75 ನೇ ಅಮೃತಮಹೊತ್ಸವದ ಪಾರ್ಕಿಂಗ್ ವ್ಯವಸ್ಥೆಯಲ್ಲಿ ಪೊಲೀಸ್ ಇಲಾಖೆ ವೈಪಲ್ಯ.! ಯಾವುದಾದರೂ ರಾಜಕೀಯ ಪ್ರಭಾವಕ್ಕೆ ಒಳಗಾಗಿ ಹೀಗೆ ಮಾಡಿದ್ದಾರೋ ಗೊತ್ತಿಲ್ಲ – ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್

ದಾವಣಗೆರೆ: ಆಗಸ್ಟ್ 3 ರಂದು ದಾವಣಗೆರೆಯ ಹೊರವಲಯದಲ್ಲಿ ನಡೆದ ಸಿದ್ದರಾಮಯ್ಯ ನವರ 75 ನೇ ಅಮೃತಮಹೊತ್ಸವ ಉತ್ತಮ ಯಶಸ್ಸು ಕಂಡಿದ್ದು, ಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ದಿಕ್ಸೂಚಿಯಾಗಿದೆ ಎಂದು ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ತಿಳಿಸಿದರು.
ನಗರದ ಕಲ್ಲೇಶ್ವರ ರೈಸ್ಮಿಲ್ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಮಲ್ಲಿಕಾರ್ಜುನ್, ರಾಜ್ಯದ ಅನೇಕ ಜಿಲ್ಲೆಗಳು, ಬೆಂಗಳೂರು, ದಾವಣಗೆರೆ ಸೇರಿದಂತೆ ರಾಜ್ಯದ ಮೂಲೆ ಮೂಲೆಗಳಿಂದ ಪಕ್ಷದ ಕಾರ್ಯಕರ್ತರು, ಸಿದ್ದರಾಮಯ್ಯ ಅಭಿಮಾನಿಗಳು ಪ್ರವಾಹದ ರೀತಿಯಲ್ಲಿ ಆಗಮಿಸಿದ್ದರು. ಯಾವುದೇ ರೀತಿಯ ಸಣ್ಣ ಅಹಿತಕರ ಘಟನೆಯೂ ನಡೆಯದಂತೆ ಕಾರ್ಯಕ್ರಮ ಯಶಸ್ವಿಯಾಗಿರುವುದು ಪಕ್ಷದ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಮೂಡಿಸಿದೆ ಎಂದರು.
ಈ ಹಿಂದೆ ಸೋನಿಯಾ ಗಾಂಧಿಯ ಕಾರ್ಯಕ್ರಮದಲ್ಲಿ ಇಷ್ಟು ಜನ ಸೇರಿರಲಿಲ್ಲ, ಹಾಗಾಗಿ ನಮ್ಮ ಪಕ್ಷ ಮುಂದಿನ ಚುನಾವಣೆಯಲ್ಲಿ ಅಧಿಕಾರಕ್ಕೆ ಬರುವುದರಲ್ಲಿ ಸಂಶಯವಿಲ್ಲ ಎಂದರು. ವೇದಿಕೆ ಕಾರ್ಯಕ್ರಮದ ಜೊತೆ ಊಪಹಾರ, ಊಟದ ವ್ಯವಸ್ಥೆ ಎಲ್ಲವೂ ಅಚ್ಚುಕಟ್ಟಾಗಿ ನೇರವೆರಿಸಲಾಗಿತ್ತು. ಆದರೆ ಪೊಲೀಸ್ ಇಲಾಖೆ ಇನ್ನೂ ಹೆಚ್ಚಿನ ವ್ಯವಸ್ಥೆ ಮಾಡಬಹುದಿತ್ತು. ಪಾರ್ಕಿಂಗ್ ವ್ಯವಸ್ಥೆಯಲ್ಲಿ ಪೊಲೀಸ್ ಇಲಾಖೆ ಹೆಚ್ಚಿನ ರೀತಿಯಲ್ಲಿ ಮಾಡಬಹುದಿತ್ತು. ಆದರೆ ಅವರು ಯಾವುದಾದರೂ ರಾಜಕೀಯ ಪ್ರಭಾವಕ್ಕೆ ಒಳಗಾಗಿ ಹೀಗೆ ಮಾಡಿದ್ದಾರೋ ಗೊತ್ತಿಲ್ಲ ಎಂದು ಮಾರ್ಮಿಕವಾಗಿ ನುಡಿದರು. ರಾಹುಲ್ ಗಾಂಧಿ ಬರಲು 2 ಗಂಟೆ ತಡವಾಯಿತು. ಹೆದ್ದಾರಿಯಲ್ಲಿ ಒಂದು ಕಡೆ ಪಾರ್ಕೀಂಗ್ ಮಾಡಿ ಮತ್ತೊಂದು ಕಡೆ ಜನ ಹೋಗಲು ವ್ಯವಸ್ಥೆ ಮಾಡಿದ್ದರೆ ಚನ್ನಾಗಿತ್ತು ಎಂದರು.
