ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ; ಸರ್ವಾಧಿಕಾರಿ ಆಡಳಿತಗಳು ಸ್ಥಿರತೆಯ ಭರವಸೆ ನೀಡುತ್ತವಾದರೂ ದಬ್ಬಾಳಿಕೆ, ಭಯವುಂಟು ಮಾಡುತ್ತವೆ: ಡಾ; ಪ್ರಭಾ ಮಲ್ಲಿಕಾರ್ಜುನ್

International Democracy Day; Authoritarian Regimes Promise Stability But Instill Repression, Fear: Dr; Prabha Mallikarjun

ದಾವಣಗೆರೆ: ವಿಶ್ವಸಂಸ್ಥೆಯ ನಿರ್ಣಯದಂತೆ ಪ್ರತಿ ವರ್ಷ ಸೆಪ್ಟೆಂಬರ್ 15 ರಂದು ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನಾಗಿ ಆಚರಿಸಲಾಗುತ್ತಿದ್ದು ಈ ವರ್ಷ ಕೃತಕ ಬುದ್ದಿಮತ್ತೆ ಉತ್ತಮ ಸರ್ಕಾರದ ಉಪಕರಣ ಎಂಬ ಧ್ಯೇಯವಾಕ್ಯದಡಿ ಆಚರಿಸಲಾಗುತ್ತಿದ್ದು ಜಿಲ್ಲೆಯಲ್ಲಿ ಆಯೋಜಿಸಲಾದ ಬೃಹತ್ ಮಾನವ ಸರಪಳಿಯಲ್ಲಿ 85 ಸಾವಿರಕ್ಕಿಂತ ಹೆಚ್ಚು ಜನರು ಭಾಗಿಯಾಗುವ ಮೂಲಕ ಪ್ರಜಾಪ್ರಭುತ್ವ ಅತ್ಯಂತ ಬಲಿಷ್ಠ ಮತ್ತು ಶ್ರೇಷ್ಠ ಎಂದು ಸಾಬೀತು ಮಾಡಿದ್ದಾರೆ ಎಂದು ಸಂಸದರಾದ ಡಾ; ಪ್ರಭಾ ಮಲ್ಲಿಕಾರ್ಜುನ್ ತಿಳಿಸಿದರು.

ಅವರು ಭಾನುವಾರ ಹರಿಹರದ ಮಹಾತ್ಮ ಗಾಂಧೀ ಮೈದಾನದಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆ ಹಾಗೂ ವಿವಿಧ ಸಂಘ, ಸಂಸ್ಥೆಗಳ ಸಹಯೋಗದಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ನ್ಯಾಮತಿ ಗಡಿಯಿಂದ 10 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ 25 ಗ್ರಾಮಗಳು, 2 ಸ್ಥಳೀಯ ಸಂಸ್ಥೆಗಳ ವ್ಯಾಪ್ತಿ ಸೇರಿ ರಾಣೆಬೆನ್ನೂರು ಗಡಿವರೆಗೆ 80 ಕಿ.ಮೀ ಉದ್ದದ ಮಾನವ ಸರಪಳಿ ಕಾರ್ಯಕ್ರಮದ ವೇದಿಕೆ ಕಾರ್ಯಕ್ರಮ ಹಾಗೂ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಹಾತ್ಮ ಗಾಂಧಿ ಹಾಗೂ ಡಾ;ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

ಪ್ರಜಾಪ್ರಭುತ್ವ ಅಂದರೆ ಸ್ವಾತಂತ್ರ್ಯ, ಸಮಾನತೆ, ನ್ಯಾಯಪರತೆ ಮತ್ತು ಎಲ್ಲಾ ಮಾನವನ ಘನತೆಯನ್ನು ಕಾಪಾಡುವುದಾಗಿದೆ. ಪ್ರಜಾಪ್ರಭುತ್ವ ಆಡಳಿತ ವ್ಯವಸ್ಥೆಯಲ್ಲ, ಸ್ವಾತಂತ್ರ್ಯ ಮತ್ತು ಅವಕಾಶಗಳ ಮೂರ್ತರೂಪ, ಇದು ಧ್ವನಿ ಇಲ್ಲದವರಿಗೆ ಧ್ವನಿಯಾಗುತ್ತದೆ. ಸಾಮಾಜಿಕ ನ್ಯಾಯ ಕಾಪಾಡುವ ಬಲಿಷ್ಠ ವ್ಯವಸ್ಥೆ ಇದಾಗಿದ್ದು ಶ್ರೇಷ್ಠವೆಂದು ನಂಬಿದ್ದೇವೆ. ಜಾಗತಿಕವಾಗಿ ವಿಶ್ಲೇಷಣೆ ಮಾಡಿದಾಗ ಪ್ರಜಾಪ್ರಭುತ್ವ ದುರ್ಬಲವಾಗುತ್ತಿದೆಯೋ ಎನಿಸುತ್ತದೆ, ಈ ನಿಟ್ಟಿನಲ್ಲಿ ಜನರು ನಿರಂತರ ಜಾಗರೂಕತೆ, ಪೋಷಣೆ ಮತ್ತು ರಕ್ಷಣೆ ಮಾಡಬೇಕಾಗುತ್ತದೆ. ಸರ್ವಾಧಿಕಾರಿ ಆಡಳಿತಗಳು ಸ್ಥಿರತೆಯ ಭರವಸೆ ನೀಡುತ್ತವಾದರೂ ದಬ್ಬಾಳಿಕೆ, ಭಯವುಂಟು ಮಾಡುತ್ತವೆ, ಜನರು ಮತದಾನ ಮೂಲಕ ತಮ್ಮ ಪ್ರಭುತ್ವತೆಯನ್ನು ಮೆರೆಯಬೇಕಾಗಿದೆ ಎಂದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರ ಹಾಗೂ ಸಂಸ್ಥೆಗಳ ಜವಾಬ್ದಾರಿಯ ಜೊತೆಗೆ ನಾಗರಿಕರ ಪಾತ್ರ ಬಹುಮುಖ್ಯವಾಗಿರುತ್ತದೆ. ಚುನಾವಣೆಯಲ್ಲಿ ಮತ ಹಾಕುವುದಷ್ಟೆ ಮತದಾರರ ಜವಾಬ್ದಾರಿ ಮತ್ತು ಪ್ರಕ್ರಿಯೆ ಎಂದುಕೊಳ್ಳದೆ, ಸರ್ಕಾರದ ಆಗುಹೋಗುಗಳಲ್ಲಿ ನಾಗರಿಕರಾಗಿ ತೊಡಗಿಸಿಕೊಂಡು, ಇತರರ ಹಕ್ಕುಗಳನ್ನು ಗೌರವಿಸಿ ಪಾರದರ್ಶಕ ಆಡಳಿತದ ಹೊಣೆಗಾರಿಕೆ ಅರಿತುಕೊಂಡು ಆಡಳಿತ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗಿಯಾಗವುದು ಪ್ರಜಾಪ್ರಭುತ್ವದ ಅಡಿಪಾಯವಾಗಿದೆ. ಪ್ರಜಾಪ್ರಭುತ್ವದಲ್ಲಿ ನಾಗರಿಕರು ಕ್ರಿಯಾಶೀಲರಾಗಿ ಚುನಾವಣೆಗಳಲ್ಲಿ ಭಾಗಿಯಾಗಬೇಕು.

