ಬಸವಪಥ ನಮ್ಮ ಬದುಕಿನ ಪಥವಾದಾಗ ಮಾತ್ರ ಮಾನವನ ಜೀವ- ಜೀವನ -ಜಗತ್ತು ಉಳಿಯಲು ಸಾಧ್ಯವಾಗುತ್ತದೆ-ಬಸವಪ್ರಭು ಸ್ವಾಮಿಜೀ

ಬಸವ ಜಯಂತಿ ಸಂದರ್ಭದಲ್ಲಿ ಕೊರೊನಾ ಸೊಂಕು ಜಗತ್ತನ್ನು ಬಿಟ್ಟು ತೊಲಗಲಿ ಎಂದು ಪ್ರಾರ್ಥನೆ ಸಲ್ಲಿಕೆ
ದಾವಣಗೆರೆ: ಬಸವಪಥ ನಮ್ಮ ಬದುಕಿನ ಪಥವಾದಾಗ ಮಾತ್ರ ಮಾನವನ ಜೀವ- ಜೀವನ -ಜಗತ್ತು ಉಳಿಯಲು ಸಾಧ್ಯವಾಗುತ್ತದೆ ಎಂದು ದಾವಣಗೆರೆ ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿಯವರು ಹೇಳಿದರು.
ನಗರದ ವಿರಕ್ತಮಠದಲ್ಲಿ ಸರಳವಾಗಿ ಹಮ್ಮಿಕೊಂಡ ೧೦೯ ನೇ ವರ್ಷದ ಬಸವಜಯಂತಿ ಆಚರಣೆ ಸಮಾರಂಭದ ಸಾನಿಧ್ಯವಹಿಸಿ ಆಶೀರ್ವಚನ ನೀಡಿದ ಅವರು ಬಸವಪಥ ಎಂದರೆ ಬಸವಣ್ಣನವರು ನೀಡಿದ ಕಾಯಕ , ದಾಸೋಹ, ದಯೆ, ಸಮಾನತೆ ತತ್ವಗಳನ್ನು ಪ್ರತಿಯೊಬ್ಬರೂ ಪಾಲಿಸಿಕೊಂಡು ಬಂದರೆ ಜಗತ್ತಿನ ಜನರು , ಜೀವಕುಲ ಬದುಕುಳಿಯುತ್ತದೆ ಮುಖ್ಯವಾಗಿ ಬಸವಣ್ಣನವರು ನೀಡಿದ ದಯವೇ ಧರ್ಮದ ಮೂಲವಯ್ಯ ದಯವಿರಬೇಕು ಸಕಲ ಜೀವರಾಶಿಗಳಲ್ಲಿ ಎಂಬ ಆದರ್ಶವು ಈಗ ಪ್ರಸ್ತುತವಾಗಿದೆ.
ಕೊರೊನಾ ಕಾಲಘಟ್ಟದಲ್ಲಿ ಪ್ರತಿ ವ್ಯಕ್ತಿಯು ದಯಾಮೂರ್ತಿಯಾಗಿ ಜೀವಿಸಬೇಕು ತಾನು ಬದುಕಿ ಪರರ ಬದುಕನ್ನು ಉಳಿಸುವ ಪಣತೊಡಬೇಕು ಆಗ ಮಾತ್ರ ಜಗತ್ತಿನ ಜೀವರಾಶಿ ಉಳಿಯುತ್ತವೆ ಈಗ ಮಾನವ ದಯೆಯನ್ನು ತನ್ನ ಸುತ್ತಲಿನ ಮನುಷ್ಯರಿಗೆ ಮತ್ತು ಸಕಲ ಜೀವರಾಶಿಗಳಿಗೆ ಧಾರೆಎರೆಯಬೇಕು ಮಾನವ ತನ್ನ ಸ್ವಾರ್ಥಕ್ಕಾಗಿ ಗಿಡ ಮರಗಳನ್ನು ಕಡಿದು ಹಾಕಿದ ಅದರ ಪರಿಣಾಮವಾಗಿ ಇಂದು ಮನುಷ್ಯನಿಗೆ ಕೊರೊನಾ ಸೊಂಕು ಬಂದು ಆಮ್ಲಜನಕ ಸಿಲಿಂಡರ್ ಗಾಗಿ ಪರಿತಪಿಸುತ್ತಿದ್ದಾನೆ ಈಗಲಾದರೂ ಮಾನವ ಮಾನವೀಯತೆಯ ಮೂರ್ತಿಯಾಗಬೇಕು ಅದನ್ನು ಬಸವಣ್ಣನವರು ಅಂದೇ ಹೇಳಿದರು ಯಾರು ಕಾಯಕತತ್ವವನ್ನು ಪಾಲಿಸಿಕೊಂಡು ಬರುವರೋ ಅವರು ಧನಿಕರಾಗುತ್ತಾರೆ ಮತ್ತು ಕಾಯಕದಿಂದ ಬಂದ ಹಣದಿಂದ ಸ್ವಲ್ಪ ಭಾಗವನ್ನು ದಾಸೋಹ ಮಾಡುವ ಹಸಿವು ಮುಕ್ತ ಸಮಾಜವನ್ನು ಕಟ್ಟಿದರು.
ಬಸವಣ್ಣನವರಂತೆ ದಯಾಮೂರ್ತಿಗಳಾಗಿ ಜನರನ್ನು ಸಹಾಯ ಮಾಡುವದರೊಂದಿಗೆ ಜೀವ ಸಂಕುಲವನ್ನು ಹಾಗೂ ಜಗತ್ತನ್ನು ರಕ್ಷಿಸೋಣ ಬಸವಣ್ಣನವರು ನಮ್ಮ ಬದುಕಿನಲ್ಲಿ ಪ್ರವೇಶವಾಗಲಿ ಎಂದರು.
ಸಮಾರಂಭದಲ್ಲಿ ವಿರಕ್ತಮಠ ಧರ್ಮದರ್ಶಿಯ ಕಾರ್ಯದರ್ಶಿ ಕಣಕುಪ್ಪಿ ಮುರುಗೇಶಪ್ಪ , ಡಿ.ಬಸವರಾಜ್ , ಎಸ್.ಓಂಕಾರಪ್ಪ, ಡಾ.ನಸೀರ್ ಅಹಮದ್ , ಲಂಬಿ ಮುರುಗೇಶಪ್ಪ , ಮಹದೇವಮ್ಮ , ಪಾರ್ವತಮ್ಮ, ಸುಜಾತಮ್ಮ, ವಿನಾಯಕ,ಶರಣಬಸವ,ಕುಮಾರಸ್ವಾಮಿ ಇತರರು ಇದ್ದರು. ಶಿಕ್ಷಕ ರೋಷನ್ ನಿರೂಪಿಸಿ ಸ್ವಾಗತಿಸಿದರು ಶಿಕ್ಷಕ ಪಾರುಖ್ ವಂದಿಸಿದರು.
ಬಸವ ಜಯಂತಿ ಸಂದರ್ಭದಲ್ಲಿ ಕೊರೊನಾ ಸೊಂಕು ಜಗತ್ತನ್ನು ಬಿಟ್ಟು ತೊಲಗಲಿ ಎಂದು ಪ್ರಾರ್ಥನೆ ಸಲ್ಲಿಕೆ