ದಾವಣಗೆರೆಯ ಬೀರೇಶ್ವರ ದೇವಸ್ಥಾನ ಕುರುಬರ ಸಂಘಕ್ಕೆ ಸ್ವಾಧೀನ.! – ಕೆ.ಎಸ್.ಈಶ್ವರಪ್ಪ

ದಾವಣಗೆರೆ: ದಾವಣಗೆರೆ ನಗರದ ಶ್ರೀ ಬೀರೇಶ್ವರ ದೇವಸ್ಥಾನವನ್ನು ಮುಜರಾಯಿ ಇಲಾಖೆ ವ್ಯಾಪ್ತಿಯಿಂದ ಬೇರ್ಪಡಿಸಿ ಸಮಾಜದ ಸಮಿತಿಗೆ ಬಿಟ್ಟು ಕೊಡಬೇಕು ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಮತ್ತು ರಾಜ್ಯ ಸರ್ಕಾರದ ಮುಜರಾಯಿ ಇಲಾಖೆ ಸಚಿವರಾದ ಶಶಿಕಲಾ ಜೊಲ್ಲೆ ಯವರನ್ನು ಆಗ್ರಹಿಸುವುದಾಗಿ ಮಾಜಿ ಉಪಮುಖ್ಯಮಂತ್ರಿ ಕೆ ಎಸ್ ಈಶ್ವರಪ್ಪನವರು ಭರವಸೆ ನೀಡಿದ್ದಾರೆ.
ಅವರು ಇಂದು ಶಿವಮೊಗ್ಗಕ್ಕೆ ಹೋಗುವ ಮಾರ್ಗದ ಮಧ್ಯೆ ಹರಿಹರದ ಶಿವಮೊಗ್ಗ ಕ್ರಾಸ್ ನಲ್ಲಿ ಅವರನ್ನು ಭೇಟಿ ಮಾಡಿದ ಜಿಲ್ಲಾ ಕುರುಬ ಸಮಾಜದ ನಿಯೋಗದೊಂದಿಗೆ ಮಾತನಾಡಿದರು.
ಈ ಹಿಂದೆ ಅರ್ಚಕನಾಗಿದ್ದ ಲಿಂಗೇಶ್ ಪೂಜಾ ವಿಧಿ ವಿಧಾನಗಳನ್ನು ಸಮಪರ್ಕವಾಗಿ ನೆರವೇರಿಸುತ್ತಿಲ್ಲ ಮತ್ತು ದೇವಸ್ಥಾನದ ಆಸ್ತಿಯಲ್ಲಿ ನನ್ನ ಪಾಲು ಇದೆ ಹೇಳಿಕೊಳ್ಳುತ್ತಿದ್ದರಿಂದ ಇವನನ್ನು ಅರ್ಚಕ ಹುದ್ದೆಯಿಂದ ವಜಾ ಮಾಡಬೇಕು ಎಂದು ಕುರುಬ ಸಮಾಜ ಮುಖಂಡರು ದೂರು ನೀಡಿದ್ದರು . ದೂರಿಗೆ ಸ್ಪಂದಿಸಿದ ಅಂದಿನ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅರ್ಚಕನನ್ನು ವಜಾ ಮಾಡಿ, ಆದೇಶಿಸಿದ್ದರು. ಆದರೆ ಈಗ ಡಿ ಸಿ ಯವರ ಈ ವಜಾ ಆದೇಶವನ್ನು ಮುಜರಾಯಿ ಆಯುಕ್ತರಾದ ರೋಹಿಣಿ ಸಿಂಧೂರಿ ರದ್ದುಗೊಳಿಸಿ ಆದೇಶಿಸಿದ್ದಾರೆ. ಇದರಿಂದ ಸಮಾಜದ ಭಕ್ತರಲ್ಲಿ ಗೊಂದಲವಾಗಿದೆ.
ಈಗ ಕರ್ತವ್ಯ ನಿರ್ವಹಿಸುತ್ತಿರುವ ಈಶ್ವರ ಪೂಜಾರಿಯವರನ್ನೇ ಮುಂದುವರಿಸಬೇಕು ಎಂದು ಸಮಾಜದ ಹಿರಿಯ ಮುಖಂಡ ಬಿ ಎಂ ಸತೀಶ್ ಆಗ್ರಹಿಸಿದರು. ಆಗ ತಕ್ಷಣ ಸ್ಪಂದಿಸಿದ ಈಶ್ವರಪ್ಪನವರು ಡಿ ಸಿ ಶಿವಾನಂದ ಕಪಾಸಿ ಯವರಿಗೆ ಪೋನ್ ಮಾಡಿ ಮಾತನಾಡಿ, ವಜಾಗೊಂಡ ಅರ್ಚಕನಿಗೆ ಅವಕಾಶ ಕೊಡುವುದು ಬೇಡ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕುರುಬ ಸಮುದಾಯದ ಮುಖಂಡರಾದ ಜೆ ಕೆ ಕೊಟ್ರಬಸಪ್ಪ, ಹೆಚ್ ಜಿ ಸಂಗಪ್ಪ, ರಾಜನಹಳ್ಳಿ ಶಿವಕುಮಾರ್, ಎಸ್ ಟಿ ಅರವಿಂದ್, ಎಸ್ ಎಸ್ ಗಿರೀಶ್,ಮುದಹದಡಿ ದಿಳ್ಳೇಪ್ಪ, ಮಳಲ್ಕೆರೆ ಪ್ರಕಾಶ್, ಜೆ ದೀಪಕ್, ಕರಿಗಾರ ಮಂಜುನಾಥ, ಭಟ್ಲಕಟ್ಟೆ ಬೀರೇಶ್, ಜಡಗನಹಳ್ಳಿ ಚಿಕ್ಕಪ್ಪ, ಜರೇಶ, ಶ್ರೀನಿವಾಸ್, ಗುಡ್ಡಪ್ಪ, ಜೆ ಹೊನ್ನರಾಜು, ಸಂಜಯ, ಕರಿಸಿದಪ್ಪ ಮುಂತಾದವರು ಉಪಸ್ಥಿತರಿದ್ದರು.