18 ವರ್ಷ ತುಂಬಿದವರಿಗೆ ಮತದಾನದ ಹಕ್ಕು ನೀಡಲಾಗಿದೆ, ಇಂದಿನ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಮತದಾರರಾಗಲಿದ್ದು ಎಲ್ಲರೂ ಮತದಾರರಾಗಿ ಚುನಾವಣೆಗಳಲ್ಲಿ ಪ್ರಭುದ್ದ ಮತದಾರರಾಗಿ ಭಾಗಿಯಾಗಬೇಕೆಂದು ವಿದ್ಯಾರ್ಥಿಗಳ ಕುರಿತು ಮಾತನಾಡಿದರು.
ಹರಿಹರ ಶಾಸಕರಾದ ಬಿ.ಪಿ.ಹರೀಶ್ ರವರು ಸಂವಿಧಾನ ಪೀಠಿಕೆಯನ್ನು ಓದಿದರು. ಈ ವೇಳೆ ಮಾತನಾಡಿದ ಅವರು ವಿವಿಧ ಜಾತಿ, ಧರ್ಮ, ಭಾಷೆ, ಸಂಸ್ಕøತಿ, ಪ್ರಾಂತ್ಯಗಳನ್ನು ಹೊಂದಿದ್ದರೂ ಪ್ರಜಾಪ್ರಭುತ್ವದಲ್ಲಿ ವಿವಿಧತೆಯಲ್ಲಿ ಏಕತೆಯನ್ನು ಕಾಣುತ್ತೇವೆ. ಸಂವಿಧಾನದಡಿ ಎಲ್ಲರಿಗೂ ಸಮಾನ ಹಕ್ಕುಗಳನ್ನು ನೀಡಲಾಗಿದೆ. ದೇಶ ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಯಶಸ್ಸನ್ನು ಸಾಧಿಸಿ ಅಭಿವೃದ್ದಿಯಲ್ಲಿ ಶ್ರೀಮಂತ ದೇಶಗಳೊಂದಿಗೆ ಸ್ಪರ್ಧೆಯಲ್ಲಿದೆ ಎಂದರು.

ಶಿವಮೊಗ್ಗ ಗಡಿ ಗ್ರಾಮ ನ್ಯಾಮತಿ ತಾಲ್ಲೂಕಿನ ಟಿ.ಗೋಪಗೊಂಡನಹಳ್ಳಿಯಿಂದ ಹರಿಹರ ತಾಲ್ಲೂಕಿನ ಹಾವೇರಿ ಜಿಲ್ಲೆಯ ಗಡಿ ಗ್ರಾಮದವರೆಗೆ 80 ಕಿ.ಮೀ ಅಂತರದಲ್ಲಿ 85 ಸಾವಿರಕ್ಕಿಂತ ಹೆಚ್ಚಿನ ಜನರು ಭಾಗಿಯಾಗಿ, ಇದರಲ್ಲಿ ಶಾಲಾ, ಕಾಲೇಜಿನ ವಿದ್ಯಾರ್ಥಿಗಳು ಸಮವಸ್ತ್ರ ಹಾಗೂ ವಿವಿಧ ವೇಷಭೂಷಣಗಳಲ್ಲಿ ಭಾಗಿಯಾಗಿದ್ದರು. ಸ್ವಸಹಾಯ ಸಂಘದ ಸದಸ್ಯರು, ಆಶಾ ಕಾರ್ಯಕರ್ತೆಯರು, ಕಲಾವಿದರು, ಸಂಘ, ಸಂಸ್ಥೆಯವರು, ಸರ್ಕಾರಿ ನೌಕರರು, ಸಾರ್ವಜನಿಕರು, ಗ್ರಾಮ ಪಂಚಾಯಿತಿ ಸದಸ್ಯರು, ಜನಪ್ರತಿನಿಧಿಗಳು ಸೇರಿದಂತೆ ಸಹಸ್ರಾರು ಮಂದಿ ರಸ್ತೆಯುದ್ದಕ್ಕೂ ಎಡಬದಿಯಲ್ಲಿ ಮಾನವ ಸರಪಳಿ ನಿರ್ಮಾಣ ಮಾಡಿ ಸಂವಿಧಾನ ಪೀಠಿಕೆ ವಾಚನ ಮಾಡಿದರು. ಹರಿಹರ ವೇದಿಕೆ ಕಾರ್ಯಕ್ರಮದಲ್ಲಿ ಭಾಗಿಯಾದ ಸಿದ್ದಗಂಗಾ ಶಾಲೆ ವಿದ್ಯಾರ್ಥಿಗಳು ವಿನೂತನವಾಗಿ ಭಾರತ ಭೂಪಟ ರಚನೆ ಮಾಡಿದರು. ವೇದಿಕೆಯಲ್ಲಿ ಭಾಗವಹಿಸಿದ್ದ ಗಣ್ಯರು ಸಸಿಗಳನ್ನು ನೆಟ್ಟರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್, ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ್, ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿಜಯಕುಮಾರ್ ಎಂ.ಸಂತೋಷ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ನಾಗರಾಜ್, ಸಿದ್ದಗಂಗಾ ಶಾಲೆ ಜಯಂತ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!