ಜಾತಿಯತೆ ಹೋಗಲಾಡಿಸಿ ನಾವೆಲ್ಲರೂ ಒಂದೇ ಎನ್ನುವ ಸಂಕಲ್ಪ ಮಾಡಬೇಕು: ಡಿಸಿ

ದಾವಣಗೆರೆ: ಅವರವರು ಮಾಡುವ ಕಾಯಕಕ್ಕೊಂದು ಜಾತಿಯನ್ನು ಸೀಮಿತ ಮಾಡಲಾಗಿದ್ದು, ಅದನ್ನು ಹೋಗಲಾಡಿಸಲೆಂದೇ ಅಂದಿನ ಶರಣರು ಹೋರಾಟ ಮಾಡಿದರು. ಕಾರಣ ಜಾತಿಯತೆಯನ್ನು ಹೋಗಲಾಡಿ ನಾವೆಲ್ಲರೂ ಒಂದು ಎನ್ನುವ ಸಂಕಲ್ಪವನ್ನು ವಚನ ರಕ್ಷಕ ಮಡಿವಾಳ ಮಾಚಿದೇವರ ಜಯಂತಿಯಂದು ನಾವೆಲ್ಲರೂ ಮಾಡಬೇಕಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅಭಿಪ್ರಾಯಪಟ್ಟರು.
ದಾವಣಗೆರೆ ಜಿಲ್ಲಾ ಮಡಿವಾಳ ಮಾಚಿದೇವ ಸಂಘದ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಆವರಗೆರೆ ಎಚ್.ಜಿ.ಉಮೇಶ್ ಮಾತನಾಡಿ, ತನಗಾಗಿ ಎನ್ನದೇ ಇತರರಿಗಾಗಿ ಎಂದು ಕೆಲಸ ಮಾಡಿದಾಗ ಮಾತ್ರ ಸಮಾಜ ಉದ್ಧಾರ ಆಗುತ್ತದೆ. ಮಡಿವಾಳ ಮಾಚಿದೇವ ರಂತೆ ನಾವೆಲ್ಲರೂ ಶ್ರದ್ಧಾಭಕ್ತಿಯಿಂದ ಶರಣರ ಚಿಂತನೆಗಳನ್ನು ಮೈಗೂಡಿಸಿಕೊಂಡು ಬದುಕಬೇಕಾಗಿದೆ. ಅಂದು ವಚನ ಸಾಹಿತ್ಯಗಳನ್ನು ನಾಶ ಮಾಡಲು ಬಂದ ದುಷ್ಟರನ್ನು ಹಿಮ್ಮೆಟ್ಟಿಸಿ ಇಡೀ ವಚನ ಸಾಹಿತ್ಯಗಳನ್ನು ರಕ್ಷಿಸಿದಂತಹ ಮಹಾನ್ ವ್ಯಕ್ತಿ ಮಡಿವಾಳ ಮಾಚಿದೇವರ ಕುಲದಲ್ಲಿ ಹುಟ್ಟಿದವರು ನಾವು ಆ ಬಗ್ಗೆ ಹೆಮ್ಮೆ ಪಡಬೇಕಾಗಿದೆ. ಅದರಂತೆ ನಾವೂ ಕೂಡ ಸರ್ವರೊಂದಿಗೂ ಬರೆದು ಸಮಾಜದ ಹೊರಗಿನ ಕೊಳೆ ತೊಳೆಯುವ ಜೊತೆಗೆ ಆಂತರಿಕ ಕೊಳಕನ್ನು ತೊಳೆಯಲು ಮುಂದಾಗಬೇಕಿದೆ ಎಂದು ಕರೆ ನೀಡಿದರು.
ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ ಮಡಿವಾಳ ಮಾಚಿದೇವರ ಜಯಂತ್ಯುತ್ಸವ ಅಂಗವಾಗಿ ಆಯೋಜಿಸಲಾಗಿದ್ದ ಸರಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿಗಳು, ಜಾತಿಗೆ ಸೀಮಿತರಾಗದೆ ಎಲ್ಲರೊಂದಿಗೆ ಬೆರೆತು ನಾವು ಎಲ್ಲಾ ಕೆಲಸಗಳನ್ನು ಮಾಡಬೇಕಾಗಿದೆ. ನಮ್ಮನಮ್ಮಗಳ ಕಾಯಕದ ಆಧಾರದ ಮೇಲೆ ನಮ್ಮ ನಮ್ಮ ಜಾತಿಗಳನ್ನು ಸೀಮಿತಗೊಳಿಸಲಾಗಿದ್ದು ಇದರಿಂದ ಎಲ್ಲರೂ ಹೊರ ಬರಬೇಕಾಗಿದೆ. ಅಲ್ಲದೆ ಅಂದು ಶರಣರು ಮಾಡಿದ ಕಲ್ಯಾಣ ಕ್ರಾಂತಿಯ ಬಗ್ಗೆ ನಾವೆಲ್ಲ ಅರಿತು ಅವರಂತೆ ಸಾಗಬೇಕಾಗಿದೆ ಎಂದು ಕರೆ ನೀಡಿದರು.
ನಾನು ಈ ಹಿಂದೆ ಬಸವಕಲ್ಯಾಣದಲ್ಲಿ ಚುನಾವಣಾ ವೀಕ್ಷಕರಾಗಿ ಕೆಲಸ ಮಾಡಿದ ಸಂದರ್ಭದಲ್ಲಿ ಮಾಚಿದೇವರ ಗವಿಯನ್ನು ವೀಕ್ಷಿಸಿದೆ. ನಿಜಕ್ಕೂ ರೋಮಾಂಚನ ಆಯಿತು. ಅಷ್ಟೇ ಅಲ್ಲ ಅವರು ಬದುಕಿದ ರೀತಿಯನ್ನು ತಿಳಿದು ಆಶ್ಚರ್ಯವಾಯಿತು. ಅಂದಿನ ಕಲ್ಯಾಣಕ್ರಾಂತಿಯ ಕುಡಿಗಳೇ ಈಗ ದೇಶದಲ್ಲಿ ವಿಶ್ವದಲ್ಲಿ ರಾಜ್ಯದಲ್ಲಿ ಎಲ್ಲೆಡೆ ಪಸರಿಸಿದ್ದು ಇಂದು ನಾವುಗಳು ಈ ರೀತಿ ಬದುಕಲು ನಮಗೆ ಅನುಕೂಲವಾಗಿದೆ ಎಂದು ಹೇಳಿದರು.
ಸಮಾರಂಭದಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಸಿ.ಬಿ.ರಿಷ್ಯಂತ್ ಜಿಲ್ಲಾ ಪಂಚಾಯತಿಯ ಉಪಕಾರ್ಯದರ್ಶಿ ಬಿ.ಆನಂದ್, ರೇಷ್ಮಾ, ನಜ್ಮಾ, ಮಡಿವಾಳ ಸಮಾಜದ ಜಿಲ್ಲಾ ಅಧ್ಯಕ್ಷ ಎಂ.ನಾಗೇಂದ್ರಪ್ಪ, ಓಂಕಾರಪ್ಪ, ಪತ್ರಕರ್ತ ಎಂ.ವೈ.ಸತೀಶ್, ನಾಗಮ್ಮ, ಪಿ.ಮಂಜುನಾಥ್, ಯರಬಳ್ಳಿ ಉಮಾಪತಿ, ಡೈಮಂಡ್ ಮಂಜುನಾಥ್, ವಿಜಯಕುಮಾರ್, ಕಿಶೋರ್ ಕುಮಾರ್, ರವಿ ಚಿಕ್ಕಣ್ಣ, ಎಂ.ಆರ್. ಧನಂಜಯ್ ಯೋಗಪಟು ಪರುಶುರಾಮ್, .ಅಜಯ, ಪೂಜಾರ್ ಅಂಜಿನಪ್ಪ, ಫಕ್ಕೀರಪ್ಪ, ರವಿಕುಮಾರ್, ಎಂ.ರಾಜು, ಸೇರಿದಂತೆ ಇತರರು ಇದ್ದರು