ಪಟಾಕಿಗೆ ವಿದಾಯ ಹೇಳಿ, ಪರಿಸರ ಸ್ನೇಹಿ ದೀಪಾವಳಿ ಆಚರಿಸಿ – ಜಿಲ್ಲಾ ಪರಿಸರ ಅಧಿಕಾರಿಗಳ ಮನವಿ

ದಾವಣಗೆರೆ: ದೀಪಾವಳಿ ಬೆಳಕಿನ ಹಬ್ಬ, ಎಲ್ಲರೂ ಸಂಭ್ರಮ ಹಾಗೂ ಸಡಗರದಿಂದ ಆಚರಿಸುವ ಹಬ್ಬ. ಪಟಾಕಿಗಳನ್ನು ಬಳಸುವಾಗ ಎಚ್ಚರವಿರಲಿ, ಸ್ವಲ್ಪ ಮೈಮರೆತಲ್ಲಿ ಜೀವನದ ಬೆಳಕನ್ನೇ ಕಸಿದುಕೊಳ್ಳಬಹುದು. ಹಬ್ಬದ ಆಚರಣೆ ಜಾಗರೂಕತೆ ಹಾಗೂ ಸುರಕ್ಷತೆಯಿಂದ ಕೂಡಿರಲಿ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸೂಚನೆ ನೀಡಿದೆ.
ಅಪಾರ್ಟ್‍ಮೆಂಟ್, ವಠಾರ, ನೆರೆಹೊರೆಯ ಮನೆಯವರು ಒಂದೆಡೆ ಕುಳಿತು ಪರಿಸರ ಸ್ನೇಹಿ ಹಬ್ಬದ ಆಚರಣೆಯಲ್ಲಿ ಬೆಳಕೇ ಪ್ರಧಾನವಾಗಿರಬೇಕು. ಗಿಡ-ಮರಗಳು ಮತ್ತು ಪ್ರಾಣಿ-ಪಕ್ಷಿಗಳಿಗೆ ಯಾವುದೇ ಹಾನಿಯಾಗದಂತೆ ಎಚ್ಚರವಹಿಸಬೇಕು. ಪಟಾಕಿಗಳು ಶಾಶ್ವತ ಕುರುಡುತನ ಅಥವಾ ಕಿವುಡುತನಗಳಿಗೆ ಎಡೆಮಾಡಿಕೊಡುವುದರಿಂದ,. ಪಟಾಕಿಗಳನ್ನು ಖರೀದಿಸುವ ಮುನ್ನ ಲೇಬಲ್‍ಗಳನ್ನು ಪರಿಶೀಲಿಸಿ, ಗುಣಮಟ್ಟದ ಬಗ್ಗೆ ಖಾತರಿ ಮಾಡಿಕೊಂಡು ಎಚ್ಚರವಹಿಸುವುದರೊಂದಿಗೆ ಅಪಾಯ ತಡೆಯಬೇಕು.
ಕಳೆದ ದಶಕದಲ್ಲಿ ಸುಮಾರು ಸಾವಿರಾರು ಮಂದಿ ಪಟಾಕಿ ಸಿಡಿತದಿಂದ ಗಾಯಗೊಂಡಿದ್ದು, ಈ ಪೈಕಿ ಶೇ.70 ರಷ್ಟು ಕಣ್ಣಿಗೆ ಸಂಬಂಧಿಸಿದ ಗಾಯಗಳಾಗಿವೆ. ವಾಯು ಹಾಗೂ ಶಬ್ಭ ಮಾಲಿನ್ಯ ಮಟ್ಟ ಶೇ.10 ರಿಂದ ಶೇ.15 ರಷ್ಟು ಹೆಚ್ಚಾಗುತ್ತದೆ. ಪಟಾಕಿಗಳು ಹೊರಸೂಸುವ ವಿಷಯುಕ್ತ ಅನಿಲ ಆರೋಗ್ಯ ಸಂಬಂಧಿತ ಕಾಯಿಲೆಗಳು ಹಾಗೂ ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತವೆ. ಹೀಗಾಗಿ ಪಟಾಕಿ ಸಿಡಿಸಿದ ನಂತರ ಉತ್ಪತ್ತಿಯಾಗುವ ಘನ ತ್ಯಾಜ್ಯದ ಹೆಚ್ಚಳದಿಂದ ನಗರದ ಶುಚಿತ್ವದ ಸಮಸ್ಯೆ ಉಲ್ಬಣಗೊಳ್ಳುತ್ತದೆ.
ಶಬ್ಧ ಮತ್ತು ವಾಯು ಮಾಲಿನ್ಯಗಳಲ್ಲಿ ವೈಪರೀತ್ಯ, ಶಾಶ್ವತ ಕುರುಡುತನ ಅಥವಾ ಕಿವುಡುತನ, ಅಸ್ವಸ್ಥರು, ಮಕ್ಕಳು, ಗರ್ಭಿಣಿಯರು ಮತ್ತು ವೃದ್ಧರ ಆರೋಗ್ಯದಲ್ಲಿ ಏರು-ಪೇರು, ಗಿಡ-ಮರಗಳು ಮತ್ತು ಪ್ರಾಣಿ-ಪಕ್ಷಿಗಳಿಗೆ ಸಂಚಕಾರ, ಸ್ಫೋಟಕ-ಪಟಾಕಿಗಳ ಸದ್ದಿನಿಂದ ಒತ್ತಡ, ನಿದ್ರಾಹೀನತೆ, ರಕ್ತದೊತ್ತಡ, ಹೃದಯಾಘಾತ ಹಾಗೂ ಬೆಂಕಿಯ ಅವಘಡಗಳಿಗೆ ಕಾರಣವಾಗುವಂತಹ ಅನೇಕ ಅಪಾಯಗಳು ಉಂಟಾಗುತ್ತವೆ.
125 ಡೆಸಿಬಲ್‍ಗೂ (ಶಬ್ಧದ ಪ್ರಮಾಣ) ಮೇಲ್ಪಟ್ಟ ಪಟಾಕಿಗಳ ಸಿಡಿತವನ್ನು ಹಾಗೂ ರಾತ್ರಿ 10 ರಿಂದ ಬೆಳಿಗ್ಗೆ 6 ಗಂಟೆಯ ನಡುವೆ ಪಟಾಕಿ ಸಿಡಿಸುವುದನ್ನು ಈಗಾಗಲೆ ನಿಷೇಧಿಸಲಾಗಿದೆ. ಆಸ್ಪತ್ರೆ, ವೃದ್ಧಾಶ್ರಮಗಳ ಹತ್ತಿರ ಪಟಾಕಿಗಳನ್ನು ಸಿಡಿಸಬಾರದು. ಪಟಾಕಿಗೆ ವಿದಾಯ ಹೇಳಿ, ಪರಿಸರ ಸ್ನೇಹಿ ದೀಪಾವಳಿ ಆಚರಿಸಿ ಎಂದು ಜಿಲ್ಲೆಯ ಪರಿಸರ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!