ರಾಜ ರಾಜೇಶ್ವರಿ ವಿದ್ಯಾಸಂಸ್ಥೆಯಲ್ಲಿ ಪರಿಸರ ದಿನಾಚರಣೆ

ಮಲೇಬೆನ್ನೂರು ಪಟ್ಟಣದ ಜಿಗಳಿ ರಸ್ತೆಯ ಒಡೆಯರ ಬಸಾಪುರ ಗ್ರಾಪಂ ವ್ಯಾಪ್ತಿಯ ಪಟೇಲ್ ಬಸಪ್ಪ ಎಜುಕೇಶನ್ ಅಸೋಸಿಯೇಶನ್ ನ ರಾಜ ರಾಜೇಶ್ವರಿ ಪ್ರೌಢಶಾಲೆಯಲ್ಲಿ ಜೂನ್ 5 ರ ಬೆಳಿಗ್ಗೆ 10 ಗಂಟೆಗೆ ಪರಿಸರ ದಿನಾಚರಣೆ ಹಿನ್ನೆಲೆಯಲ್ಲಿ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ಪರಿಸರದ ಮಹತ್ವ ತಿಳಿಸಿಕೊಡಲಾಯಿತು.
ಸಂಸ್ಥೆಯ ಕಾರ್ಯದರ್ಶಿ ಜಿ ಬಿ ಶಿವಾನಂದಪ್ಪ , ಪ್ರಾಂಶುಪಾಲರಾದ ಶ್ರೀಮತಿ ಸುಜಾತ ಶಿವಾನಂದಪ್ಪ ಹಾಗೂ ಶಿಕ್ಷಕರ ಸಮ್ಮುಖದಲ್ಲಿ ವಿದ್ಯಾರ್ಥಿಗಳು ಹತ್ತಾರು ತೆಂಗಿನ ಸಸಿ, ಹೂವಿನ ಗಿಡ, ಔಷಧಿ ಸಸ್ಯಗಳನ್ನು ನೆಟ್ಟರು.
ವಿವಿಧ ಜಾತಿಯ ಮರ ಗಿಡಗಳ ಅಧ್ಯಯನ ಹಾಗೂ ಉಪಯೋಗ ಕುರಿತು ಮಾಹಿತಿ ಪಡೆಯುವ ಹಿನ್ನೆಲೆಯಲ್ಲಿ 1 ರಿಂದ 10 ನೇ ತರಗತಿವರೆಗಿನ ಎಲ್ಲಾ ವಿದ್ಯಾರ್ಥಿಗಳಿಗೆ ಲೀಫ್ ಕ್ರಾಫ್ಟ್ ಆಕ್ಟಿವಿಟಿ ಆಯೋಜಿಸಲಾಗಿತ್ತು.
8, 9 ಮತ್ತು 10 ನೇ ತರಗತಿ ವಿದ್ಯಾರ್ಥಿನಿಯರು ಪರಿಸರ ಗೀತೆಗಳನ್ನು ಹಾಡಿದರು. 9 ನೇ ತರಗತಿ ಬಾಲಕರು ಮಾನವನಿಗೆ ಪರಿಸರದ ಉಪಕಾರ ತಿಳಿಸುವ ಹಾಗೂ ಪರಿಸರ ಸಂರಕ್ಷಣೆಯ ಪ್ರಸ್ತುತತೆ ಕುರಿತು ಜಾಗೃತಿ ಮೂಡಿಸುವ ಕಿರು ನಾಟಕ ಪ್ರದರ್ಶಿಸಿದರು.