ಸಾರ್ವಜನಿಕ ಗಣೇಶೋತ್ಸವಕ್ಕೆ ಅನುಮತಿಸುವಂತೆ ಶ್ರೀರಾಮಸೇನೆ ಒತ್ತಾಯ: ಶಾಸಕರ ಮನೆ ಎದುರು ಧರಣಿ ಎಚ್ಚರಿಕೆ

ದಾವಣಗೆರೆ: ರಾಜ್ಯದಲ್ಲಿ ಜನಾಶೀರ್ವಾದ ಕಾರ್ಯಕ್ರಮಕ್ಕೆ ನಿರ್ಬಂಧ ವಹಿಸದೇ ತಲಾತಲಾಂತರದಿಂದ ಆಚರಿಸುತ್ತಿರುವ ಸಾರ್ವಜನಿಕ ಗಣೇಶೋತ್ಸವಕ್ಕೆ ಸರ್ಕಾರ ನಿರ್ಬಂಧ ವಿಧಿಸಿರುವುದನ್ನು ಶ್ರೀರಾಮಸೇನೆ ಖಂಡಿಸಿದೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಶ್ರೀರಾಮಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಹರೀಶ್ ಮಾತನಾಡಿ, ಸರ್ಕಾರ ಗಣೇಶೋತ್ಸವಕ್ಕೆ ವಿಧಿಸಿರುವ ನಿರ್ಬಂಧ ತೆರವುಗೊಳಿಸಿ ಅನುಮತಿ ನೀಡಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದರು.
ಕೋವಿಡ್ ನಿಂದ ಈಗಾಗಲೇ ಜನಜೀವನ ಸಹಜ ಸ್ಥಿತಿಗೆ ಬಂದಿದ್ದು, ಲಾಕ್ಡೌನ್ ನಿಂದ ಈಗಾಗಲೇ ಬಹಳಷ್ಟು ಜನರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇಂತಹ ಹಬ್ಬ ಹರಿದಿನಗಳಲ್ಲಿ ಅವರು ವ್ಯಾಪಾರ ನಡೆಸಿ ತಮ್ಮ ಆರ್ಥಿಕತೆಯನ್ನು ಸರಿದೂಗಿಸಿಕೊಳ್ಳುತ್ತಾರೆ.ಆದರೆ, ಸರ್ಕಾರ ಹೀಗೆ ನಿರ್ಬಂಧ ವಿಧಿಸಿರುವುದು ಖಂಡನೀಯ ಎಂದು ಆಕ್ಷೇಪಿಸಿದರು.
ಐದಾರು ತಿಂಗಳ ಹಿಂದೆಯೇ ಗಣೇಶ ಮೂರ್ತಿ ತಯಾರಕರು ಗಣಪತಿ ಮೂರ್ತಿ ತಯಾರಿಸಿರುತ್ತಾರೆ. ಶಾಮಿಯಾನ, ವಿದ್ಯುದೀಪ, ವಾದ್ಯವೃಂದ ಮೊದಲಾದವರ ಸ್ಥಿತಿ ಚಿಂತಾಜನಕವಾಗಲಿದೆ ಎಂದರು.
ಕೋವಿಡ್ ನಿಯಮ ಪಾಲಿಸಿ ಹೇಗೆ ಮಾಲ್, ಚಿತ್ರಮಂದಿರ, ಚುನಾವಣೆ, ರಾಜಕೀಯ ಸಮಾವೇಶ ಮುಂತಾದವುಗಳು ನಡೆಯುತ್ತಿವೆಯೋ ಅದೇ ರೀತಿ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಹೊಸ ನಿಯಮಾವಳಿ ರಚಿಸಿ ಅನುಮತಿ ನೀಡಬೇಕು ಎಂದು ಆಗ್ರಹಿಸಿದರು.
ರಾಜ್ಯ ಸರ್ಕಾರ ಆ.29 ರೊಳಗೆ ಅನುಮತಿ ನೀಡದಿದ್ದರೆ ಆ.30 ರಂದು ಬಿಜೆಪಿ ಶಾಸಕರ ಕಚೇರಿ ಎದುರು ಧರಣಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಪರಶುರಾಮ ನಡುಮನಿ, ಮಣಿ ಸರ್ಕಾರ್, ಸಾಗರ್, ವಿನೋದ್ ರಾಜ್, ರಾಹುಲ್, ರಘು, ರಾಜು, ಅರುಣ್ ಕುಮಾರ್ ಇದ್ದರು.