ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆ ಇಲ್ಲ – ಬೈರತಿ ಬಸವರಾಜ್

ದಾವಣಗೆರೆ: ಯಾವೂದೇ ಕಾರಣಕ್ಕೂ ಸಿಎಂ ಬದಲಾವಣೆ ಇಲ್ಲ ಎಂದು ಸಚಿವ ಭೈರತಿ ಬಸವರಾಜ್ ಪುನರುಚ್ಛರಿಸಿದ್ದು, ಬಿಎಸ್ ವೈ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ರಾಜ್ಯದ ಅಭಿವೃದ್ದಿ ಕುರಿತು ಚರ್ಚಿಸಲು ಅವರು ದೆಹಲಿಗೆ ಹೋಗಿದ್ದರು, ಅದನ್ನು ತಪ್ಪಾಗಿ ಅರ್ಥೈಸುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಜಿಎಂಐಟಿ ಅತಿಥಿ ಗೃಹದಲ್ಲಿ ಮಾತನಾಡಿರುವ ಅವರು, ಮಿತ್ರ ಮಂಡಳಿಯ ದೆಹಲಿ ಪ್ರವಾಸ ಊಹಾಪೋಹ ಕುರಿತು ಸ್ಪಷ್ಟನೆ ನೀಡಿದರು.
ನಗರಾಭಿವೃದ್ದಿ ಇಲಾಖೆ ಅಭಿವೃದ್ಧಿ ಅನುದಾನ ವಿಚಾರದಲ್ಲಿ ಕೇಂದ್ರ ನಗರಾಭಿವೃದ್ದಿ ಸಚಿವರನ್ನು ಭೇಟಿ ಸಾಧ್ಯತೆ ಇದೆ. ಅದನ್ನು ತಪ್ಪಾಗಿ ಅರ್ಥೈಸುವ ಅಗತ್ಯವಿಲ್ಲ ಎಂದರು.
ಮಾಜಿ ಸಿಎಂ ಕುಮಾರಸ್ವಾಮಿಯವರು ಸೂಟ್ಕೇಸ್ ಹೇಳಿಕೆ ವಿಚಾರವಾಗಿ, ಪ್ರತಿಕ್ರಿಯಿಸಿದ ಅವರು, ಸೂಟ್ಕೇಸ್ ಬಗ್ಗೆ ಯಾವ ದೃಷ್ಟಿಯಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಪ್ರವಾಸಕ್ಕೆ ಹೋದಾಗ ಸೂಟ್ಕೇಸ್ ತೆಗೆದುಕೊಂಡು ಹೋಗೋದು ಸರ್ವೇ ಸಾಮಾನ್ಯ ವಿಷಯ. ಅದರಲ್ಲಿ ಬಟ್ಟೆಬರೆ ತೆಗೆದುಕೊಂಡು ಹೋಗಿರ್ತಾರೆ ಅದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಹೇಳಿದರು.