ವಾಣಿಜ್ಯ ವಾಹನದ ಕಂತು ಪಾವತಿಗೆ ಕಾಲಾವಕಾಶ ನೀಡಲು ಒತ್ತಾಯ

ದಾವಣಗೆರೆ.ಜು.2; ಕೊರೊನಾ ಹಾವಳಿ, ಲಾಕ್ಡೌನ್ ಹಿನ್ನೆಲೆಯಲ್ಲಿ ಜಿಲ್ಲೆಯ ವಾಣಿಜ್ಯ ಬಳಕೆ ವಾಹನ(ಟ್ಯಾಕ್ಸಿ) ಸಾಲದ ಕಂತುಗಳ ಪಾವತಿಗೆ ಮೂರು ತಿಂಗಳ ಕಾಲಾವಕಾಶ ನೀಡಬೇಕು ಎಂದು ಕರ್ನಾಟಕ ಚಾಲಕರ ಒಕ್ಕೂಟದ ಗೌರವ ಅಧ್ಯಕ್ಷ ಮಹಾಂತೇಶರಾವ್ ಸುರ್ವೆ ಒತ್ತಾಯಿಸಿದ್ದಾರೆ.
ಕಳೆದ ಎರಡು ತಿಂಗಳು ಲಾಕ್ಡೌನ್ ಇದ್ದ ಕಾರಣಕ್ಕೆ ಟ್ಯಾಕ್ಸಿಗಳಿಗೆ ಬಾಡಿಗೆಯೇ ಇರಲಿಲ್ಲ. ಹಾಗಾಗಿ ಎರಡು ತಿಂಗಳ ಕಂತುಗಳನ್ನ ಮನ್ನಾ ಮಾಡಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.ಸಾಲ-ಸೋಲ ಮಾಡಿ ಟ್ಯಾಕ್ಸಿ ಖರೀದಿ ಮಾಡಿದ ನಂತರ ಇತರೆಯದ್ದಕ್ಕೂ ಸಾಲ ಮಾಡಲಾಗಿದೆ. ಲಾಕ್ಡೌನ್ ಇದ್ದ ಕಾರಣಕ್ಕೆ ಎರಡು ತಿಂಗಳು ಯಾವುದೇ ಟ್ಯಾಕ್ಸಿಗಳು ರಸ್ತೆಗೆ ಇಳಿದಿರಲಿಲ್ಲ. ಬಾಡಿಗೆ ಇಲ್ಲದೆ ಚಾಲಕರು, ಮಾಲಿಕರು ಜೀವನ ನಡೆಸುವುದೇ ಕಷ್ಟವಾಗಿದೆ. ಇಂತಹ ಸಂದರ್ಭದಲ್ಲಿ ಬ್ಯಾಂಕ್ ಇತರೆ ಹಣಕಾಸು ಸಂಸ್ಥೆಯವರು ಕಂತುಗಳ ಕಟ್ಟಲು ಇನ್ನಿಲ್ಲದ ಒತ್ತಾಯ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಜೀವನ ನಡೆಸುವುದೇ ದುಸ್ತರವಾಗಿರುವಾಗ ಈಗ ಕಂತುಗಳ ಕಟ್ಟುವ ಪರಿಸ್ಥಿತಿಯಲ್ಲಿ ಯಾರೂ ಇಲ್ಲ. ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆಯವರು ಎರಡು ತಿಂಗಳ ಕಂತು ಮನ್ನಾ ಮಾಡಬೇಕು. ಲಾಕ್ಡೌನ್ ತೆರವಿನ ನಂತರದ ಕಂತು ಕಟ್ಟಲು ಮೂರು ತಿಂಗಳ ಕಾಲಾವಕಾಶ ಕೊಡಲೇಬೇಕು ಎಂದು ಒತ್ತಾಯಿಸಿದರು.
ಎರಡು ತಿಂಗಳ ಕಂತು ಮನ್ನಾ, ಮುಂದಿನ ಕಂತುಗಳ ಕಟ್ಟಲು ಸಮಯವಕಾಶ ನೀಡಬೇಕು ಎಂದು ಒತ್ತಾಯಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಯಾವುದೇ ಪ್ರಯೋಜನವಾಗಿಲ್ಲ. ಲಾಕ್ಡೌನ್ನಿಂದ ಸಂಕಷ್ಟಕ್ಕೊಳಗಾಗಿರುವ ಟ್ಯಾಕ್ಸಿ ಚಾಲಕರು, ಮಾಲಿಕರಿಗೆ ಸಹಾಯಧನ ಒಳಗೊಂಡಂತೆ ಯಾವುದೇ ರೀತಿಯ ಸೌಲಭ್ಯ ಒದಗಿಸಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಒಕ್ಕೂಟದ ಅಧ್ಯಕ್ಷ ಎಸ್. ಗಣೇಶ್ ಮಾತನಾಡಿ, ಸರ್ಕಾರ ನಮ್ಮ ಒಕ್ಕೂಟದ ಬೇಡಿಕೆಗಳನ್ನು ೧ ವಾರದಲ್ಲಿ ಈಡೇರಿಸಬೇಕು. ಇಲ್ಲದಿದ್ದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು. ನಮ್ಮ ನ್ಯಾಯಯುತ ಬೇಡಿಕೆ ಈಡೇರುವವರೆಗೆ ಹೋರಾಟ ಮುಂದುವರೆಸಲಾಗುವುದು ಎಂದು ತಿಳಿಸಿದರು.