ಡಬಲ್ ಇಂಜಿನ್ ಸರ್ಕಾರದಿಂದ ರಾಜ್ಯಕ್ಕೆ ಯಾವ ಪ್ರಯೋಜನವಿಲ್ಲ: ಕಾನೂನಾತ್ಮಕವಾಗಿ ಬಿಜೆಪಿಯವರು ಲೂಟಿ ಮಾಡ್ತಿದಾರೆ – ಎಸ್ ಆರ್ ಪಾಟೀಲ್

ದಾವಣಗೆರೆ:ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಧೂಳಿಪಟವಾಗಲಿದ್ದು,
ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ್ ಭವಿಷ್ಯ ನುಡಿದಿದ್ದಾರೆ.
ದಾವಣಗೆರೆಗೆ ಆಗಮಿಸಿದ ಅವರು, ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದ್ದು, ಡಬಲ್ ಇಂಜಿನ್ ಸರ್ಕಾರವಾದ್ರೂ, ಯಾವುದೇ ಪ್ರಯೋಜನವಿಲ್ಲ. ಅಗತ್ಯ ವಸ್ತುಗಳು, ತೈಲ ಬೆಲೆ ಗಗನಕ್ಕೇರಿವೆ.
ಸ್ವರ್ಗ ಸೃಷ್ಟಿಯಾಗುವ ಬದಲು ನರಕ ಸೃಷ್ಟಿಯಾಗಿದೆ ಎಂದು ಸರ್ಕಾರಗಳ ವಿರುದ್ಧ ಕಿಡಿಕಾರಿದರು.
ಕೋವಿಡ್ 2ನೇ ಅಲೆ ನಿಯಂತ್ರಣದಲ್ಲಿ ರಾಜ್ಯ ಸರ್ಕಾರ 100ಕ್ಕೆ ನೂರರಷ್ಟು ವಿಫಲವಾಗಿದ್ದು,ಮೇ ತಿಂಗಳಲ್ಲಿ ರಾಜ್ಯಕ್ಕೆ 1800 ಕೆಎಲ್ ನಷ್ಟು ಆಕ್ಸಿಜನ್ ಕೊರತೆ ಇತ್ತು, ನ್ಯಾಯಾಲಯದಿಂದ ರಾಜ್ಯಕ್ಕೆ ಆಕ್ಸಿಜನ್ ದೊರೆಯಿತೇ ಹೊರತು ಆಳುವ ಸರ್ಕಾರದಿಂದಲ್ಲ.ಆಕ್ಸಿಜನ್ ಕೊರತೆಯಿಂದ ಸೋಂಕಿತರ ಸಾವಿಗೆ ಸರ್ಕಾರವೇ ಹೊಣೆ ಎಂದು ಆರೋಪಿಸಿದರು.
ದಾವಣಗೆರೆಯಲ್ಲೂ ನೂರಾರು ಜನ ಬ್ಲಾಕ್ ಫಂಗಸ್ ಸೋಂಕಿಗೆ ತುತ್ತಾಗಿದ್ದಾರೆ. ಅದಕ್ಕೆ ಅಗತ್ಯ ಚಿಕಿತ್ಸೆಗೆ ಔಷಧಗಳು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿಲ್ಲ. ರಾಜ್ಯದಲ್ಲಿ ಲಸಿಕೆಗೆ 5 ಕೋಟಿ ಜನಸಂಖ್ಯೆ ಅರ್ಹರಿದ್ದರು, ಅದರಲ್ಲಿ ಶೇ. 8ರಷ್ಟು ಜನರಿಗೆ ಮಾತ್ರ ಲಸಿಕೆ ಸಿಕ್ಕಿದೆ. ರಾಜ್ಯದ ಉಳಿದ ಶೇ. 92 ರಷ್ಟು ಜನರಿಗೆ ಲಸಿಕೆ ಸಿಕ್ಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದಾವಣಗೆರೆಯಲ್ಲಿ 15 ಲಕ್ಷ ಜನರಿಗೆ ಲಸಿಕೆ ಅಗತ್ಯವಿದೆ. ಆದರೆ, ಸಾಧನೆ ಆಗಿರೋದು ಕೇವಲ ಶೇ. 7 ರಷ್ಟು ಮಾತ್ರ. ಇನ್ನುಳಿದವರಿಗೆ ಲಸಿಕೆ ಸಿಕ್ಕಿಲ್ಲ. ಕೋವಿಡ್ ನಿಯಂತ್ರಣದಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದ್ದು, ಇಂಥ ಬಂಡ ಸರ್ಕಾರ ನಾನಂತೂ ನೋಡಿಲ್ಲ ಎಂದು ಹರಿಹಾಯ್ದರು.
ಇಂದು ಅಗತ್ಯ ವಸ್ತುಗಳ ಬೆಲೆ ಗಗನಮುಖಿಯಾಗಿದ್ದು, ಇದಕ್ಕೆ ಆಡಳಿತ ಪಕ್ಷವೇ ನೇರ ಕಾರಣ. 7 ಪೈಸೆ ಪೆಟ್ರೋಲ್ ದರ ಹೆಚ್ಚಳವಾದಾಗ ವಾಜಪೇಯಿ ಚಕ್ಕಡಿ ಮೇಲೆ ಬಂದಿದ್ದರು. ಈಗ, ಪೆಟ್ರೋಲ್ 100ರ ಗಡಿ ದಾಟಿದೆ. ಮೋದಿ ಭಕ್ತರು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.
