ದಾವಣಗೆರೆ: (DJ) ದಾವಣಗೆರೆ ಜಿಲ್ಲೆಯಾದ್ಯಂತ ದಿನಾಂಕ 14-09-2026 ರಿಂದ ಆರಂಭವಾಗುವ ಗಣೇಶ ಹಬ್ಬದ ಆಚರಣೆ ಹಾಗೂ ಮೂರ್ತಿ ವಿಸರ್ಜನಾ ಮೆರವಣಿಗೆಗಳ ಸಂದರ್ಭದಲ್ಲಿ ಸಾರ್ವಜನಿಕ ಶಾಂತಿ, ಕಾನೂನು ಸುವ್ಯವಸ್ಥೆ ಮತ್ತು ಸೌಹಾರ್ದತೆ ಕಾಪಾಡುವ ಹಿತದೃಷ್ಟಿಯಿಂದ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಗಂಗಾಧರಸ್ವಾಮಿ.ಜಿ.ಎಂ (ಐಎಎಸ್) ಅವರು ಡಿ.ಜೆ ಹಾಗೂ ಶಬ್ದ ಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕಟ್ಟುನಿಟ್ಟಿನ ಷರತ್ತುಗಳನ್ನೊಳಗೊಂಡ ಆದೇಶ ಹೊರಡಿಸಿದ್ದಾರೆ.
ಮುಖ್ಯ ಮುಖ್ಯಾಂಶಗಳು ಹಾಗೂ ಷರತ್ತುಗಳು:
ಶಬ್ದ ಮಾಲಿನ್ಯ ನಿಯಂತ್ರಣ:Noise Pollution (Regulation & Control) Rule-2000 ನಿಯಮಾವಳಿಗಳ ಮಾನದಂಡಗಳನ್ವಯ ಶಬ್ದ ಬಳಕೆಯನ್ನು ಪೊಲೀಸ್ ಇಲಾಖೆಯವರು ಪರಿಶೀಲಿಸಿದ ನಂತರವೇ ಅನುಮತಿ ನೀಡಲಾಗುತ್ತದೆ.
ಹೊರ ಜಿಲ್ಲೆಯ ಡಿ.ಜೆಗಳಿಗೆ ನಿಷೇಧ: ಗಣೇಶ ಹಬ್ಬದ ಸಂದರ್ಭದಲ್ಲಿ ಇತರೆ ಜಿಲ್ಲೆಗಳಿಂದ ಡಿ.ಜೆ ಸಿಸ್ಟಂಗಳನ್ನು ತಂದು ದಾವಣಗೆರೆ ಜಿಲ್ಲೆಯಲ್ಲಿ ಬಳಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಸೌಂಡ್ ಸಿಸ್ಟಂ ನಿಯಮ: ವೂಫರ್ಸ್ (Woofers) ಮತ್ತು ಸಬ್ ವೂಫರ್ಸ್ (Sub-woofers) ಬಳಸಲು ಅವಕಾಶವಿರುತ್ತದೆ.
ಹೆಚ್ಚಿನ ಶಬ್ದ ಹೊರಸೂಸುವ ಸಾಧನಗಳಿಗೆ ತಡೆ: ಡಿ.ಜೆಗಳಲ್ಲಿ ಬಳಸಲಾಗುವ ಅತ್ಯಂತ ಹೆಚ್ಚಿನ ಶಬ್ದ ಹೊರಸೂಸುವ ‘ಪ್ರೆಶರ್ ಮೆಜರ್ಮೆಂಟ್’ (Pressure Measurement) ಹಾಗೂ ಇತರ ವಿಶೇಷ ಉಪಕರಣಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಉಲ್ಲಂಘಿಸಿದರೆ ಕಾನೂನು ಕ್ರಮ:ನೀಡಲಾದ ಮಾನದಂಡಗಳನ್ನು ಮತ್ತು ಷರತ್ತುಗಳನ್ನು ಡಿ.ಜೆ ಬಳಕೆದಾರರು ಅಥವಾ ಆಯೋಜಕರು ಪಾಲಿಸದಿದ್ದಲ್ಲಿ, ಅವರ ವಿರುದ್ಧ ಅನುಮತಿ ಪ್ರಾಧಿಕಾರವಾದ ಪೊಲೀಸ್ ಇಲಾಖೆಯು ನಿಯಮಾನುಸಾರ ಸೂಕ್ತ ಕಾನೂನು ಕ್ರಮ ಜರುಗಿಸಲಿದೆ.
ವಿದ್ಯಾರ್ಥಿಗಳು, ಹಿರಿಯ ನಾಗರಿಕರು, ರೋಗಿಗಳು ಹಾಗೂ ನವಜಾತ ಶಿಶುಗಳಿಗೆ ಶಬ್ದ ಮಾಲಿನ್ಯದಿಂದ ತೊಂದರೆಯಾಗದಂತೆ ತಡೆಯಲು ಈ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ.
Leave a comment