ಲಸಿಕೆ ನೀಡಿಕೆಯಿಂದ ಕೋವಿಡ್ 3ನೇ ಅಲೆ ಪರಿಣಾಮಕಾರಿ ನಿಯಂತ್ರಣ- ಎಸ್.ಆರ್. ಉಮಾಶಂಕರ್

WhatsApp Image 2022-03-05 at 5.21.09 PM

ದಾವಣಗೆರೆ: ಸಾರ್ವಜನಿಕರಿಗೆ ಕೋವಿಡ್ ನಿರೋಧಕ ಲಸಿಕೆ ನೀಡಿಕೆಯಿಂದ ಕೊರೊನಾದ ನಿಯಂತ್ರಣಕ್ಕೆ ನೆರವಾಗಿದೆ. ತ್ವರಿತವಾಗಿ ಲಸಿಕೆ ನೀಡಿಕೆಯಿಂದಾಗಿ ಮೂರನೇ ಅಲೆಯು ಮೊದಲೆರಡು ಅಲೆಗಳಷ್ಟು ಹೆಚ್ಚು ಪರಿಣಾಮ ಬೀರಿಲ್ಲ ಎಂದು ಸಹಕಾರ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳೂ ಆಗಿರುವ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ್ ಅಭಿಪ್ರಾಯಪಟ್ಟರು.
ಶನಿವಾರದಂದು ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಕೊರೊನಾ ಪರಿಸ್ಥಿತಿ ಕುರಿತು ಕರೆಯಲಾಗಿದ್ದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವೈರಸ್‍ಗಳು ಸಾಮಾನ್ಯವಾಗಿ ದಿನಗಳೆದಂತೆ ದುರ್ಬಲವಾಗುತ್ತವೆ. ತ್ವರಿತಗತಿಯಲ್ಲಿ ಕೋವಿಡ್ ನಿರೋಧಕ ಲಸಿಕೆ ನೀಡಿದ ಪರಿಣಾಮವಾಗಿ, ಮೂರನೆ ಅಲೆ ಹೆಚ್ಚು ಆತಂಕಕಾರಿಯಾಗಲಿಲ್ಲ. ಮುಂಬರುವ ದಿನಗಳಲ್ಲೂ ಕೊರೊನಾ ಇದೇ ರೀತಿ ದುರ್ಬಲವಾಗಿರಲಿ ಎಂದು ಆಶಿಸುವುದಾಗಿ ಹೇಳಿದರು.
ಕೊರೊನಾ ಸೋಂಕಿನ ಕುರಿತು ಮಾಹಿತಿ ನೀಡಿದ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಜಿ.ಡಿ. ರಾಘವನ್, ಕಳೆದ ವಾರ ಜಿಲ್ಲೆಯಲ್ಲಿ ಪಾಸಿಟಿವಿಟಿ ದರ ಶೇ.0.31ರಷ್ಟಿತ್ತು. ಕಳೆದ ತಿಂಗಳು ಪಾಸಿಟಿವಿಟಿ ದರ ಶೇ.1.33ರಷ್ಟಿತ್ತು ಎಂದು ಹೇಳಿದರು.

ಜನವರಿ 01 ರ ನಂತರ 5 ವರ್ಷದೊಳಗಿನ 34 ಹಾಗೂ 6-18 ವರ್ಷದವರೆಗಿನ 2,062 ಮಕ್ಕಳಲ್ಲಿ ಕೊರೊನಾ ಕಂಡು ಬಂದಿದೆ. ಒಟ್ಟಾರೆ 6,492 ಜನರಲ್ಲಿ ಕೊರೊನಾ ದೃಢಪಟ್ಟಿದೆ. 18 ವರ್ಷದೊಳಗಿನ ಮಕ್ಕಳಲ್ಲಿ ಕೊರೊನಾ ಕಂಡು ಬರುವ ಪ್ರಮಾಣ ಸರಾಸರಿ ಶೇ.20ರಷ್ಟಿದೆ. ಆದರೆ, ಜಿಲ್ಲೆಯಲ್ಲಿ ಈ ಪ್ರಮಾಣ ಹೆಚ್ಚಾಗಿ ಶೇ.32 ರಷ್ಟಿದೆ. ಮೂರನೇ ಅಲೆ ಕಂಡು ಬಂದ ನಂತರ ಇದುವರೆಗೂ 1.06 ಲಕ್ಷ ಕೋವಿಡ್ ಟೆಸ್ಟ್‍ಗಳನ್ನು ನಡೆಲಾಗಿದೆ. 6,492 ಜನರಲ್ಲಿ ಪಾಸಿಟಿವ್ ಕಂಡು ಬಂದಿದೆ. ಒಟ್ಟಾರೆ ಪಾಸಿಟಿವ್ ದರ ಶೇ.6.10 ಆಗಿದೆ. ಮೂರನೇ ಅಲೆಯಲ್ಲಿ 15 ಜನ ಸಾವನ್ನಪ್ಪಿದ್ದು, ಸಾವಿನ ದರ ಶೇ.0.23ರಷ್ಟು ಎಂದರು.
ಕಳೆದ ಎರಡು ಅಲೆಗಳಂತೆ ಮೂರನೇ ಅಲೆಯಲ್ಲೂ ಪುರುಷರಲ್ಲಿ ಸೋಂಕಿನ ಪ್ರಮಾಣ ಹೆಚ್ಚು ಕಂಡುಬಂದಿದೆ. 3,547 ಪುರುಷರು ಹಾಗೂ 2,910 ಮಹಿಳೆಯರಲ್ಲಿ ಕೋವಿಡ್ ಸೋಂಕು ಕಂಡು ಬಂದಿದೆ. ಮೃತರಲ್ಲಿ 08 ಪುರುಷರು ಹಾಗೂ 07 ಮಹಿಳೆಯರಿದ್ದಾರೆ ಎಂದು ಮಾಹಿತಿ ನೀಡಿದರು.

