ಆಜಾದ್ ನಗರ, ಮಂಡಕ್ಕಿ ಭಟ್ಟಿ ಪ್ರದೇಶಗಳಲ್ಲಿ ವ್ಯಾಕ್ಸಿನ್ ಹಾಗೂ ಮಾಸ್ಕ್ ಅಭಿಯಾನ

WhatsApp Image 2021-12-08 at 7.55.31 PM

 

ದಾವಣಗೆರೆ: ದಾವಣಗೆರೆ ನಗರದ ಹಳೇ ಭಾಗಗಳಾದ ಆಜಾದ್ ನಗರ ಹಾಗೂ ಮಂಡಕ್ಕಿ ಭಟ್ಟಿ ಪ್ರದೇಶಗಳಲ್ಲಿ ಬುಧವಾರದಂದು ಕೊರೊನ ಲಸಿಕೆ ಹಾಗೂ ಮಾಸ್ಕ್ ಅಭಿಯಾನ ನಡೆಸುವ ಮೂಲಕ ಲಸಿಕೆ ಪಡೆಯದವರಿಗೆ ಮೊದಲ ಹಾಗೂ ಎರಡನೇ ಡೋಸ್ ಲಸಿಕೆ ನೀಡಲಾಯಿತು.
ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್, ಸಿಇಓ ಡಾ. ವಿಜಯ ಮಹಾಂತೇಶ್ ದಾನಮ್ಮನವರ್ ನೇತೃತ್ವದ ವಿವಿಧ ಅಧಿಕಾರಿಗಳ ತಂಡದ ವತಿಯಿಂದ ಮನೆ ಮನೆಗೆ ತೆರಳಿ ಹಾಗೂ ಮಂಡಕ್ಕಿ ಭಟ್ಟಿಗಳಲ್ಲಿ ಕಾರ್ಯ ನಿರ್ವಹಿಸುವ ಕಾರ್ಮಿಕರಿಗೆ ಲಸಿಕೆ ನೀಡಲಾಯಿತು. ಈ ಸಂದರ್ಭದಲ್ಲಿ ಸಾರ್ವಜನಿಕರು ಉತ್ಸಾಹದಿಂದಲೇ ಲಸಿಕೆ ಪಡೆದರು.

ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿಗಳು ಸ್ಥಳೀಯ ಪಾಲಿಕೆ ಸದಸ್ಯರಾದ ಅಬ್ದುಲ್ ರಹೀಂ, ಮಂಡಕ್ಕಿ ಭಟ್ಟಿ ಸಂಘದ ಅಧ್ಯಕ್ಷರು ಹಾಗೂ ವಿವಿಧ ಮುಖಂಡರುಗಳು ಅವರೇ ಮುಂದೆ ಬಂದು ಲಸಿಕೆ ಹಾಕಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಲಸಿಕೆ ನೀಡಿಕೆ ಪ್ರಮಾಣ ಗ್ರಾಮಾಂತರ ಪ್ರದೇಶದಲ್ಲಿ ಶೇ.100 ರಷ್ಟಿದ್ದು, ನಗರ ಪ್ರದೇಶಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿ ಕಡಿಮೆಯಿದೆ. ಹೀಗಾಗಿ ಲಸಿಕೆ ನೀಡಿಕೆ ಚುರುಕುಗೊಳಿಸಲು ಕಳೆದೊಂದು ವಾರದಿಂದ ಅಭಿಯಾನ ರೂಪದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಗಳು ಶ್ರಮಿಸುತ್ತಿದ್ದಾರೆ, ದಿನೇ ದಿನೇ ಲಸಿಕೆ ನೀಡಿಕೆ ಪ್ರಮಾಣ ಹೆಚ್ಚಳವಾಗುತ್ತಿದ್ದು, ಶೇ. 96 ಇರುವ ಲಸಿಕಾ ಗುರಿ ಶೀಘ್ರದಲ್ಲಿ ಶೇ 100ರ ಗುರಿ ತಲುಪುವ ವಿಶ್ವಾಸವಿದೆ ಎಂದರು.

