ಸಿಎಂಗೆ ದಿಲ್ಲಿ ನಾಯಕರಿಂದ ಬುಲಾವ್.. ವರಿಷ್ಠರು ಕರೆದಿದ್ದಾದರೂ ಏಕೆ? ರಾಜ್ಯ ರಾಜಕಾರಣದಲ್ಲಿ ಕುತೂಹಲ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನು ದಿಲ್ಲಿಗೆ ಬರುವಂತೆ ಬಿಜೆಪಿ ವರಿಷ್ಠರು ದಿಢೀರ್ ಬುಲಾವ್ ನೀಡಿದ್ದಾರೆ. ರಾಜ್ಯದಲ್ಲಿ ವಿಧಾನಸಭಾ ಅಧಿವೇಶನ ನಡೆಯುತ್ತಿರುವಾಗಲೇ ವರಿಷ್ಠರು ಮುಖ್ಯಮಂತ್ರಿ ಅವರನ್ನು ದೆಹಲಿಗೆ ಕರೆಸಿಕೊಳ್ಳುತ್ತಿರುವುದು ಕುತೂಹಲದ ಬೆಳವಣಿಗೆ.
ಸಂಸತ್ ಅಧಿವೇಶನ ಮುಕ್ತಾಯವಾಗುತ್ತಿದ್ದಂತೆಯೇ ಬಿಜೆಪಿ ನಾಯಕರು ಭರ್ಜರಿ ಬೆಳವಣಿಗೆಗಳಿಗೆ ತಯಾರಿ ನಡೆಸಿದ್ದಾರೆ. ಅದರಲ್ಲೂ ಕರ್ನಾಟಕ ಬಗ್ಗೆ ಪಕ್ಷದ ರಾಜ್ಯಾದ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಂದ ಮಾಹಿತಿ ಪಡೆದಿರುವ ವರಿಷ್ಠರು ಸಿಎಂ ಬೊಮ್ಮಾಯಿ ಅವರಿಗೆ ತರಾತುರಿಯಲ್ಲೇ ಬುಲಾವ್ ನೀಡಿದ್ದಾರೆ. ಹಾಗಾಗಿ ಸಿಎಂ ಅವರು ಇಂದು ಸಂಜೆ ದೆಹಲಿಗೆ ತೆರಳಲಿದ್ದಾರೆ. ದೆಹಲಿಯಲ್ಲಿ ಅಮಿತ್ ಷಾ ಹಾಗೂ ಜೆಪಿ ನಡ್ಡಾ ಅವರನ್ನು ಭೇಟಿಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣೆಗಳು ಇನ್ನೇನು ಮೂರು-ನಾಲ್ಕು ತಿಂಗಳಲ್ಲಿ ನಡೆಯಲಿರುವುದರಿಂದ ಪಕ್ಷದೊಳಗೆ ಹಾಗೂ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಬದಲಾವಣೆ ಮಾಡುವ ಬಗ್ಗೆ ಚಿಂತನೆ ನಡೆದಿದೆ. ಅದರಲ್ಲೂ ಐಟಿ-ಬಿಟಿ ಹಬ್ ಬೆಂಗಳೂರನ್ನೊಳಗೊಂಡಿರುವ ಕರ್ನಾಟಕದಲ್ಲಿ ಅಧಿಪತ್ಯ ಮುಂದುವರಿಸುವ ಸಂಬಂಧದ ಕಾರ್ಯತಂತ್ರವೇ ಬಿಜೆಪಿಯ ಆದ್ಯ ಅಜೆಂಡಾ.
ಹಿಮಾಚಲ ಫಲಿತಾಂಶದ ಕಹಿ ಅನುಭವ..?
ಇತ್ತೀಚೆಗೆ ವಿಧಾನಸಭಾ ಚುನಾವಣೆ ನಡೆದ ರಾಜ್ಯಗಳ ಪೈಕಿ ಹಿಮಾಚಲ ಪ್ರದೇಶ ಬಿಜೆಪಿಯಿಂದ ಕೈತಪ್ಪಿದೆ. ಇದೀಗ ಕರ್ನಾಟಕದಲ್ಲೂ ಬಿಜೆಪಿ ವಿರೋಧಿ ಅಲೆ ಇದ್ದು, ಈಗಿರುವ ರೀತಿಯಲ್ಲೇ ಬಿಜೆಪಿ ಸರ್ಕಾರ ಮುನ್ನಡೆದರೆ ಹಿಮಾಚಲ ರೀತಿಯ ಫಲಿತಾಂಶವನ್ನು ಕರ್ನಾಟಕದಲ್ಲೂ ನೋಡಬೇಕಾದೀತು ಎಂಬುದು ವರಿಷ್ಠರ ಆತಂಕ.
