ಬಳಕೆಯಾಗದ ವಾಹನ, ಪರಿಕರಗಳು.! ಪಾಲಿಕೆ ನಿರ್ಲಕ್ಷ್ಯಕ್ಕೆ ವಿಪಕ್ಷ ಆಕ್ರೋಶ.!

ದಾವಣಗೆರೆ: ಸರಕಾರದ ಅನುದಾನದಿಂದ ಬಂದಿರುವ ಕೋಟ್ಯಂತರ ರೂಪಾಯಿ ವೆಚ್ಚದ ವಾಹನಗಳು ಹಾಗೂ ಪರಿಕರಗಳು ತುಕ್ಕು ಹಿಡಿಯುತ್ತಿದ್ದು, ಮಹಾನಗರ ಪಾಲಿಕೆ ಆಡಳಿತ ವರ್ಗದ ನಿರ್ಲಕ್ಷ್ಯಕ್ಕೆ ಪಾಲಿಕೆ ವಿರೋಧ ಪಕ್ಷದ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ಮಹಾನಗರ ಪಾಲಿಕೆ ವಿಪಕ್ಷ ನಾಯಕ ಜಿ.ಎಸ್. ಗಡಿಗುಡಾಳ್ ಮಂಜುನಾಥ್ ಪಾಲಿಕೆಯ ವಾಹನಗಳನ್ನು ಇಟ್ಟಿರುವ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿ, ಎಲೆಕ್ಟ್ರಿಕಲ್ ಆಟೋಗಳು, ಮುಕ್ತಿವಾಹಿನಿ, ಮಿನಿ ಹಿಟಾಚಿ ಕೊಂಡೊಯ್ಯುವ ಲಾರಿ, ಜಟ್ಟಿಂಗ್ ಸ್ಪ್ರೇ, ಕಸ ತುಂಬುವ ಕಾಂಪ್ಯಾಕ್ಟರ್, ತಳ್ಳು ಗಾಡಿಗಳು, ಕಾರ್ಡನ್ ಡಸ್ಟ್ ಸೇರಿದಂತೆ ಪರಿಕರಗಳು ಮಹಾನಗರ ಪಾಲಿಕೆಗೆ ಬಂದಿವೆ. ಆದರೆ ಬಳಕೆ ಮಾಡುವುದನ್ನು ಬಿಟ್ಟು ಪಾಲಿಕೆಯಲ್ಲಿ ಇಟ್ಟಿರುವುದು ಆಡಳಿತ ನಡೆಸುತ್ತಿರುವ ಬಿಜೆಪಿ ಬೇಜಾವಾಬ್ದಾರಿತನಕ್ಕೆ ಸಾಕ್ಷಿ ಎಂದು ಆಡಳಿತ ಪಕ್ಷದವರ ವಿರುದ್ಧ ಗುಡುಗಿದರು.
೧೩ ಎಲೆಕ್ಟ್ರಿಕಲ್ ಟಿಪ್ಪರ್ ಆಟೋಗಳು ವಾರ್ಡ್ಗಳಿಗೆ ಬರುತ್ತಿಲ್ಲ. ಚಾಲನೆಯಲ್ಲಿಯೂ ಇಲ್ಲ. ಕಾರ್ಪೊರೇಷನ್ನಲ್ಲಿಯೇ ತುಕ್ಕು ಹಿಡಿಯುತ್ತಿವೆ. ೧೧ ಕಸ ತುಂಬುವ ಕಾಂಪ್ಯಾಕ್ಟರ್ ಗಳ ಪೈಕಿ ೪ ರಿಪೇರಿಯಲ್ಲಿದ್ದರೆ, ಎರಡು ಗ್ಯಾರೇಜ್ ನಲ್ಲಿವೆ. ಎರಡು ವರ್ಷವಾದರೂ ಸರಿಪಡಿಸುವ ಕೆಲಸ ಮಾಡದಿರುವುದು ವಿಪರ್ಯಾಸದ ಸಂಗತಿ. ೧೬೦ ತಳ್ಳು ಗಾಡಿಗಳು ವರ್ಷ ಕಳೆಯುತ್ತಾ ಬಂದರೂ ಉಪಯೋಗ ಮಾಡಿಕೊಂಡಿಲ್ಲ. ತುಕ್ಕು ಹಿಡಿಯುವ ಹಂತದಲ್ಲಿವೆ. ಒಟ್ಟಿನಲ್ಲಿ ಕೊಟ್ಯಂತರ ರೂಪಾಯಿ ವ್ಯಯಿಸಿ ತರಿಸಿರುವ ವಾಹನಘಲನ್ನು ಸದ್ಬಳಕೆ ಮಾಡಿಕೊಳ್ಳುತ್ತಿಲ್ಲ. ಇಲ್ಲಿ ಉಪಯೋಗಕ್ಕೆ ಬಾರದಿದ್ದರೆ ಮಾರಾಟ ಮಾಡಲಿ. ಇಲ್ಲದಿದ್ದರೆ ಜನರಿಗೆ ಉಚಿತವಾಗಿ ನೀಡಲಿ. ಹಾಳಾಗುವ ಬದಲು ಜನರ ಅನುಕೂಲಕ್ಕಾದರೂ ಆಗುತ್ತದೆ ಎಂದು ಹೇಳಿದರು.
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಯಾವುದೇ ಅಭಿವೃದ್ಧಿ ಆಗುತ್ತಿಲ್ಲ. ಜೊತೆಗೆ ಸರಕಾರದಿಂದ ಬಂದಿರುವ ವಾಹನಗಳು, ಸಲಕರಣೆಗಳನ್ನು ಬಳಸಿಕೊಂಡು ಜನರ ಸಮಸ್ಯೆಗಳಿಗೆ ಸ್ಪಂದಿಸದ ಈ ಆಡಳಿತ ವರ್ಗಕ್ಕೆ ಜನರು ಪಾಠ ಕಲಿಸುವ ದಿನಗಳ ದೂರ ಇಲ್ಲ ಎಂದು ಮಂಜುನಾಥ್ ಆಕ್ರೋಶ ಹೊರಹಾಕಿದ್ದಾರೆ.
ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯ ಎ. ನಾಗರಾಜ್, ಸ್ಥಾಯಿ ಸಮಿತಿ ಅಧ್ಯಕ್ಷ ಉದಯಕುಮಾರ್, ಕಾಂಗ್ರೆಸ್ ಮುಖಂಡರಾದ ಜಗದೀಶ್, ಕೊಟ್ರಯ್ಯ, ಇಟ್ಟಿಗುಡಿ ಮಂಜುನಾಥ್, ಜಾಕೀರ್ ಆಲಿ, ಪಂಡಿತ್ ಮತ್ತಿತರರು ಇದ್ದರು.