ಖಾಸಗಿ ಶಾಲಾ ಕಟ್ಟಡ ಮೀರಿಸುವಂತೆ ಕಟ್ಟಿರುವ ಈ ಸರ್ಕಾರಿ ಶಾಲಾ ಕಟ್ಟಡ ರಾಜ್ಯದಲ್ಲಿಯೇ ಮಾದರಿ – ಕೆ.ಎಲ್.ಹರೀಶ್ ಬಸಾಪುರ.

ದಾವಣಗೆರೆ :ಮಹಾನಗರ ಪಾಲಿಕೆ ವ್ಯಾಪ್ತಿಯ 21ನೇ ವಾರ್ಡ್ ಅನೆಕೊಂಡದಲ್ಲಿ ಶಾಸಕರಾದ ಡಾ. ಶಾಮನೂರು ಶಿವಶಂಕರಪ್ಪ ಅವರ ಶಿಫಾರಸ್ಸಿನ ಮೇರೆಗೆ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ 1 ಕೋಟಿ 8 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ 8 ಶಾಲಾ ಕೊಠಡಿಗಳು ಹಾಗೂ 2 ಶೌಚಾಲಯಗಳ ಗುಣಮಟ್ಟ ಹಾಗೂ ವಿನ್ಯಾಸವನ್ನು ನೋಡಿದರೆ, ಸರ್ಕಾರಿ ಶಾಲೆಗಳನ್ನು ಸಹ ಹೀಗೂ ನಿರ್ಮಿಸಬಹುದು ಎಂದು ಎಲ್ಲರೂ ಮೂಗ ಮೇಲೆ ಬೆರಳಿಟ್ಟುಕೊಳ್ಳುವಂತಿದೆ ಎಂದರೆ ತಪ್ಪಾಗಲಾರದು.
ನಾವು ಸದಾ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ನಡೆಯುತ್ತಿದ್ದ ಕಳಪೆ ಕಾಮಗಾರಿಗಳ ಬಗ್ಗೆ ಲೇಖನ ಬರೆಯುತ್ತಿದ್ದೆವು ಆದರೆ ಪ್ರಥಮ ಬಾರಿಗೆ ಸ್ಮಾರ್ಟ್ ಸಿಟಿ ಯೋಜನೆಯ ಈ ಕಾಮಗಾರಿಯನ್ನು ನೋಡಿದಾಗ ಇಂತಹ ಇಂಜಿನಿಯರ್ ಗಳಿಗೆ ಹೆಚ್ಚು ಹೆಚ್ಚಿನ ಅವಕಾಶ ನೀಡಿದ್ದರೆ, ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಸಹ ಉತ್ತಮ ಹಾಗೂ ಗುಣಮಟ್ಟದ ಕಾಮಗಾರಿಗಳು ನಡೆಯಲು ಸಾಧ್ಯ ಎನ್ನಿಸದೇ ಇರದು.
ಒಬ್ಬ ಉತ್ತಮ ಜನಪ್ರತಿನಿಧಿ, ಇಂಜಿನಿಯರ್ ಹಾಗೂ ಗುತ್ತಿಗೆದಾರ ಈ ಮೂವರ ಸಮ್ಮಿಲನದಲ್ಲಿ ಕಾಮಗಾರಿ ನಡೆದರೆ ಎಂತಹ ಗುಣಮಟ್ಟದ ಕಾಮಗಾರಿಯನ್ನು ನಿರ್ಮಿಸಬಹುದು ಎಂಬುದಕ್ಕೆ ಅನೆಕೊಂಡದ ಈ ಸರ್ಕಾರಿ ಶಾಲೆಯ ಕಾಮಗಾರಿಯ ಸಾಕ್ಷಿ.
ಅನೆಕೊಂಡ ಗ್ರಾಮದಲ್ಲಿ ಇಂದು ಗ್ರಾಮಸ್ಥರೆಲ್ಲ ಸೇರಿ ಹಬ್ಬದಂತೆ ಆಚರಿಸಿದ ಈ ಸರ್ಕಾರಿ ಶಾಲಾ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ, ಶಾಸಕರು ಕಟ್ಟಡವನ್ನು ಲೋಕಾರ್ಪಣೆ ಮಾಡಿದರು, ಕಾಮಗಾರಿ ಮುಗಿದು ಉದ್ಘಾಟನಾ ಸಮಯದಲ್ಲಿ ಕಣ್ಣಿಗೆ ಕಾಣದಂತೆ ಓಡಿ ಹೋಗುವ ಗುತ್ತಿಗೆದಾರರೇ ಹೆಚ್ಚಿರುವ ಸಂದರ್ಭದಲ್ಲಿ… ಉದ್ಘಾಟನಾ ಸಮಾರಂಭದಲ್ಲಿ ಗ್ರಾಮಸ್ಥರೆಲ್ಲರೂ ಗುತ್ತಿಗೆದಾರ ಶ್ರೀನಿವಾಸ್ ರವರ ಕಾಮಗಾರಿಗೆ ಮೆಚ್ಚಿ ಅಭಿನಂದಿಸಿದ್ದು ವಿಶೇಷವಾಗಿತ್ತು ಹಾಗೂ ಗುತ್ತಿಗೆದಾರನ ಗುಣಮಟ್ಟದ ಕಾಮಗಾರಿಗೆ ಸಾಕ್ಷಿಯಾಗಿತ್ತು.
ಏನೇ ಆಗಲಿ, ಮುಂದೆ ಯಾವುದೇ ಸರ್ಕಾರಿ ಶಾಲಾ ಕಟ್ಟಡ ನಿರ್ಮಾಣ ಮಾಡುವ ಮುನ್ನ ಎಸ್ ಡಿ ಎಂ ಸಿ ಸದಸ್ಯರುಗಳು, ಗ್ರಾಮಸ್ಥರುಗಳು, ಇಂಜಿನಿಯರಗಳು, ಗುತ್ತಿಗೆದಾರರು, ಜನಪ್ರತಿನಿಧಿಗಳು ಒಮ್ಮೆ ಆನೆಕೊಂಡದ ಸರ್ಕಾರಿ ಶಾಲಾ ಕಟ್ಟಡ ನೋಡಿಕೊಂಡು ಹೋದರೆ ಉತ್ತಮ ಹಾಗೂ ಗುಣಮಟ್ಟದ ಕಟ್ಟಡ ನಿರ್ಮಾಣಕ್ಕೆ ಸ್ಪೂರ್ತಿಯಾಗಬಹುದು ಎನ್ನಿಸದೆ ಇರದು.
ಈ ಸುಂದರ ಕಟ್ಟಡ ನಿರ್ಮಾಣಕ್ಕೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ, ಸರ್ಕಾರಿ ಶಾಲಾ ಅಭಿವೃದ್ಧಿ ಬಯಸುವ ಎಲ್ಲರ ಪರವಾಗಿ ಅನಂತ ಅನಂತ ಧನ್ಯವಾದಗಳು.