ವೆಂಟಿಲೇಟರ್ ನಿರ್ವಹಣೆಯಲ್ಲಿ ಜಿಲ್ಲಾಡಳಿತ ವಿಫಲ, ಕೊರೋನಾ ಪಾಸಿಟಿವ್ ಚಿಕಿತ್ಸಾ ಮಾಹಿತಿ ನೀಡಲು ಎ.ನಾಗರಾಜ್ ಆಗ್ರಹ

CJ HOSPITAL DAVANAGERE

ದಾವಣಗೆರೆ: ದಾವಣಗೆರೆ ಜಿಲ್ಲೆಯಲ್ಲಿ ಕೋವಿಡ್-2ನೇ ಅಲೆ ಸಮುದಾಯಕ್ಕೆ ಹರಡಿದ್ದು ಪ್ರತಿದಿನ ನೂರಾರು ಸಂಖ್ಯೆಯಲ್ಲಿ ಪಾಸಿಟಿವ್ ಪ್ರಕರಣಗಳು ದಾಖಲಾಗುತ್ತಿವೆ.ಇನ್ನು ಮುಂದಿನ ದಿನಗಳಲ್ಲಿ ಇನ್ನು ಹೆಚ್ಚು ಪ್ರಕರಣಗಳು ದಾಖಲಾಗಬಹುದು ಎಂದು ಮಹಾನಗರ ಪಾಲಿಕೆ ವಿಪಕ್ಷ ನಾಯಕ ಎ.ನಾಗರಾಜ್ ಆತಂಕ ವ್ಯಕ್ತಪಡಿಸಿದ್ದಾರೆ.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯವರು ಕೊರೋನಾ ಪಾಸಿಟಿವ್ ಬಂದ ಪ್ರತಿಯೊಬ್ಬರಿಗೂ ಆಸ್ಪತ್ರೆಗೆ ದಾಖಲಿಸದೇ ಪಾಸಿಟಿವ್ ಬಂದರೂ ಯಾವುದೇ ರೋಗ ಲಕ್ಷಣಗಳಿಲ್ಲದವರಿಗೆ ಹೋಂ ಕ್ವಾರಂಟೈನ್‍ನಡಿ ಚಿಕಿತ್ಸೆಗೆ ಸೂಕ್ತ ಮಾಹಿತಿ ನೀಡಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ವಿವಿಧ ರೀತಿಯ ಚಿಕಿತ್ಸಾ ವಿಧಾನವನ್ನು ನೀಡುತ್ತಿದ್ದು, ಈ ಬಗ್ಗೆ ಆರೋಗ್ಯ ಇಲಾಖೆಯೇ ಪ್ರಕಟಣೆ ಹೊರಡಿಸಬೇಕೆಂದು ಆಗ್ರಹಿಸಿದ್ದಾರೆ.

ದಾವಣಗೆರೆ ಜಿಲ್ಲೆಯ ಪ್ರಮುಖ ಆಸ್ಪತ್ರೆ ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ 41 ವೆಂಟಿಲೇಟರ್ ಇದ್ದು, 20 ಎಂಎಸ್ ಐಯು ಮತ್ತು ಐಸಿಯುಗೆ ಬಳಸಲಾಗುತ್ತಿದೆ. 20 ವೆಂಟಿಲೇಟರ್‍ಗಳನ್ನು ಸ್ಟ್ಯಾಂಡ್ ಬೈ ಆಗಿದ್ದು, ಅದಕ್ಕೂ ಸಿಬ್ಬಂದಿ ನೇಮಕ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿರುವ ಅವರು ಜಿಲ್ಲಾಧಿಕಾರಿಗಳ ಮಾಹಿತಿಯಂತೆ ಒಬ್ಬರು ಮಾತ್ರ ವೆಂಟಿಲೇಟರ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ನಿನ್ನೆ ದಿನ ನಾವೇ ಖುದ್ದಾಗಿ ದಾವಣಗೆರೆಯ ವೆಂಟಿಲೇಟರ್ ಇರುವ ಆಸ್ಪತ್ರೆಗಳಲ್ಲಿ ವಿಚಾರಿಸಿದರೆ ಒಂದೇ ಒಂದು ವೆಂಟಿಲೇಟರ್ ಸಿಗಲಿಲ್ಲ. ಜಿಲ್ಲಾಧಿಕಾರಿಗಳು ಈ ಕೂಡಲೇ ದಾವಣಗೆರೆಯ ಯಾವಾವ ಆಸ್ಪತ್ರೆಗಳಲ್ಲಿ ಎಷ್ಟೆಷ್ಟು ವೆಂಟಿಲೇಟರ್‍ಗಳಿವೆ. ಎಷ್ಟು ಭರ್ತಿಯಾಗಿವೆ ಎಂಬುದರ ಬಗ್ಗೆ ಪ್ರಕಟಣೆ ಹೊರಡಿಸಬೇಕೆಂದು ಒತ್ತಾಯಿಸಿದ್ದಾರೆ.

ದಾವಣಗೆರೆ ಮಹಾನಗರ ಪಾಲಿಕೆಯಿಂದ ಕೊರೋನಾದಿಂದ ಮೃತಪಟ್ಟವರಿಗೆ ಉಚಿತವಾಗಿ ಮುಕ್ತಿವಾಹಿನಿಯ ಸೌಲಭ್ಯ ಕಲ್ಪಿಸುತ್ತಿರುವುದು ಸ್ವಾಗತಾರ್ಹ. ಆದರೆ ಇದೇ ವೇಳೆ ಸಹಜ ಮರಣಗಳಿಂದ ಸಾವನ್ನಪ್ಪಿದವರಿಗೂ ತೊಂದರೆ ಆಗದಂತೆ ಉಚಿತವಾಗಿ ಮುಕ್ತಿವಾಹಿನಿಯ ಸೇವೆ ಒದಗಿಸಬೇಕೆಂದು ಮೇಯರ್‍ಗೆ ಸಲಹೆ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!