ಪೋಲೀಸರಿಗೆ ಆವಾಜ್ ಹಾಕಿದ ಗಣಿ ಸಚಿವರ ಆಪ್ತನ ವಿರುದ್ದ ಎಫ್ ಐ ಆರ್
ದಾವಣಗೆರೆ: ಪೊಲೀಸರೊಂದಿಗೆ ಕಾಂಗ್ರೆಸ್ ಮುಖಂಡರ ಅಸಭ್ಯ ವರ್ತನೆ, ವಿಡಿಯೋ ವೈರಲ್, ಕ್ಷುಲ್ಲಕ ಕಾರಣಕ್ಕೆ ಪೊಲೀಸರು ಹಾಗೂ ಕಾಂಗ್ರೆಸ್ ಮುಖಂಡರ ನಡುವೆ ಮಾತಿನ ಚಕಮಕಿ ನಡೆದಿದ್ದು, ಈ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ರಾತ್ರಿ ಹೊತ್ತು ಕಟ್ಟೆ ಮೇಲೆ ಕುಳಿತಿದ್ದ ಯುವಕನೊಬ್ಬನಿಗೆ ಪೊಲೀಸರು ಮನೆಗೆ ಹೋಗು ಅಂತ ಹೇಳಿದ್ದಕ್ಕೇ ಆ ಯುವಕನ ಕುಟುಂಬಸ್ಥರು ಪೊಲೀಸರೊಂದಿಗೆ ವಾಕ್ಸಮರಕ್ಕಿಳಿದ ಘಟನೆ ದಾವಣಗೆರೆಯ ಆಜಾದ್ ನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕಾಂಗ್ರೆಸ್ ಮುಖಂಡ, ದೂಡಾ ಮಾಜಿ ಅಧ್ಯಕ್ಷ ಅಯೂಬ್ ಪೈಲ್ವಾನ್, ಸಾದಿಕ್ ಪೈಲ್ವಾನ್ ಹಾಗೂ ವೃತ್ತ ನಿರೀಕ್ಷಕ ಇಮ್ರಾನ್ ನಡುವೆ ಮಾತಿನ ಚಕಮಕಿ ನಡೆದಿದೆ.
ನ.16 ರ ರಾತ್ರಿ ಕಾಂಗ್ರೆಸ್ ಮುಖಂಡ ಅಯೂಬ್ ಪೈಲ್ವಾನ್ ಮಗ ಕಟ್ಟಡವೊಂದರ ಮುಂದೆ 6-7 ಬೈಕ್ ನಿಲ್ಲಿಸಿಕೊಂಡು, ಕಟ್ಟೆ ಮೇಲೆ ಕುಳಿತಿದ್ದ ವೇಳೆ ಆತನಿಗೆ ಮನೆಗೆ ಹೋಗುವಂತೆ ಪೊಲೀಸ್ ಗಸ್ತು ಸಿಬ್ಬಂದಿ ತಿಳಿಸಿದ್ದಾರೆ. ಆಗ ಆ ಯುವಕ ಪೊಲೀಸರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ ಎನ್ನಲಾಗಿದೆ. ನಂತರ ಆಜಾದ್ ನಗರ ಪೊಲೀಸ್ ಠಾಣೆ ಸಿಪಿಐ ಇಮ್ರಾನ್ ಪಾಷಾ ಸಹ ಸ್ಥಳಕ್ಕೆ ಧಾವಿಸಿದ್ದಾರೆ. ಆಗ ಯುವಕನ ಜೊತೆ ಆತನ ತಂದೆ ಹಾಗೂ ಚಿಕ್ಕಪ್ಪ ಇಬ್ಬರೂ ಇಮ್ರಾನ್ ಪಾಷಾ ಜೊತೆ ವಾಗ್ವಾದಕ್ಕಿಳಿದಿದ್ದಾರೆ. ಈ ಗಲಾಟೆ ದೃಶ್ಯವನ್ನು ಪೊಲೀಸರು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ.
ಸದ್ಯ ಘಟನೆಗೆ ಸಂಬಂಧಿಸಿ ಅಯೂಬ್ ಪೈಲ್ವಾನ್, ಸಾದಿಕ್ ಪೈಲ್ವಾನ್, ಹಸೇನ್, ಹುಸೇನ್ ಎಂಬ ನಾಲ್ವರ ವಿರುದ್ಧ ಆಜಾದ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಐಪಿಸಿ ಸೆಕ್ಷನ್ 353ರ ಅಡಿಯಲ್ಲಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಪ್ರಕರಣ ದಾಖಲಾಗಿದೆ..