ಕಚ್ವಾತೈಲದ ಬೆಲೆ 120 ಡಾಲರ್ ಇದ್ದಾಗ ಪೆಟ್ರೋಲ್ ಬೆಲೆ 70, ಪ್ರಸ್ತುತ ಕಚ್ಚಾ ತೈಲದ ಬೆಲೆ 70 ಡಾಲರ್ ಇದೆ, ಪೆಟ್ರೋಲ್ 100 ದಾಟಿದೆ. ಬೇಳೆ, ಕಾಳು, ಖಾದ್ಯ ತೈಲದ ಬೆಲೆ ಗಗನಕ್ಕೆ ಏರಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಜನ ರೊಚ್ಚಿಗೆದ್ದು ಪಾಠ ಕಲಿಸು ಮುನ್ನ ಬಿಜೆಪಿಯವರು ಎಚ್ಚೆತ್ತುಕೊಳ್ಳಬೇಕು ಎಂದು ಬಿಜೆಪಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ರೆಫಲ್ ಹಗರಣ ಕುರಿತು ರಾಹುಲ್ ಗಾಂಧಿಯವರ ದೂರು ಸತ್ಯವಾಗಿದೆ.ರೆಫಲ್ ಹಗರಣ ಕುರಿತು ಸದನ ತನಿಖೆಗೆ ಸಿದ್ಧವಿಲ್ಲ. ಫ್ರಾನ್ಸ್ನ ನ್ಯಾಯಾಲಯ ರೆಫೆಲ್ ಹಗರಣ ತನಿಖೆಗೆ ಆದೇಶಿದೆ. ಫ್ರಾನ್ಸ್ನ ನ್ಯಾಯಾಲಯದ ಆದೇಶ ರೆಫೆಲ್ ಹಗರಣ ದೃಢೀಕರಿಸಿದಂತಾಗಿದೆ ಎಂದರು.
ಕೇಂದ್ರ ಸರ್ಕಾರ, ಅಘೋಷಿತ ತುರ್ತು ಪರಿಸ್ಥಿತಿ ಹೇರಿದೆ. ಆಘೋಷಿತ ತುರ್ತು ಪರಿಸ್ಥಿತಿಯಿಂದ ಮಾಧ್ಯಮಗಳು ಹೊರತಾಗಿಲ್ಲ. ಅವರ ವಾಕ್ ಸ್ವಾತಂತ್ರ್ಯಕ್ಕೆ ಕಡಿವಾಣ ಬಿದ್ದಿದೆ. ಜಗತ್ತಿನಲ್ಲಿ ಮಾಧ್ಯಮ ಸ್ವಾತಂತ್ರ್ಯದಲ್ಲಿ ನಮ್ಮ ದೇಶ 140ನೇ ಸ್ಥಾನಕ್ಕೆ ಕುಸಿದಿದೆ ಎಂದು ಅಸಹನೆ ವ್ಯಕ್ತಪಡಿಸಿದರು.
ಸಚಿವರ ಪಿಎ ಮೇಲೆ ಸಿಎಂ ಮಗ ಭ್ರಷ್ಟಾಚಾರದ ಆರೋಪ ಹೊರಿಸಿದ್ದಾರೆ.ಚಂಬಲ್ ಡಕಾಯಿತರು ಹೊಟ್ಟೆಪಾಡಿಗೆ ದರೋಡೆ ಮಾಡಿದ್ದು ಕಾನೂನುಬಾಹಿರ ಆದರೆ ಅವರನ್ನೂ ನಾಚಿಸುವಂತೆ ಬಿಜೆಪಿಯವರು ಕಾನೂನಾತ್ಮಕವಾಗಿ ಲೂಟಿ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಗೊಂದಲದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಜವಾಬ್ದಾರಿಯುತ ರಾಜಕೀಯ ಪಕ್ಷವಾಗಿದ್ದು, ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಬಂದ ಮೇಲೆ ಸಿಎಂ ಹುದ್ದೆ ತೀರ್ಮಾನವಾಗಲಿದೆ.ಯಾವುದೇ ವ್ಯಕ್ತಿಯ ಹೆಸರಿಗಿಂತ ಕಾಂಗ್ರೆಸ್ ಅಧಿಕಾರ ಬರೋದು ಮುಖ್ಯ. ಮುಂಬರುವ ಚುನಾವಣೆಯನ್ನು ಸಾಮೂಹಿಕ ನಾಯತ್ವದಲ್ಲಿ ನಾವು ಎದುರಿಸುತ್ತೇವೆ ಎಂದರು.
ಸಂಸದೆ ಸುಮಲತಾ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಯಾರೇ ಆದರೂ ಮಹಿಳೆಯರ ಬಗ್ಗೆ ಗೌರವದಿಂದ ಮಾತನಾಡಬೇಕು. ಕೆಆರ್ಎಸ್ ಆಣೆಕಟ್ಟಿನ ವಿಚಾರದಲ್ಲಿ ಕುಮಾರಸ್ವಾಮಿ ಅಂತ ಹೇಳಿಕೆ ನೀಡಬಾರದಾಗಿತ್ತು ಎಂದರು.