ಪ್ರಸ್ತುತ ಜಿಲ್ಲೆಯಲ್ಲಿ ಪ್ರತಿದಿನ 800 ಕೊರೊನಾ ಟೆಸ್ಟ್ ಮಾಡಲು ಸರ್ಕಾರ ಸೂಚನೆ ನೀಡಿದೆ. ಜಿಲ್ಲೆಯಲ್ಲಿ ಪ್ರತಿದಿನ ಅದಕ್ಕೂ ಹೆಚ್ಚು ಟೆಸ್ಟ್‍ಗಳನ್ನು ಮಾಡಲಾಗುತ್ತಿದೆ. ರ್ಯಾಂಡಮ್ ಟೆಸ್ಟ್ ನಿಲ್ಲಿಸಲಾಗಿದ್ದು, ಸೋಂಕಿತರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಕ್ಕೆ ಬಂದಿರುವರನ್ನು ಮಾತ್ರ ಪರೀಕ್ಷೆಗೆ ಒಳಪಡಿಲಾಗುತ್ತಿದೆ ಎಂದರು.
ಕಳೆದ ವರ್ಷ 287 ಡೆಂಗ್ಯೂ ಪ್ರಕರಣಗಳು ವರದಿಯಾಗಿತ್ತು. ಈ ವರ್ಷ 11 ಜನರಿಗೆ ಡೆಂಗ್ಯೂ ಖಚಿತಪಟ್ಟಿದೆ. ಬೇಸಿಗೆಯ ಕಾಲದಲ್ಲಿ ಉದರ ಸಂಬಂಧದ ಸಮಸ್ಯೆಗಳು ಹೆಚ್ಚಾಗುವುದರಿಂದ, ಈ ಬಗ್ಗೆ ಗಮನ ಹರಿಸಲಾಗುತ್ತಿದೆ ಎಂದು ಅಧಿಕಾರಿಗಳು ಸಭೆಗೆ ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಲಸಿಕೆ ನೋಡಲ್ ಅಧಿಕಾರಿಯೂ ಆಗಿರುವ ಆರ್.ಸಿ.ಹೆಚ್. ಅಧಿಕಾರಿ ಡಾ. ಮೀನಾಕ್ಷಿ, ಮೊದಲ ಡೋಸ್ ಲಸಿಕೆ ಶೇ.100ರಷ್ಟು ಪೂರ್ಣವಾಗಿದೆ. ಎರಡನೇ ಡೋಸ್ ಲಸಿಕೆ ಶೇ.92ರಷ್ಟು ನೀಡಲಾಗಿದೆ. 15-18 ವರ್ಷದವರೆಗಿನ ಶೇ.100ರಷ್ಟು ಮಕ್ಕಳಿಗೆ ಮೊದಲ ಹಾಗೂ ಶೇ.89ರಷ್ಟು ಮಕ್ಕಳಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ. ಸದ್ಯ ಜಿಲ್ಲೆಯಲ್ಲಿ 1.40 ಲಕ್ಷ ಡೋಸ್ ಲಸಿಕೆ ಲಭ್ಯವಿದೆ ಎಂದು ಹೇಳಿದರು.
ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ವಿಜಯ ಮಹಾಂತೇಶ ದಾನಮ್ಮನವರ್, ಜಿ.ಪಂ. ಉಪಕಾರ್ಯದರ್ಶಿ ಆನಂದ್, ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಾಗರಾಜ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!