ಮಳೆ ಗಾಳಿಗೆ ಧರೆಗುರುಳಿದ ಸಾವಿರಾರು ಎಕರೆ ಭತ್ತದ ಬೆಳೆ

ದಾವಣಗೆರೆ : ಜಿಲ್ಲೆಯ ಹರಿಹರ ತಾಲೂಕಿನಲ್ಲಿ ಸುರಿದ ಭಾರೀ ಮಳೆಗೆ ಸಾವಿರಾರು ಎಕರೆ ಬತ್ತದ ಬೆಳೆ ಧರೆಗುರುಳಿದೆ. ಇದರಿಂದ ಅನ್ನದಾತ ಕಂಗಾಲಾಗಿದ್ದಾನೆ. ಭಾರೀ ಬಿರುಗಾಳಿ ಮಳೆಗೆ ಹರಿಹರ ತಾಲೂಕು ಒಂದರಲ್ಲಿಯೇ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಭತ್ತದ ಬೆಳೆ ಸಂಪೂರ್ಣವಾಗಿ ನೆಲಕಚ್ಚಿದೆ. ಸಾವಿರಕ್ಕೂ ಹೆಚ್ಚು ಅಡಿಕೆ, ತೆಂಗು, ಬೀಟೆ ಮರಗಳು ಧರೆಗುರುಳಿವೆ.
ಭಾಸ್ಕರ್ ರಾವ್ ಕ್ಯಾಂಪ್, ಕುಂಬಳೂರು, ಕೊಕ್ಕನೂರು ಹಾಗೂ ನಂದಿತಾವರೆ ಗ್ರಾಮ ಸೇರಿದಂತೆ ಹಲವು ಜಮೀನುಗಳಲ್ಲಿ ಹೆಚ್ಚಿನ ನಷ್ಟ ಆಗಿದೆ. ಹೊಳೆಸಿರಿಗೆರೆಯಲ್ಲಿ 19 ಮನೆಗಳು, ಮಲೇಬೆನ್ನೂರು, ಕಮಲಾಪುರ, ಬೂದಿಹಾಳ್, ಎಳೆಹೊಳೆ, ಕೊಕ್ಕನೂರು ಗ್ರಾಮದಲ್ಲಿ ತಲಾ ಒಂದೊ0ದು ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಸುಮಾರು 30 ವಿದ್ಯುತ್ ಕಂಬಗಳು ಉರುಳಿ ಬಿದ್ದಿದ್ದು, ಎಲ್ಲಾ ಕಂಬಗಳನ್ನು ಅಳವಡಿಸುವ ಕಾರ್ಯ ಮಾಡಲಾಗಿದೆ ಎಂದು ಬೆಸ್ಕಾಂ ಶಾಖಾಧಿಕಾರಿ ಕೊಟ್ರೇಶ್ ತಿಳಿಸಿದ್ದಾರೆ. ಭಾರೀ ಗಾಳೆ ಮಳೆಯಿಂದಾಗಿ ಮಲೆಬೆನ್ನೂರಿನಲ್ಲಿ 90, ಕುಂಬಳೂರಿನಲ್ಲಿ 45, ಹೊಳೆಸಿರಿಗೆರೆಯಲ್ಲಿ 100, ಕಮಲಾಪುರದಲ್ಲಿ 25, ಕುಣಿಬೆಳಕೆರೆಯಲ್ಲಿ 160, ನಂದಿತಾವರೆಯಲ್ಲಿ 80, ಬೂದಿಹಾಳ್ನಲ್ಲಿ 205, ಜಿಗಳಿಯಲ್ಲಿ 50 ಎಕರೆ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಕಟಾವಿಗೆ ಬಂದಿದ್ದ ಭತ್ತ ಹಾಳಾಗಿದೆ.