ವಾಲ್ಮೀಕಿ ಜಯಂತಿಯೊಳಗೆ ಶೇ 7.5 ಮೀಸಲಾತಿ ಘೋಷಣೆ ಭರವಸೆ ನೀಡಿದ ಬೊಮ್ಮಾಯಿ.

ಬೆಂಗಳೂರು, ಆ.18. ವಾಲ್ಮೀಕಿ ಜಯಂತ್ಯೋತ್ಸವದ ಒಳಗಾಗಿ ಪರಿಶಿಷ್ಟ ವರ್ಗಕ್ಕೆ ಶೇ.7.5 ಮೀಸಲಾತಿ ಘೋಷಣೆ ಮಾಡುತ್ತೇನೆ. ನನ್ನ ಮೇಲೆ ನಂಬಿಕೆ ಇಡಿ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗಲೂ ನಾನೇ ಹಲವು ಸಭೆಗಳಲ್ಲಿ ಭಾಗಿಯಾಗಿ ಕೆಲಸ ಮಾಡಿದ್ದೀನಿ ಆದ್ದರಿಂದ ಮುತುವರ್ಜಿವಹಿಸಿ ಕೆಲಸ ಮಾಡುತ್ತೇನೆ. ವಾಲ್ಮೀಕಿ ಸಮುದಾಯಕ್ಕೆ ಅನ್ಯಾಯವಾಗಲು ಬಿಡುವುದಿಲ್ಪ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಭರವಸೆ ನೀಡಿದರು.
ಬೆಂಗಳೂರಿನ ಮುಖ್ಯಮಂತ್ರಿ ಗೃಹಕಚೇರಿ ಕೃಷ್ಣಾದಲ್ಲಿ ರಾಜನಹಳ್ಳಿ ವಾಲ್ಮೀಕಿ ಮಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ನೇತೃತ್ವದ ನಿಯೋಗದ ಜೊತೆಗೆ ಸಮಾಲೋಚನೆ ಸಭೆಯಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಭರವಸೆ ನೀಡಿದರು.
ಮೀಸಲಾತಿ ವಿಚಾರದಲ್ಲಿ ಕೆಲವು ವಿಚಾರಗಳನ್ನು ಬಹಿರಂಗವಾಗಿ ಹೇಳಲು ಆಗದು. ಈಗ ಹಲವು ಸಮುದಾಯಗಳು ಮೀಸಲಾತಿ ಬೇಕು ಎಂದು ಬೇಡಿಕೆ ಇಟ್ಟಿವೆ. ಮೀಸಲಾತಿ ವಿಚಾರ ಕಾನೂನಾತ್ಮಕವಾಗಿಯೇ ಬಗೆಹರಿಯಬೇಕು. ಆ ಕಾರಣಕ್ಕೆ ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದಲ್ಲಿ ನೀಡಿದ ವರದಿಯನ್ನು ಪರಿಶೀಲನೆ ನಡೆಸಲು ನ್ಯಾ. ಸುಭಾಷ್ ಅಡಿ ನೇತೃತ್ವದಲ್ಲಿ ತ್ರಿಸದಸ್ಯ ಸಮಿತಿಗೆ ಶಿಫಾರಸ್ಸು ಮಾಡಿದ್ದೇವೆ ಎಂದು ಬೊಮ್ಮಾಯಿ ಹೇಳಿದರು.
ಈ ಮೀಸಲಾತಿ ವಿಚಾರವನ್ನು ಬಗೆಹರಿಸಲು ವಾಲ್ಮೀಕಿ ಸಮುದಾಯದ ಎಲ್ಲ ಶಾಸಕರ ಬೆಂಬಲ, ಸಹಕಾರ ಬೇಕು. ನನ್ನ ಮೇಲೆ ವಿಶ್ವಾಸ ಇಡಿ ನಾನು ಈ ಸಮುದಾಯದ ಪರವಾಗಿ ಕೆಲ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಇದಕ್ಕೂ ಮುನ್ನ ಮಾತನಾಡಿದ ವಾಲ್ಮೀಕಿ ಮಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ, ಚುನಾವಣೆ ವೇಳೆ ಹಾಗೂ ಜಾತ್ರಾ ಮಹೋತ್ಸವದಲ್ಲಿ ಬಿಜೆಪಿ ಸರ್ಕಾರ ಭರವಸೆ ನೀಡಿದಂತೆ ಈಗ ವಾಲ್ಮೀಕಿ ಅಭಿವೃದ್ಧಿ ಕಲ್ಯಾಣ ಇಲಾಖೆ ಘೋಷಣೆ ಮಾಡಿದೆ. ಆದರೆ ಶೇ.7.5 ಮೀಸಲಾತಿ ಘೋಷಣೆ ಮಾಡಿಲ್ಲ. ಇದನ್ನು ತ್ರಿಸದಸ್ಯ ಸಮಿತಿಗೆ ನೀಡಿದ್ದರ ಬಗ್ಗೆ ಬೇಸರ ಇದೆ. ಇದೇ ವಿಚಾರದ ಕುರಿತು 20 ಬಾರಿ ಬೊಮ್ಮಾಯಿ ಅವರನ್ನು ಈ ಹಿಂದೆ ಭೇಟಿ ಮಾಡಿ ಮನವಿ ಮಾಡಿದ್ದೇನೆ. ಈಗ ಅವರೇ ಮುಖ್ಯಮಂತ್ರಿ ಆಗಿರುವುದು ನಮಗೆ ಖುಷಿ ತಂದಿದೆ. ಆದ್ದರಿಂದ ವಾಲ್ಮೀಕಿ ಜಯಂತ್ರೋತ್ಸವದ ಒಳಗಾಗಿ ಶೇ.7.5 ಮೀಸಲಾತಿ ಘೋಷಣೆ ಮಾಡಬೇಕು ಎಂದು ಗಡುವುದು ನೀಡಿದರು.
ಸಭೆಯಲ್ಲಿ ಸಚಿವರಾದ ಶ್ರೀ ಬಿ. ಶ್ರೀರಾಮುಲು, ಮಾಜಿ ಸಚಿವರಾದ ಸತೀಶ್ ಜಾರಕಿಹೊಳಿ, ತುಕಾರಾಮ್, ಶಾಸಕರಾದ ಶಿವನಗೌಡ ನಾಯಕ್, ಅನಿಲ್ ಚಿಕ್ಕಮಾದು, ರಾಜ ವೆಂಕಟಪ್ಪ ನಾಯಕ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಅಖಿಲ ಕರ್ನಾಟಕ ರಾಜ್ಯ ವಾಲ್ಮೀಕಿ ಮಹಾಸಭಾ ಅಧ್ಯಕ್ಷರಾದ ಜಿ.ಟಿ.ಚಂದ್ರಶೇಖರಪ್ಪ, ಉದ್ಯಮಿ ನರಸಿಂಹಮೂರ್ತಿ, ಕರ್ನಾಟಕ ನಾಯಕರ ಒಕ್ಕೂಟದ ಸಂಸ್ಥಾಪಕ ರಾಜ್ಯಾಧ್ಯಕ್ಷ ರಮೇಶ್ ಹಿರೇಜಂಬೂರು, ತಿಪ್ಪೇಸ್ವಾಮಿ, ಸಿಂಗಾಪುರ ವೆಂಕಟೇಶ್, ಹಾಗಲವಾಡಿ ಶಂಕರ್ ಮತ್ತಿತರರು ಉಪಸ್ಥಿತರಿದ್ದರು.