ಈ ಕಾರ್ಯಕ್ರಮ ರಾಜ್ಯದಲ್ಲಿಯೇ ಅಲ್ಲ, ದೇಶದಲ್ಲಿಯೇ ಇತಿಹಾಸ ನಿರ್ಮಾಣ ಮಾಡಿರುವ ಕಾರ್ಯಕ್ರಮ. ನಾನು ನನ್ನ ಜೀವಮಾನದಲ್ಲಿಯೇ ಇಂಥಹ ಕಾರ್ಯಕ್ರಮ ನೋಡಿರಲಿಲ್ಲ. ಅಷ್ಟು ಜನ, ಅಷ್ಟು ಅಭಿಮಾನಿಗಳು, ಸ್ವಯಂ ಪ್ರೇರಣೆಯಿಂದ ಬಂದು ಯಶಸ್ವಿಗೊಳಿಸಿದರು. ಅವರೆಲ್ಲರಿಗೂ ತುಂಬು ಹೃದಯದ ಧನ್ಯವಾದ ಸಲ್ಲಿಸುವುದಾಗಿ ತಿಳಿಸಿದರು.ಉತ್ಸವ ಸಮಿತಿ ಅಚ್ಚುಕಟ್ಟಾಗಿ ಕಾರ್ಯಕ್ರಮ ನಡೆಸಿಕೊಟ್ಟಿದೆ. ನಾವು 5 ರಿಂದ 6 ಲಕ್ಷ ಜನ ನಿರೀಕ್ಷೆ ಮಾಡಿದ್ದೆವು. ಆದರೆ ಅದರ ಎರಡರಷ್ಟು ಜನ ಬಂದಿದ್ದರು. ಮಧ್ಯಮ ವರ್ಗದ ಜನರು ತೆರಿಗೆ, ಕೊರೊನೊದಿಂದ ಬಿಪಿಎಲ್ ವರ್ಗಕ್ಕೆ ಬರುತ್ತಿದ್ದಾರೆ. ಅಂತವರು ಏನು ಮಾಡಬೇಕು? ಎಂದು ಮಲ್ಲಿಕಾರ್ಜುನ್ ಪ್ರಶ್ನಿಸಿದರು. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಕೊಟ್ಟ ಕಾರ್ಯಕ್ರಮ, 5 ವರ್ಷ ಭ್ರಷ್ಟಾಚಾರ ರಹಿತ ಆಡಳಿತವನ್ನು ಎಲ್ಲರೂ ಒಪ್ಪಿಕೊಳ್ಳಬೇಕು. ಈ ಸರ್ಕಾರದಲ್ಲಿ ಕೇಳಿ ಬರುತ್ತಿರುವ ಶೇ 40 ಕಮಿಷನ್ ಹಗರಣ ಕೇಳಿತ್ತು ಆದರೆ ನಮ್ಮ ಸರ್ಕಾರದಲ್ಲಿ ಯಾವುದೂ ಕೇಳಿ ಬರಲಿಲ್ಲ. ಆ ಕಾರಣಗಳಿಂದ ಜನರು ಮತ್ತೆ ಸಿದ್ದರಾಮಯ್ಯ ಬೇಕು ಎನ್ನುತ್ತಿದ್ದಾರೆ. ಆದರೆ ಅಂತಿಮವಾಗಿ ಸಿಎಂ ಆಯ್ಕೆ ಪಕ್ಷದ ಹೈ ಕಮಾಂಡ್ ಗೆ ಬಿಟ್ಟಿದ್ದು, ಬಿಜೆಪಿಯವರು ಮೋದಿ ಉತ್ಸವ ಮಾಡಿದರೂ ನಮಗೇನೂ ಭಯ ಇಲ್ಲ.
