ವಿಶ್ವ ಕ್ಯಾನ್ಸರ್ ದಿನಾಚರಣೆ ಕ್ಯಾನ್ಸರ್ ರೋಗ ಗುಣಪಡಿಸಲು ಈಗ ತಂತ್ರಜ್ಞಾನ ಲಭ್ಯವಿದೆ- ಡಾ. ವಿಜಯ ಮಹಾಂತೇಶ್

ದಾವಣಗೆರೆ: ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ದೇಶದಲ್ಲಿ ಬಹಳಷ್ಟು ಸಾಧನೆಗಳಾಗಿದ್ದು, ಕ್ಯಾನ್ಸರ್ ರೋಗವನ್ನು ಗುಣಪಡಿಸುವಂತಹ ತಂತ್ರಜ್ಞಾನ ಪ್ರಸ್ತುತ ದಿನಮಾನದಲ್ಲಿ ಲಭ್ಯವಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕಾಧಿಕಾರಿ ಡಾ. ವಿಜಯ ಮಹಾಂತೇಶ್ ದಾನಮ್ಮನವರ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾ ಅಧಿಕಾರಿಗಳ ಕಚೇರಿ, ಜಿಲ್ಲಾ ಎನ್.ಸಿ.ಡಿ. ಕೋಶ ದಾವಣಗೆರೆ ಇವರ ಸಂಯುಕ್ತಾಶ್ರಯದಲ್ಲಿ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿಶ್ವ ಕ್ಯಾನ್ಸರ್ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೊರೋನಾಕ್ಕಿಂತಲೂ ಅಪಾಯಕಾರಿ ರೋಗಗಳು ಜಗತ್ತಿನಲ್ಲಿವೆ ಅವುಗಳಲ್ಲಿ ಕ್ಯಾನ್ಸರ್, ಟಿಬಿ, ಏಡ್ಸ್ ನಂತಹವುಗಳು ಕೂಡ ಒಳಗೊಂಡಿವೆ. ಭಾರತ ದೇಶವು ಕ್ಯಾನ್ಸರ್ ಖಾಯಿಲೆಗೆ ತುತ್ತಾದವರ ಪಟ್ಟಿಯಲ್ಲಿ ಜಗತ್ತಿನಲ್ಲಿ 5ನೇ ಸ್ಥಾನದಲ್ಲಿದೆ. ತಂಬಾಕು ಸೇವನೆ ಮಾಡುವುದರಿಂದ ಕ್ಯಾನ್ಸರ್ ಖಾಯಿಲೆ ಬರುವ ಸಾಧ್ಯತೆ ಶೇ. 90 ರಷ್ಟಿದೆ. ಅಪೌಷ್ಠಿಕ ಆಹಾರ, ವಾಯುಮಾಲಿನ್ಯ, ಆರೋಗ್ಯದ ಬಗೆಗಿನ ನಿಷ್ಕಾಳಜಿಯಿಂದಲೂ ಮನುಷ್ಯ ಕ್ಯಾನ್ಸರ್ ರೋಗಕ್ಕೆ ತುತ್ತಾಗುವ ಸಂಭವವಿದೆ. ಹಿಂದೆ ಜನರಲ್ಲಿದ್ದ ಬಡತನ, ಮೂಢನಂಬಿಕೆ, ಅಲಕ್ಷ್ಯ, ನಿμÁ್ಕಳಜಿ ಹಾಗೂ ಅಸ್ಪತ್ರೆ, ಚಿಕಿತ್ಸೆಗಳ ಸೌಲಭ್ಯ ಕೊರತೆಯಿಂದ ಖಾಯಿಲೆಗಳು ದೊಡ್ಡ ಮಟ್ಟಕ್ಕೆ ತಲುಪಿ ಸಾವಿಗಿಡಾಗುತ್ತಿದ್ದರು. ಪ್ರಸ್ತುತ ದಿನ ಮಾನಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಬಹಳಷ್ಟು ಬದಲಾವಣೆಗಳಾಗಿವೆ. ಕ್ಯಾನ್ಸರ್ನಂತಹ ರೋಗಗಳಿಗೆ ಸರ್ಜರಿಯ ಮೂಲಕವೂ ಚಿಕಿತ್ಸೆ ಪಡೆಯಬಹುದಾಗಿದೆ. ಹೊಸ ಹೊಸ ಚಿಕಿತ್ಸೆಗಳ ಮೂಲಕ ಪ್ರಾಥಮಿಕ ಹಂತದಲ್ಲೇ ಪತ್ತೆ ಹಚ್ಚಿ ತಪಾಸಣೆ ಮಾಡಿಸಿಕೊಂಡಲ್ಲಿ, ಸುಲಭವಾಗಿ ಗುಣಪಡಿಸಿಕೊಳ್ಳ್ಳಬಹುದಾಗಿದೆ. ಆತ್ಮವಿಶ್ವಾಸದಿಂದ ಈ ಖಾಯಿಲೆಯನ್ನು ಎದುರಿಸಿ ಜಯಗಳಿಸಬೇಕಾಗಿದೆ, ಹಾಗಾಗಿ ಮನೋಸ್ಥೈರ್ಯ ಆತ್ಮಸ್ಥೈರ್ಯ ತುಂಬುವ ಉದ್ದೇಶದಿಂದ ಇಂತಹ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದರು.
