Dailysis patient problem: ಡಯಾಲಿಸಿಸ್ ರೋಗಿಗಳ ಅಳಲು ಆಲಿಸಿದ ಸಂಸದರು: ಬಡಮಹಿಳೆಗೆ ಹಣ ವಾಪಾಸ್ ನೀಡಿ, ಜಿಲ್ಲಾ ಸರ್ಜನ್ ಗೆ ತರಾಟೆ ತೆಗೆದುಕೊಂಡ ಜಿಎಂ ಸಿದ್ದೇಶ್ವರ

ದಾವಣಗೆರೆ: ಜಿಲ್ಲಾಸ್ಪತ್ರೆಯಲ್ಲಿ ಡಯಾಲಿಸಿಸ್ಗೆಂದು ಬರುವ ಬಡವರ್ಗದ ರೋಗಿಗಳಿಗೆ ಡಯಾಲೈಸರ್, ಟ್ಯೂಬ್, ಎನ್ಎಸ್ ಗ್ಲೂಕೋಸ್, ಐರನ್, ನೀಡಲ್ ಹೀಗೆ ಅಗತ್ಯ ವಸ್ತುಗಳನ್ನು ತರಲು ಪ್ರತಿಸಲವೂ ೧೫೦೦ ವರೆಗೆ ಹಣ ಖರ್ಚಾಗುತ್ತಿದೆ. ಆದ್ದರಿಂದ, ಉಚಿತವಾಗಿ ಮಾಡಿಸಿ ಕೊಡಲು ಅವಕಾಶ ಕಲ್ಪಿಸಿ ಎಂದು ಬಡ ರೋಗಿಗಳು ಕೇಳಿಕೊಂಡಾಗ ತಕ್ಷಣ ಸ್ಪಂದಿಸುವ ಮೂಲಕ ಸಂಸದ ಜಿ.ಎಂ. ಸಿದ್ದೇಶ್ವರ್ ಮಾನವೀಯತೆ ಮೆರೆದಿದ್ದು, ಆಸ್ಪತ್ರೆಯ ಅಧೀಕ್ಷಕ ಜಯಪ್ರಕಾಶ್ಗೆ ತರಾಟೆಗೆ ತೆಗೆದುಕೊಂಡಿದ್ದಾರೆ.
ಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಉತ್ಪಾದನಾ ಘಟಕಗಳ ಉದ್ಘಾಟನೆಗೆ ಬಂದಿದ್ದ ವೇಳೆ ಸಂಸದ ಡಾ.ಜಿ.ಎಂ.ಸಿದ್ದೇಶ್ವರ ಬಳಿ ತಮ್ಮ ಅಳಲನ್ನು ತೋಡಿಕೊಂಡ ಬಡ ರೋಗಿಗಳ ಕುಟುಂಬಗಳ ಮಹಿಳೆಯರ ಮನವಿಗೆ ಸ್ಪಂದಿಸಿದ ಸಂಸದರು, ಇನ್ನು ಮುಂದೆ ಜಿಲ್ಲಾಸ್ಪತ್ರೆಯಲ್ಲಿ ಉಚಿತವಾಗಿಯೇ ಡಯಾಲಿಸಿಸ್ ಮಾಡಬೇಕು, ಅದಕ್ಕೆ ಬೇಕಿರುವ ಔಷಧಿಗಳನ್ನು ಹೊರಗಡೆ ಬರೆದುಕೊಟ್ಟು ತರಿಸುವುದಾದರೆ ಜಿಲ್ಲಾಸ್ಪತ್ರೆ ಯಾಕೆ ಬೇಕು ಎಂಬುದಾಗಿ ಆಸ್ಪತ್ರೆ ಜಿಲ್ಲಾ ಸರ್ಜನ್ ಡಾ.ಜಯಪ್ರಕಾಶ್ ಮೇಲೆ ಹರಿಹಾಯ್ದರು.
ಇದೇ ವೇಳೆ ಮಾತನಾಡಿದ ಬಡ ಮಹಿಳೆಯರು, ಜಿಲ್ಲಾಸ್ಪತ್ರೆಯಲ್ಲಿ ಪ್ರತಿ ಸಲ ಡಯಾಲಿಸಿಸ್ಗೆಂದು ಬಂದ ಸುಮಾರು ೧೫೦೦ ರು.ಗೂ ಅಧಿಕ ಖರ್ಚು ಮಾಡಬೇಕಿದೆ. ನಾವು ಅಂದಿನ ಕೂಲಿ ನಂಬಿಕೊಂಡು ಬರುವ ಜನರು. ಖಾಸಗಿ ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಮಾಡಿಸಲು ೨ ಸಾವಿರ ಖರ್ಚಾಗುತ್ತದೆ. ಅದೇ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಡಯಾಲಿಸಿಸ್ ಮಾಡಿಸುವ ಬದಲು, ಬೇಕಾದ ಎಲ್ಲವನ್ನೂ ರೋಗಿಗಳ ಕಡೆಯವರಿಂದಲೇ ತರಿಸಲಾಗುತ್ತಿದೆ ಎಂದು ಕಣ್ಣೀರು ಹಾಕಿದರು.
ಸಿದ್ದೇಶ್ವರ್ ಮಾತನಾಡಿ, ಜಿಲ್ಲಾ ಸರ್ಜನ್ ತಮ್ಮ ಕೊಠಡಿ ಬಿಟ್ಟು ಹೊರಗೆ ಬರುವುದು, ಆಸ್ಪತ್ರೆಯಲ್ಲಿ ಏನೆಲ್ಲಾ ಆಗುತ್ತಿದೆಯೆಂಬುದನ್ನು ಗಮನಿಸುತ್ತಿಲ್ಲವೇನು ಎಂದು ಪ್ರಶ್ನಿಸಿದ ಅವರು, ಆ ಮಹಿಳೆ ೧೫೦೦ ರು. ಖರ್ಚು ಮಾಡಿ, ತನ್ನ ಪತಿಗೆ ಡಯಾಲಿಸಿಸ್ ಮಾಡಿಸಲು ಹಣ ಹೊಂದಿಸಿಕೊಂಡು ಬಂದೆನೆಂದ ಮಹಿಳೆಗೆ ಸಮಾಧಾನ ಪಡಿಸಿ, ಇನ್ನು ಮೇಲೆ ಉಚಿತವಾಗಿಯೇ ಡಯಾಲಿಸಿಸ್ ಮಾಡುತ್ತಾರೆ ಎಂಬುದಾಗಿ ಹೇಳಿ, ಬಲವಂತದಿಂದ ಬಡ ಮಹಿಳೆಗೆ ಹಣ ನೀಡಿದರು.