ಇನ್ನು ಮುಂದೆ ರಾಜ್ಯದಲ್ಲಿ ಕಾಂಗ್ರೆಸ್ನ ಹವಾ ಶುರುವಾಗುತ್ತೆ. ಮೈಸೂರು, ಕಲ್ಬುರ್ಗಿ ಯಲ್ಲಿ ಸಮಾವೇಶಗಳು, ಹಾಗೂ ರಾಜ್ಯಾದ್ಯಂತ ಕಾಲ್ನಡಿಗೆ ಜಾಥಾ ಕಾರ್ಯಕ್ರಮಗಳು ಆರಂಭಗೊಳ್ಳಲಿವೆ ಎಂದರು.
ಮೆಳ್ಳೆಕಟ್ಟೆ, ಅಣಜಿ ಭಾಗದಲ್ಲಿ ಕೈಗಾರಿಕಾ ಕಾರಿಡಾರ್ ಮಾಡುವುದಕ್ಕೆ ನಮ್ಮ ವಿರೋಧವಿದೆ. ಕೈಗಾರಿಕೆಗಳನ್ನು ಮಾಡಲು ಮೊದಲು ಮೂಲಭೂತ ಸೌಕರ್ಯಗಳಾದ ನೀರು, ವಿದ್ಯುತ್, ರಸ್ತೆ ಮೊದಲಾದ ಸೌಲಭ್ಯಗಳು ಬೇಕು. ಅವುಗಳ ಲಭ್ಯತೆ ಆಧರಿಸಿ ಯೋಜನೆ ರೂಪಿಸಬೇಕು ಎನ್ನುವ ಸಾಮಾನ್ಯ ಜ್ಞಾನ ಬೇಕು. ಡಿನೋಟಿಫೈ ಮಾಡಿ, ಜನರನ್ನು ಬ್ಲಾಕ್ ಮೇಲ್ ಮಾಡಿ ಅದರಲ್ಲೂ ಶೇ.40 ಕಮಿಷನ್ ಪಡೆಯಲು ಈ ರೀತಿ ಮಾಡುತ್ತಿದ್ದಾರೆ ಎನ್ನುವ ಅನುಮಾನ ಕಾಡುತ್ತಿದೆ ಎಂದು ಮಲ್ಲಿಕಾರ್ಜುನ್ ಆರೋಪಿಸಿದರು.
ಸುದ್ದಿಗೋಷ್ಟಿಯಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ, ಡಿ. ಬಸವರಾಜ್, ಮಾಜಿ ಎಪಿಎಂಸಿ ಅಧ್ಯಕ್ಷ ಮುದೇಗೌಡರ ಗಿರೀಶ್, ಕೆ.ಜಿ.ಶಿವಕುಮಾರ್, ಅಯೂಬ್ ಪೈಲ್ವಾನ್, ಸೇರಿದಂತೆ ಅನೇಕ ಮುಖಂಡರು ಉಪಸ್ಥಿತಿ ಇದ್ದರು.