ಹೊರ ದೇಶಗಳಿಂದ 66 ಮಂದಿ ಜಿಲ್ಲೆಗೆ ಆಗಮಿಸಿದ್ದು, ಅವರಲ್ಲಿ 21 ಮಂದಿ ಹೈ ರಿಸ್ಕ್ ಪ್ರದೇಶಗಳಿಂದ ಬಂದವರಾಗಿದ್ದಾರೆ. ಅವರೆಲ್ಲರ ಟೆಸ್ಟ್ ರಿಪೋರ್ಟ್ ನೆಗೆಟಿವ್ ಬಂದಿದೆ, ಹಾಗೂ ಅವರನ್ನು ಕ್ವಾರಂಟೈನ್‍ನಲ್ಲಿ ಇಡಲಾಗಿದೆ. ಈ ಪೈಕಿ 06 ರಿಂದ 07 ಜನರು ಡಿಸ್ಚಾರ್ಜ್ ಕೂಡ ಆಗಿದ್ದಾರೆ. ಬುಧವಾರದಿಂದಲೇ ಜಿಲ್ಲೆಯ ಹಾಸ್ಟೆಲ್ ಮತ್ತು ವಸತಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ರ್ಯಾಂಡಮ್ ಆಗಿ ಕೋವಿಡ್ ಟೆಸ್ಟ್ ಮಾಡಲು ಸೂಚಿಸಲಾಗಿದೆ ಎಂದರು.
ಮಾಸ್ಕ್ ಬಗೆಗೂ ಜಾಗೃತಿ ಮೂಡಿಸಲಾಗುತ್ತಿದ್ದು ಬುಧವಾರ 20 ರಿಂದ 30 ಜನರಿಗೆ ದಂಡ ವಿಧಿಸುವ ಮೂಲಕ ಎಚ್ಚರಿಕೆ ನೀಡಲಾಗಿದೆ. ಇನ್ನು ಮುಂದೆ ಸಾರ್ವಜನಿಕರು ಎಚ್ಚೆತ್ತುಕೊಂಡು ಮಾಸ್ಕ್ ಧರಿಸಬೇಕೆಂದರು.

ಪೊಲೀಸ್ ವರಿಷ್ಟಾಧಿಕಾರಿ ಸಿ.ಬಿ. ರಿಷ್ಯಂತ್ ಮಾತನಾಡಿ ಇಂದಿನಿಂದ ಬಹಳ ಕಟ್ಟುನಿಟ್ಟಾಗಿ ಮಾಸ್ಕ್ ಹಾಗೂ ಜನಜಂಗುಳಿ ನಿಯಂತ್ರಿಸಲಾಗುತ್ತದೆ. ಜಿಲ್ಲೆಯಲ್ಲಿ 0.6 ಇದ್ದ ಪಾಸಿಟಿವಿಟಿ ಪ್ರಮಾಣ 1.3 ರಷ್ಟಾಗಿದ್ದು ಇಂದಿನಿಂದಲೇ ಎಲ್ಲಾ ಏರಿಯಾಗಳಲ್ಲೂ ನಮ್ಮ ಸಿಬ್ಬಂದಿ ಕಾರ್ಯಾಚರಿಸಲಿದ್ದಾರೆ. ಸರ್ಕಾರದ ಆದೇಶದಂತೆ ಹೆಚ್ಚು ಜನ ಸೇರಿದರೆ ಐಪಿಸಿ 188 ರಡಿ ಉಲ್ಲಂಘನೆ ಮೊಕದ್ದಮೆ ದಾಖಲಿಸಲಾಗುತ್ತದೆ ಎಂದರು.

ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ರಾಘವನ್ ಮಾತನಾಡಿ, ನಗರದ ಎಂಟ್ರಿ ಪಾಯಿಂಟ್‍ಗಳಲ್ಲಿ ತಪಾಸಣೆ ನಡೆಸುತಿದ್ದು, ಎಲ್ಲ ನರ್ಸಿಂಗ್ ಹಾಗೂ ಪ್ಯಾರಾ ಮೆಡಿಕಲ್ ಕಾಲೇಜುಗಳು ಹಾಗೂ ವಸತಿ ಶಾಲೆಯ ವಿದ್ಯಾರ್ಥಿಗಳಿಗೆ 15 ದಿನಗಳಿಗೊಮ್ಮೆ ರ್ಯಾಂಡಮ್ ಆಗಿ ಟೆಸ್ಟ್ ಮಾಡಲಾಗುತ್ತಿದೆ ಎಂದರು
ಅಭಿಯಾನದಲ್ಲಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಮಹಾನಗರ ಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ, ಡಿಹೆಚ್‍ಒ ಡಾ. ನಾಗರಾಜ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ರಾಘವನ್, ಆರ್‍ಸಿಹೆಚ್ ಅಧಿಕಾರಿ ಡಾ. ಮೀನಾಕ್ಷಿ, ಸಮಾಜ ಕಲ್ಯಾಣಾಧಿಕಾರಿ ಕೌಸರ್ ರೇಷ್ಮ ಸೇರಿದಂತೆ ಆರೋಗ್ಯ ಇಲಾಖೆ ಅಧಿಕಾರಿ, ಸಿಬ್ಬಂದಿಗಳಿದ್ದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!