ಕೊರೋನಾದ ಮೊದಲನೇ ಅಲೆಯ ಸಂದರ್ಭದಲ್ಲಿ ಜನರ ಜೀವನ ಅಸ್ಥವ್ಯಸ್ಥವಾಗಿತ್ತು. ಅಂತಹ ತುರ್ತು ಪರಿಸ್ಥಿತಿಯಲ್ಲಿ ಕಾರ್ಮಿಕರಿಗೆ, ನಿರ್ಗತಿಕರಿಗೆ ಕೆಲವು ಸರ್ಕಾರೇತರ ಸಂಸ್ಥೆಗಳು ಆಹಾರ, ದಿನಸಿ ಪದಾರ್ಥಗಳನ್ನು ಒಳಗೊಂಡ ಕಿಟ್ಗಳನ್ನು ಒದಗಿಸುವ ಕಾರ್ಯ ಮಾಡಿವೆ. ಎರಡನೇ ಅಲೆಯ ಸಂದರ್ಭದಲ್ಲೂ ಕೂಡ ಕೆಲವು ಸರ್ಕಾರೇತರ ಸಂಸ್ಥೆಗಳು ಆಕ್ಸಿಜನ್, ವೆಂಟಿಲೇಟರ್, ಬೆಡ್ ಮುಂತಾದ ಸೌಲಭ್ಯ ಒದಗಿಸುವ ಕಾರ್ಯವನ್ನು ಕೈಗೊಂಡಿದ್ದವು. ಈ ರೀತಿಯ ಸಾಮಾಜಿಕ ಕಾರ್ಯಗಳನ್ನು ಕೈಗೊಂಡ ಸರ್ಕಾರೇತರ ಸಂಸ್ಥೆಗಳನ್ನು ರಾಜ್ಯ ಸರ್ಕಾರ ಗುರುತಿಸಿ ಅವರಿಗೆ ಪ್ರಮಾಣಪತ್ರ ವಿತರಿಸುವ ಕಾರ್ಯ ಕೈಗೊಂಡಿದೆ ಎಂದರು.
ಕ್ಯಾನ್ಸರ್ ನಿಂದ ಗುಣಮುಖರಾದ ಆರ್.ಟಿ. ಅರುಣ್ ಕುಮಾರ್ ಮಾತನಾಡಿ ಒಂದು ಕಾಲದಲ್ಲಿ ಕ್ಯಾನ್ಸರ್ ಒಂದು ವಾಸಿಯಾಗದ ದೊಡ್ಡ ಖಾಯಿಲೆಯಾಗಿತ್ತು. ಆದರೆ ಈಗ ಕಾಲ ಬದಲಾಗಿದೆ ಕ್ಯಾನ್ಸರ್ ರೋಗವನ್ನು ಸೂಕ್ತ ಚಿಕಿತ್ಸೆ ಪಡೆಯುವ ಮೂಲಕ ಗುಣಪಡಿಸಬಹುದಾಗಿದೆ. ಈ ರೀತಿ ಗುಣಮುಖರಾದ ಅನೇಕರಲ್ಲಿ ನಾನು ಕೂಡ ಒಬ್ಬ. ಕ್ಯಾನ್ಸರ್ ರೋಗಿಗಳು “ಪ್ರಾರ್ಥಿಸಿ, ಎದುರಿಸಿ, ಜಯಗಳಿಸಿ” ಎಂಬ ಮೂರು ಪದಗಳ ಘೋಷವಾಕ್ಯವನ್ನು ಅಳವಡಿಸಿಕೊಂಡರೆ ಕ್ಯಾನ್ಸರ್ ಖಾಯಿಲೆಯಿಂದ ಗುಣಮುಖರಾಗಬಹುದು ಎಂದರು.
ಇದೇ ವೇಳೆ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಕುರಿತ ಭಿತ್ತಿ ಚಿತ್ರಗಳನ್ನು ಬಿಡುಗಡೆಗೊಳಿಸಿದರು ಮತ್ತು ಎನ್ಜಿಓ ಸಂಸ್ಥೆಗಳಾದ ಸ್ಪೂರ್ತಿ, ಬೆಳಕು, ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದ ಕುರಿತು ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ.ಜಿ.ಡಿ. ರಾಘವನ್ ಪ್ರಾಸ್ತಾವಿಕವಾಗಿ ಮಾತನಾಡಿ, ದೇಶದಲ್ಲಿ ಕ್ಯಾನ್ಸರ್, ಹೃದ್ರೋಗ, ಅನಿಯಂತ್ರಿತ ಮಧುಮೇಹ ನಂತಹ ಅಸಾಂಕ್ರಾಮಿಕ ರೋಗಗಳಿಂದಲೇ ಶೇ. 60 ರಿಂದ 65 ರಷ್ಟು ಮರಣ ಪ್ರಕರಣಗಳು ದಾಖಲಾಗುತ್ತವೆ. ಆಶಾ ಕಾರ್ಯಕರ್ತೆಯರ ಮೂಲಕ 30 ವರ್ಷ ಮೇಲ್ಪಟ್ಟವರ ಆರೋಗ್ಯ ಸ್ಥಿತಿಗತಿ ಕುರಿತು ಜಿಲ್ಲೆಯಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಸಾರ್ವಜನಿಕರು ಇದಕ್ಕೆ ಸಹಕಾರ ನೀಡಬೇಕು ಎಂದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ನಾಗರಾಜ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಜಿ.ಡಿ. ರಾಘವನ್, ಎಸ್.ಎಸ್. ಆಸ್ಪತ್ರೆಯ ಕ್ಯಾನ್ಸರ್ ಶಸ್ತ್ರಚಿಕಿತ್ಸಾ ತಜ್ಞರಾದ ಡಾ.ಲಿಂಗನಗೌಡ ಪಾಟೀಲ್, ಡಿಯುಡಿಸಿ ಯೋಜನಾಧಿಕಾರಿ ನಜ್ಮಾ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಗಂಗಪ್ಪ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ರೇಷ್ಮಾ ಕೌಸರ್ ಹಾಗೂ ಇತರರು ಉಪಸ್ಥಿತರಿದ್ದರು.