ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಉಸ್ತುವಾರಿ ಸಚಿವ ಬಿ.ಎ.ಬಸವರಾಜ ತಿಳಿಸಿದರು.

ಹರಿಹರ ತಾಲ್ಲೂಕಿನ ಕೊಂಡಜ್ಜಿ ಗ್ರಾಮದ ಮಳೆ ಹಾನಿ ಪ್ರದೇಶಗಳಿಗೆ ಹಾಗೂ ನೆರೆ ಸಂತ್ರಸ್ತರ ಮನೆಗಳಿಗೆ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಹಿರೇಹಳ್ಳದ ಕೊಂಡಜ್ಜಿ ಹಾಗೂ ಗಂಗನಹರಸಿ ಸಂಪರ್ಕ ಸೇತುವೆ ಪುನರ್ ನಿರ್ಮಾಣದೊಂದಿಗೆ, ಈ ಮಾರ್ಗದ ರಸ್ತೆಗಳನ್ನು ಸುಧಾರಣೆ ಮಾಡಬೇಕಿದೆ. ಹೊಸ ಸೇತುವೆ ನಿರ್ಮಾಣಕ್ಕೆ ಅಂದಾಜು ವೆಚ್ಚ ತಯಾರಿಸಿ ಕೂಲಂಕಶವಾಗಿ ಅಧ್ಯಯನ ನಡೆಸಿ ವರದಿ ನೀಡಬೇಕು ಎಂದು ಇಂಜಿನಿಯರಿAಗ್‌ಗಳಿಗೆ ಸೂಚಿಸಿದರು.

ಗ್ರಾಮಸ್ಥ ಕಿರಣ್ ಕುಮಾರ್ ಮಾತನಾಡಿ, ಮಳೆ ನೀರಿನಿಂದ ಸೇತುವೆ ಕೊಚ್ಚಿ ಹೋಗಿದ್ದರಿಂದ ರೈತರ ಹೊಲ, ಗದ್ದೆಗಳಿಗೆ ಹೋಗಲು ಹೆಚ್ಚುವರಿಯಾಗಿ 5 ಕಿ.ಮೀ ಸುತ್ತಿಕೊಂಡು ಬರುವಂತಾಗಿದೆ. ಇತ್ತೀಚೆಗೆ ಜಿಲ್ಲಾಧಿಕಾರಿಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿದ್ದು, ಹೊಸ ಸೇತುವೆ ನಿರ್ಮಾಣ ಆಗುವವರೆಗೂ ತಾತ್ಕಾಲಿಕ ಸೇತುವೆ ನಿರ್ಮಾಣಕ್ಕೆ ಸೂಚನೆ ನೀಡಿದ್ದಾರೆ. ಇದೀಗ ಮೇಲ್ಸೇತುವೆ ನಿರ್ಮಾಣಕ್ಕೆ ಶಾಶ್ವತ ಪರಿಹಾರ ದೊರಕಿದಂತಾಗಿದ್ದು ಗ್ರಾಮಸ್ಥರ ಪಾಲಿಗೆ ಖುಷಿ ತಂದಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ನಂತರ ನೆರೆ ಪೀಡಿತ ಸಂತ್ರಸ್ತರ ಮನೆಗೆ ಭೇಟಿ ನೀಡಿ ಅಳಲನ್ನು ಆಲಿಸಿದ ಸಚಿವರು, ರಾಜ್ಯ ಸರ್ಕಾರದಿಂದ ಪರಿಹಾರ ಒದಗಿಸಲಾಗುವುದು. ಮನೆಯನ್ನು ಇನ್ನೂ ಚೆನ್ನಾಗಿ ನಿರ್ಮಿಸಿಕೊಳ್ಳಿ ಎಂದು ಭರವಸೆ ನೀಡಿದರು.
ಹಾಗೂ ಅತಿವೃಷ್ಟಿ ಹಾಗೂ ಪ್ರವಾಹದಿಂದ ಸಂಪೂರ್ಣವಾಗಿ ಹಾನಿಯಾದ ಮನೆಗಳಿಗೆ ಸರ್ಕಾರದ ಮಾರ್ಗಸೂಚಿಯಂತೆ ರೂ.5 ಲಕ್ಷ ಮತ್ತು ಶೇ.70 ರಷ್ಟು ದುರಸ್ಥಿ ಹೊಂದಿದ ಮನೆಗಳಿಗೆ ರೂ.3 ಲಕ್ಷ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು.

ಈ ವೇಳೆ ಗ್ರಾಮದ ಜಗಲಿಕಟ್ಟೆ ಮೇಲೆ ಮಾಸ್ಕ್ ಧರಿಸದೇ ಕುಳಿತು ಮಾತನಾಡುತ್ತಿದ್ದ ವ್ಯಕ್ತಿಗಳ ಬಳಿ ಹೋಗಿ ಮಾತನಾಡಿದ ಸಚಿವರು, ಗ್ರಾಮಕ್ಕೆ ಹೊಸ ಸೇತುವೆ ನಿರ್ಮಾಣ ಮಾಡಲು ಹಾಗೂ ರಸ್ತೆಗಳ ಸುಧಾರಣೆ ಮಾಡಲು ಸೂಚನೆ ನೀಡಲಾಗಿದೆ ಎಂದು ಮಾಹಿತಿ ನೀಡಿದ ಅವರು, ಕೊರೊನ ಸೋಂಕು ಇನ್ನೂ ಮುಗಿದಿಲ್ಲ, ಆದ್ದರಿಂದ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡರೆ ಬರುವ 3 ನೇ ಅಲೆಯನ್ನು ತಡೆಗಟ್ಟಬಹುದು ಎಂದು ಜಾಗೃತಿ ಮೂಡಿಸಿದರು.

ಈ ಸಂದರ್ಭದಲ್ಲಿ ದೂಢಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಬಿ. ರಿಷ್ಯಂತ್, ಜಿ.ಪಂ. ಸಿಇಓ ವಿಜಯ ಮಹಾಂತೇಶ, ತಹಶೀಲ್ದಾರ್ ರಾಮಚಂದ್ರಪ್ಪ, ಇಓ ಗಂಗಾಧರ್, ಗಣ್ಯರಾದ ವೀರೇಶ್ ಅನಗವಾಡಿ, ಸೇರಿದಂತೆ ತಾಲ್ಲೂಕು ಅಧಿಕಾರಿಗಳು ಪಾಲ್ಗೊಂಡಿದ್ದರು.

ಸಾರ್ವಜನಿಕ ಸ್ಥಳದಲ್ಲೆ ಪಿಡಿಒ ಅಮಾನತಿಗೆ ಸೂಚನೆ : ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಗ್ರಾಮದ ಸ್ವಚ್ಛತೆ ಇಲ್ಲದಿರುವುದನ್ನು ಕಂಡು ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ಪಿಡಿಒ ರಾಮಚಂದ್ರ ಅವರನ್ನು ತಕ್ಷಣ ಅಮಾನತುಗೊಳಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿ.ಪಂ. ಸಿಇಒ ಗೆ ಆದೇಶ ನೀಡಿದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!