ಅಕ್ರಮ ಮರಳು ಸಾಗಾಟಕ್ಕೆ ಹರಿಹರದ ಮರಳು ದುರುಳರು ಮಾಡಿದ ಉಪಾಯವೇನು ಗೊತ್ತಾ.!?

ದಾವಣಗೆರೆ : ಹಲವು ದಿನಗಳಿಂದ ಎಗ್ಗಿಲ್ಲದೇ ಮರಳು ದಂಧೆ ನಡೆಯುತ್ತಿದ್ದರು ಸಹ ಅಧಿಕಾರಿಗಳು ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿದ್ದಾರೆ. ಒಂದು ಲಗೇಜ್ ಆಟೋ ಗೆ ಒಂದು ರಾತ್ರಿಗೆ 10 ಸಾವಿರ ಫಿಕ್ಸ್ ಮಾಡಿಕೊಂಡು ರಾತ್ರಿ 9 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೂ ಮರಳು ಸರಾಗವಾಗಿ ಸಾಗಿಸುತ್ತಾರೆ. ಒಂದು ಟ್ರಿಪ್ ನಲ್ಲಿ 50 ಮರಳಿನ ಚೀಲದಂತೆ ಎರಡು ಟ್ರಪ್ ಗೆ 100 ಚೀಲ ಮರಳು ತುಂಬಿಕೊಂಡು ಹೋಗುವ ಮರಳು ದಂಧೆಕೋರರು ದಿನ ಒಂದಕ್ಕೆ ಒಬ್ಬ 5 ಟನ್ ಮರಳು ಸಾಗಾಟ ಮಾಡುತ್ತಾನೆ. ಒಂದು ರಾತ್ರಿಗೆ 8 ಲಗೇಜ್ ವಾಹನಗಳಿಂದ ಅಂದಾಜು 20 ಟ್ರಿಪ್ ಮರಳು ಸಾಗಾಟವಾಗುತ್ತಿದೆ. ಕುಮಾರಪಟ್ಟಣಂ ಬಳಿಯ ಅಯ್ಯಪ್ಪ ಸ್ವಾಮಿ ದೇವಾಲಯದ ಬಳಿಯಿರುವ ತುಂಗಭದ್ರಾ ನದಿಯಿಂದ ಹಾಗೂ ನೆಲವಾಗಲಿನಿಂದ ಹರಿಹರಕ್ಕೆ ಅಕ್ರಮವಾಗಿ ಮರಳು ಸಾಗಾಟವಾಗುತ್ತದೆ.
ಇನ್ನೊಂದು ಬಹುಮುಖ್ಯ ವಿಷಯವೆಂದರೆ ಅಕ್ರಮ ತಡೆಯುವ ಅಧಿಕಾರಿಗಳೇ ಅಕ್ರಮ ಮರಳುಗಾರಿಕೆ ನಡೆಸಲು ಕುಮ್ಮಕ್ಕು ನೀಡಿರುವುದು ಸಾಬೀತಾಗಿದೆ. ದಕ್ಷ ಐಪಿಎಸ್ ಅಧಿಕಾರಿ ಎಸ್.ಪಿ ರಿಷ್ಯಂತ್ ಇರುವೆಡೆ ಅಕ್ರಮ ಮರಳುಗಾರಿಕೆ ನಡೆಯುತ್ತಿರುವುದನ್ನು ನಿಮ್ಮ ಗರುಡವಾಯ್ಸ್ ತಂಡ ಪತ್ತೆ ಹಚ್ಚಿದೆ. ಈ ವರದಿ ಆಧಾರದ ಮೇಲೆ ಸಂಬಂಧಪಟ್ಟ ಇಲಾಖೆ ಅಕ್ರಮ ಮರಳು ದಂಧೆಕೋರರ ಎಡೆಮುರಿ ಕಟ್ಟಬೇಕಿದೆ. ಈ ಹಿಂದೆ ಹಲವು ಬಾರಿ ಅಕ್ರಮ ಮರಳುಗಾರಿಕೆ ನಡೆಯುತ್ತಿರುವ ಬಗ್ಗೆ ವರದಿ ಮಾಡಲಾಗಿತ್ತು. ಆದರೂ ಅಧಿಕಾರಿಗಳು ಎಚ್ಛೆತ್ತುಕೊಂಡಿಲ್ಲ.
ಅಕ್ರಮವಾಗಿ ಮರಳು ಸಾಗಾಟಕ್ಕೆ ನೂತನ ಉಪಾಯ ಕಂಡುಕೊಂಡ ದಂಧೆಕೋರರು:
ಮರಳು ಸಾಗಟಕ್ಕೆ ಮರಳು ದಂಧೆಕೋರರು ಹೊಸ ಮಾರ್ಗ ಕಂಡುಕೊಂಡಿದ್ದಾರೆ. ಈ ಹಿಂದೆ ಮಜಡಾ ಲಾರಿ ಹಾಗೂ ಟ್ರ್ಯಾಕ್ಟರ್ ಗಳ ಮೂಲಕ ಮರಳು ಸಾಗಟ ಮಾಡುತ್ತಿದ್ದ ಮರಳು ದಂಧೆಕೋರರು ಈಗ ಆಟೋಗಳ ಮೂಲಕ ಸಿಮೆಂಟ್ ಚೀಲದಲ್ಲಿ ಮರಳು ತುಂಬಿ ಮರಳು ಸಾಗಿಸುತ್ತಿದ್ದಾರೆ. ಚೀಲದಲ್ಲಿ ಮರಳು ಸಾಗಿಸಿದರೆ ಯಾರಿಗೂ ಗೊತ್ತಾಗುವುದಿಲ್ಲ ಎನ್ನುವುದು ಇವರ ಯೋಚನೆ. ಒಟ್ಟಾರೆ ಅಕ್ರಮ ಮರಳು ಸಾಗಾಟ ತಡೆಯಬೇಕಿದ್ದ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿರುವುದೇಕೆ ಎನ್ನುವುದು ಯಕ್ಷ ಪ್ರಶ್ನೆಯಾಗಿದೆ.?