ಸ್ಟ್ರೆಚರ್ನಲ್ಲಿದ್ದೇ ಗಂಡನ ಮುಖ ಸವರಿದ ಪತ್ನಿ.! ಗೊತ್ತಾಗದಂತೆ ಕಣ್ಣಂಚಿನಲ್ಲಿ ನೀರು ಬರುವ ಘಟನೆ.!

ದಾವಣಗೆರೆ : ಕಲ್ಯಾಣ ಮಂಟಪದಲ್ಲಿ ಸಡಗರ, ಸಂಭ್ರಮದಿಂದ ಮದುವೆಯಾಗಿ, ಎಲ್ಲರ ಆಶೀರ್ವಾದ ಪಡೆದು, ಹನಿಮೂನ್ ಗೆ ಹೋಗಿದ್ದ ವೇಳೆ ಕ್ರೂರ ವಿಧಿ ನವ ವಿವಾಹಿತ ಟೆಕ್ಕಿಯೊಬ್ಬರನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ.
ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಜಿಗಳಿ ಗ್ರಾಮದ ಮಠದ ರಾಜಯ್ಯ ಹಾಗೂ ಶೋಭಾ ದಂಪತಿ ಪುತ್ರ ಸಂಜಯ್ (28) ಹಾಗೂ ಬೈಲಹೊಂಗಲದ ಪ್ರೀತಿ ನವೆಂಬರ್ 28 -2022 ರಂದು ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದ ಸಮುದಾಯ ಭವನದಲ್ಲಿ ಇಬ್ಬರು ಶಾಸ್ತ್ರೋಕ್ತವಾಗಿ ಮದುವೆಯಾಗಿದ್ದರು. ಆದರೆ ವಿಧಿಯಾಟವೇ ಬೇರೆ ಇದ್ದು, ಅಪಘಾತದಲ್ಲಿ ಸಂಜಯ್ ಮೃತಪಟ್ಟರು.
ಇವರಿಬ್ಬರು ಕೂಡ ಸಾಫ್ಟ್ವೇರ್ ಎಂಜಿನಿಯರ್ ಆಗಿದ್ದು, ಹನಿಮೂನ್ ಗೆ ಅಂತ ಧಾರ್ಮಿಕ ಕ್ಷೇತ್ರಗಳಿಗೆ ಹೋಗಿ ದೇವರ ದರ್ಶನ ಪಡೆದು ಎರಡು ದಿನ ಜಾಲಿ ಟ್ರಿಪ್ ಮುಗಿಸಿ ಊರಿಗೆ ಹಿಂದಿರುಗುವಾಗ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಪತಿ ಸಂಜಯ್ ಮೃತಪಟ್ಟಿದ್ದು, ಪತ್ನಿ ಪ್ರೀತಿಗೆ ಗಂಭೀರ ಗಾಯವಾಗಿದೆ.
ಮದುವೆಯಾದ ಹದಿನೈದು ದಿನದಲ್ಲಿಯೇ ಪ್ರೀತಿಯ ಪತಿ ಸಂಜಯ್ ಅವರನ್ನು ಜವರಾಯ ತನ್ನ ಮಡಿಲಿಗೆ ಹಾಕಿಕೊಂಡಿದ್ದಾನೆ.. ಪ್ರೀತಿ ಮತ್ತು ಸಂಜಯ್ ಇಬ್ಬರು ಡಿಸೆಂಬರ್ 10ಕ್ಕೆ ಹರಿಹರದ ಜಿಗಳಿಯಿಂದ ಬೈಕ್ ನಲ್ಲಿ ದಾರ್ಮಿಕ ಕ್ಷೇತ್ರಗಳಿಗೆ ಹೊರಟಿದ್ದಾರೆ. ಮೊದಲು ಸಾಗರ ತಾಲೂಕಿನ ಸಿಂಗಧೂರು ದೇವಿ ದರ್ಶನ ಪಡೆದಿದ್ದಾರೆ. ಬಳಿಕ ಮುರುಡೇಶ್ವರಕ್ಕೆ ಹೋಗಿ ರಾತ್ರಿ ತಂಗಿದ್ದಾರೆ. ಡಿಸೆಂಬರ್.11ಕ್ಕೆ ಶಿರಸಿಗೆ ಬಂದು ಅಲ್ಲಿ ಮಾರಿಕಾಂಬ ದೇವಿ ದರ್ಶನ ಪಡೆದು ವಾಪಸ್ ಜಿಗಳಿಗೆ ಹೋಗುತ್ತಿರುವಾಗ ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಕೋಡದ ಬಳಿ ಬರುವಾಗ ನಿಂತಿದ್ದ ಕಬ್ಬಿನ ಟ್ರ್ಯಾಕ್ಟರ್ ಗೆ ದಂಪತಿ ಪ್ರಯಾಣಿಸುತ್ತಿದ್ದ ಬೈಕ್ ಡಿಕ್ಕಿ ಹೊಡೆದಿದೆ. ಪರಿಣಾಮ ನೆಲಕ್ಕೆ ಬಿದ್ದ ಸಂಜಯ್ ತಲೆಗೆ ತೀವ್ರ ಪೆಟ್ಟಾಗಿದೆ. ಎರಡೂ ಕಿವಿಯಲ್ಲಿ ರಕ್ತಸ್ರಾವವಾಗಿದೆ. ಬೈಕ್ ನ ಹಿಂಬದಿ ಯಲ್ಲಿದ್ದ ಪ್ರೀತಿಗೂ ತೀವ್ರತರಹದ ಗಾಯಗಳಾಗಿದೆ. ಘಟನೆ ತಿಳಿದ ತಕ್ಷಣ ಸಮೀಪದ ಹಂಸಬಾವಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಸಂಜಯ್ ಮತ್ತು ಪ್ರೀತಿಯರನ್ನು ರಾಣೆಬೆನ್ನೂರು ಆಸ್ಪತ್ರೆಗೆ ಕಳಿಸಿದ್ದಾರೆ. ಅದರೆ ಹೆಚ್ಚಿನ ಚಿಕಿತ್ಸೆಗಾಗಿ, ದಾವಣಗೆರೆ ಬಾಪೂಜಿ ಆಸ್ಪತ್ರೆಗೆ ಕರೆದುಕೊಂಡು ಬರುವ ವೇಳೆ ದಾರಿ ಮಧ್ಯೆ ಸಂಜಯ್ ಮೃತಪಟ್ಟಿದ್ದಾರೆ. ಪತ್ನಿ ಪ್ರೀತಿ ಎರಡೂ ಕೈ ಹಾಗೂ ತಲೆಗೆ ಮತ್ತು ಸೊಂಟಕ್ಕೆ ತೀವ್ರ ಪೆಟ್ಟಾಗಿದೆ. ಶಸ್ತ್ರ ಚಿಕಿತ್ಸೆ ಅಗತ್ಯವಿದೆ. ಸದ್ಯ ದಾವಣಗೆರೆ ಬಾಪೂಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸ್ಟ್ರೆಚರ್ನಲ್ಲಿದ್ದೇ ಗಂಡನ ಮುಖ ಸವರಿದ ಪತ್ನಿ : ಸಂಜಯ್ ಶವ ಪರೀಕ್ಷೆ ನಂತರ ತನ್ನ ಗಂಡ ಸಂಜಯ್ ನೋಡಲು ಪ್ರೀತಿ ಸ್ಟ್ರೆಚರ್ನಲ್ಲಿ ಶವಾಗಾರಕ್ಕೆ ಬಂದಿದ್ದರು. ಬಳಿಕ ಸ್ಟ್ರೆಚರ್ ನಲ್ಲಿದ್ದುಕೊಂಡೇ ತನ್ನ ಗಂಡನ ಮುಖ ಸವರಿ ದುಃಖಿಸಿದ ಕ್ಷಣ ಮನಕಲಕುವಂತಿತ್ತು. ಆ ಕ್ಷಣ ನೋಡಿದ ಸಂಜಯ್ ತಂದೆ ರಾಜಯ್ಯ ಚಿಕ್ಕಪ್ಪ ಬಸವರಾಜಯ್ಯ ಹಾಗೂ ಪ್ರೀತಿ ತಂದೆ ತಾಯಿ ಹಾಗೂ ಸಹೋದರರು ಬಿಕ್ಕಿ..ಬಿಕ್ಕಿ ಅತ್ತಿದ್ದರು.
ಸಂಜಯ್ ಶವವನ್ನು ಜಿಗಳಿ ತಂದಾಗ ಇಡೀ ಗ್ರಾಮದಲ್ಲಿ ನೀರವ ಮೌನ ಆವರಿಸಿತ್ತು. ಹದಿನೈದು ದಿನದ ಕಳೆಗೆ ಇಬ್ಬರನ್ನು ಆರ್ಶೀವದಿಸಿ ಪೋಟೋ ತೆಗೆಸಿಕೊಂಡವರ ಕಣ್ಣಾಲೆಯಲ್ಲಿ ಗೊತ್ತಿಲ್ಲದೇ ನೀರು ಹರಿದಿತ್ತು. ಘೋರ ವಿಧಿ ವಿರುದ್ಧ ಎಲ್ಲರೂ ಹಿಡಿ ಶಾಪ ಹಾಕಿದರು. ಇನ್ನು ಸಾಕಷ್ಟು ಕನಸು ಹೊತ್ತಿದ್ದ ನವ ಜೋಡಿ ನೂತನ ಸಂಸಾರಕ್ಕೆ ಅಣಿ ಇಡಲು ಸಂಜಯ್ ಚಿಕ್ಕಪ್ಪ ಬಸವರಾಜಯ್ಯ ಬೆಂಗಳೂರಿನಲ್ಲಿ ಮನೆ ನೋಡಿದ್ದರು. ಡಿಸೆಂಬರ್.12 ಕ್ಕೆ ಇಬ್ಬರು ಸೇರಿ ಹಾಲು ಉಕ್ಕಿಸಿ ಸಂಸಾರದ ಬಂಡಿ ಸಾಗಬೇಕೇನ್ನುವಷ್ಟರಲ್ಲಿ ನವ ವಿವಾಹಿತ ಸಂಜಯ್ ಇಲ್ಲವಾಗಿದ್ದಾರೆ.