Gulab Cyclone:ಸಂಜೆಯಿಂದ ಅಪ್ಪಳಿಸಲಿದೆ ” ಗುಲಾಬ್ ” ಚಂಡಮಾರುತ | ಮುಂಗಾರಿನಲ್ಲಿ ಎರಡನೇ ವಾಯುಭಾರ ಕುಸಿತ

ಬೆಂಗಳೂರು: ಈ ಮುಂಗಾರಿನಲ್ಲಿ ಸೃಷ್ಟಿಯಾದ ಎರಡನೇ ವಾಯುಭಾರ ಕುಸಿತದಿಂದ ಬೀಸಲಿದೆ ‘ಗುಲಾಬ್’ ಚಂಡುಮಾರುತ!
ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ವಾಯುಭಾರ ಕುಸಿತದ ಪ್ರಭಾವ ತೀವ್ರಗೊಂಡ ಪರಿಣಾಮ ಚಂಡಮಾರುತ ರೂಪ ಪಡೆದಿದ್ದು, ಒಡಿಶಾ ಹಾಗೂ ಆಂಧ್ರಪ್ರದೇಶದ ಮೇಲೆ ಹೆಚ್ಚಿನ ಪರಿಣಾಮ ಉಂಟು ಮಾಡಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಬಂಗಾಳಕೂಲ್ಲಿಯ ಪಶ್ಚಿಮ ಬಂಗಾಳ ಕರಾವಳಿಯಲ್ಲಿ ಉಂಟಾದ ವಾಯುಭಾರ ಕುಸಿತದಿಂದ ವಿವಿದೆಡೆ ಮಳೆಯಾಗಲಿದ್ದು, ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಸಾಧಾರಣ ಮಳೆಯ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆ ಸೂಚನೆ ಕೊಟ್ಟಿದೆ.
ಗುಲಾಬ್ ಹೆಸರಿನ ಈ ಚಂಡುಮಾರುತವು ಸದ್ಯ ಗೋಪಾಲಪುರದ ಪೂರ್ವ-ಆಗ್ನೇಯ ದಿಕ್ಕಿನಲ್ಲಿ 370 ಕಿ.ಮೀ. ದೂರದಲ್ಲಿ ವಾಯುಭಾರ ಕುಸಿತದ ಲಕ್ಷಣಗಳು ಗೋಚರಿಸಿದೆ. ಸೆ.26 ರ ಇಂದು ಸಂಜೆ ವೇಳೆಗೆ ಭಾರತದ ಪೂರ್ವ ಕರಾವಳಿಯಲ್ಲಿ ‘ಗುಲಾಬ್’ ಚಂಡಮಾರುತ ಎರಡು ರಾಜ್ಯಗಳನ್ನು ಹಾದುಹೋಗಲಿದೆ.
ಮುಂದಿನ 12 ಗಂಟೆಗಳಲ್ಲಿ ಚಂಡಮಾರುತ ತೀವ್ರಗೊಳ್ಳಲಿದ್ದು, ಒಡಿಶಾದ ಏಳು ಜಿಲ್ಲೆಗಳಿಗೆ ಹೈ ಅಲರ್ಟ್ ಘೋಷಿಸಲಾಗಿದೆ. ಆಂಧ್ರ ಕರಾವಳಿ ಉತ್ತರ, ತೆಲಂಗಾಣದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇರುವುದಾಗಿ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.