ಈ ನಡುವೆ, ಬಿಟ್ ಕಾಯಿನ್ ಹಗರಣ, ಕೋವಿಡ್ ಹಗರಣ, ಪಿಎಸ್ಐ ನೇಮಕಾತಿ ಅಕ್ರಮ, ಶಿಕ್ಷಕರ ನೇಮಕಾತಿ ವಿವಾದ, ಮತದಾರರ ಪಟ್ಟಿ ಗೋಲ್ಮಾಲ್, ಪರ್ಸಂಟೇಜ್ ಕರ್ಮಕಾಂಡಗಳ ವಿಚಾರದಲ್ಲಿ ಸಿಎಂ ಬೊಮ್ಮಾಯಿ ಬಗ್ಗೆಯೇ ಬಿಜೆಪಿ-ಆರೆಸ್ಸೆಸ್ ನಾಯಕರಿಗೆ ಅಸಮಾಧಾನವಿದೆ. ನಾಯಕತ್ವ ಬದಲಾವಣೆಯಾಗದ ಹೊರತು ಕರ್ನಾಟಕದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಾಗದು ಎಂಬುದು ಹಲವರ ಅಭಿಪ್ರಾಯ. ಒಂದು ವೇಳೆ ನಾಯಕತ್ವ ಬದಲಾವಣೆ ಮಾಡದಿದ್ದರೆ ಪರ್ಯಾಯ ಕಾರ್ಯತಂತ್ರ ರೂಪಿಸಿ ಎಂಬುದು ವರಿಷ್ಠರಿಗೆ ಹಿರಿತಲೆಗಳ ಸಲಹೆ. ಹಾಗಾಗಿ ‘ಹೈ’ ತೀರ್ಮಾನದತ್ತ ಎಲ್ಕರ ಚಿತ್ತ ನೆಟ್ಟಿದೆ.
ಈ ನಡುವೆ, ಸಿಎಂ ಬಸವರಾಜ್ ಬೊಮ್ಮಾಯಿ ಅವರು ಸಂಪುಟ ವಿಸ್ತರಣೆಯ ಕಸರತ್ತಿನಲ್ಲಿ ತೊಡಗಿದ್ದು. ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವ ಹಿನ್ನೆಲೆಯಲ್ಲಿ ಸಂಪುಟದಲ್ಲಿ ಖಾಲಿ ಇರುವ ಸ್ಥಾನಗಳನ್ನು ಭರ್ತಿ ಮಾಡುವ ಅಗತ್ಯದ ಬಗ್ಗೆ ವರಿಷ್ಠರ ಗಮನಸೆಳೆದಿದ್ದಾರೆ. ಪ್ರಬಲ ಸಮುದಾಯಗಳ ನಾಯಕರಿಗೆ ಸಚಿವ ಸ್ಥಾನ ನೀಡಿದಲ್ಲಿ ಪಕ್ಷ ಬಲಗೊಳ್ಳಬಹುದೆಂಬ ಲೆಕ್ಕಾಚಾರವೂ ಇದೆ. ಹಾಗಾಗಿ ಸಂಪುಟ ವಿಸ್ತರಣೆಗೆ ವರಿಷ್ಠರು ಗ್ರೀನ್ ಸಿಗ್ನಲ್ ನೀಡುವ ಸಾಧ್ಯಗಳೂ ಇವೆ. ಹಾಗೊಂದು ವೇಳೆ ಸಂಪುಟ ವಿಸ್ತರಣೆಗೆ ವರಿಷ್ಠರು ಸಮ್ನತಿಸಿದಲ್ಲಿ ಈಶ್ವರಪ್ಪ ಹಾಗೂ ರಮೇಶ್ ಜಾರಕಿಹೊಳಿ ಅವರು ಮತ್ತೊಮ್ಮೆ ಮಂತ್ರಿಯಾಗುವ ಸಾಧ್ಯತೆಗಳೇ ಹೆಚ್ಚಿವೆ.
ಇದೇ ವೇಳೆ ಕೋವಿಡ್ ಪರಿಸ್ಥಿತಿಯನ್ಬು ಪರಿಣಾಮಕಾರಿಯಾಗಿ ನಿಭಾಯಿಸಿ ಜನರಿಂದ ಶಹಬ್ಬಾಸ್ ಗಿರಿ ಗಿಟ್ಟಿಸಿಕೊಂಡಲ್ಲಿ ಜನರ ಮನಗೆಲ್ಲಬಹುದೆಂಬ ಸಲಹೆಯೂ ವರಿಷ್ಠರ ಬಳಿ ಇದೆ. ಹಾಗಾಗಿ ಸಿಎಂ ಹಾಗೂ ವರಿಷ್ಠರ ಮುಖಾಮುಖಿ ನಂತರ ರಾಜ್ಯ ರಾಜಕಾರಣ ಭಾರೀ ಬದಲಾವಣೆಯನ್ನು ಕಾಣುವುದು ನಿಶ್ಚಿತ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ.