ಇ-ಸ್ವತ್ತು, ಜಮೀನಿನ ಪಹಣಿ ನೀಡಲು ಸಾರ್ವಜನಿಕರಿಂದ ಕಛೇರಿಗೆ ಅಲೆದಾಟ.! ಡಾ.ಪ್ರಭಾ ಮಲ್ಲಿಕಾರ್ಜುನ್ ರಿಂದ ಅಧಿಕಾರಿಗೆ ಫೋನ್

ಜಿಲ್ಲಾಡಳಿತ ಭವನದ ಸಂಸದರ ಕಚೇರಿಯಲ್ಲಿ ಪೂಜೆ ಸಲ್ಲಿಸಿ ಅಹವಾಲು ಸ್ವೀಕರಿಸಿದ ಎಂಪಿ ಡಾ.ಪ್ರಭಾ ಮಲ್ಲಿಕಾರ್ಜುನ್
ದಾವಣಗೆರೆ.ಸೆ.27; ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ಜಿಲ್ಲಾಡಳಿತ ಭವನದಲ್ಲಿರುವ ಸಂಸದರ ಕಚೇರಿಯಲ್ಲಿ ಪೂಜೆ ಸಲ್ಲಿಸುವ ಮೂಲಕ ಕಾರ್ಯಾರಂಭಕ್ಕೆ ಚಾಲನೆ ನೀಡಿದರು.ಈ ವೇಳೆ ಸಾರ್ವಜನಿಕರ ಕುಂದುಕೊರತೆ ಆಲಿಸಿದರು.
ತಮ್ಮನ್ನು ಭೇಟಿ ಮಾಡಲು ಆಗಮಿಸಿದ ಎಲ್ಲಾ ಸಾರ್ವಜನಿಕರ ಸಮಸ್ಯೆಗಳು ಹಾಗೂ ಅಹವಾಲುಗಳನ್ನು ಆಲಿಸಿದರು. ಜಿಲ್ಲೆಯ ಗ್ರಾಮೀಣಭಾಗದ ಜನರು ಜಮೀನಿನ ಖಾತೆಯ ಸಮಸ್ಯೆ ಪರಿಹರಿಸುವಂತೆ ಮನವಿ ಸಲ್ಲಿಸಿದರು. ಈ ಸ್ವತ್ತು ಹಾಗೂ ಜಮೀನಿನ ಪಹಣಿ ನೀಡಲು ಅಧಿಕಾರಿಗಳು ಕಚೇರಿಗೆ ಅಲೆದಾಡಿಸುತ್ತಿದ್ದಾರೆ ಇದರಿಂದ ನಮ್ಮ ಕೆಲಸ ಕಾರ್ಯಗಳಿಗೆ ತೊಂದರೆಯಾಗುತ್ತಿದೆ ಎಂದು ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು
ಇದಕ್ಕೆ ಪ್ರತಿಕ್ರಿಯಿಸಿದ ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಸಂಬಂಧಪಟ್ಟವರಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಸಮಸ್ಯೆ ಪರಿಹರಿಸಲು ಸೂಚನೆ ನೀಡಿದರು.ಜಿಲ್ಲೆಯ ಕೆಲ ಗಡಿಭಾಗದ ಹಳ್ಳಿಗಳಿಗೆ ಬಸ್ ಸಂಪರ್ಕಕಲ್ಪಿಸುವಂತೆ ಕೆಲ ಗ್ರಾಮಸ್ಥರು ಮನವಿಮಾಡಿದರು.ಹೊನ್ನಾಳಿ,ಹರಿಹರ,ಹರಪನಹಳ್ಳಿ, ಜಗಳೂರು,ಚನ್ನಗಿರಿಯ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾರ್ವಜನಿಕರು ತಮ್ಮ ಆರೋಗ್ಯದ ಸಮಸ್ಯೆ, ಉದ್ಯೋಗ, ರಸ್ತೆ ಕಾಮಗಾರಿ,ದೇವಸ್ಥಾನದ ಜೀರ್ಣೋದ್ದಾರ ಹೀಗೆ ವಿವಿಧ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವಂತೆ ಸಂಸದರ ಬಳಿ ಅಳಲು ತೋಡಿಕೊಂಡರು.ಇದಕ್ಕೆ ಸ್ಪಂದಿಸಿದ ಸಂಸದರು ಸಮಸ್ಯೆಗಳ ಪರಿಹಾರದ ಭರವಸೆ ನೀಡಿದರು.