ಲಚುಮಿ’ ಕಿರುಚಿತ್ರ ಬಿಡುಗಡೆ ಮಾಡಲಿದ್ದಾರೆ ಜಿಲ್ಲಾಧಿಕಾರಿಗಳು ಸ್ಥಳೀಯ ಪ್ರತಿಭೆಗಳಿಂದ ವಿನೂತನ ಪ್ರಯತ್ನ

ದಾವಣಗೆರೆ.ಜು.೨೨: ನಗರದ ಪ್ರತಿಭೆಗಳೇ ಸೇರಿ ತಯಾರಿಸಿರುವ ‘ಲಚುಮಿ’ ಕಿರುಚಿತ್ರ ಇದೇ ಜುಲೈ 24ರ ಸಂಜೆ 5 ಗಂಟೆಗೆ ನಗರದ ಪದ್ಮಶ್ರೀ ಚಿಂದೋಡಿ ಲೀಲಾ ಕಲಾಕ್ಷೇತ್ರದಲ್ಲಿ ಬಿಡುಗಡೆಯಾಗಲಿದೆ ಮಹಾನಗರ ಪಾಲಿಕೆ ಮೇಯರ್ ಎಸ್ ಟಿ ವೀರೇಶ್, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಾದ ಸಿ ಬಿ ರಿಷ್ಯಂತ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಕೆ ಹೆಚ್ ವಿಜಯಕುಮಾರ್ ಮತ್ತು ಶಂಕರ್ ಲೀಲಾ ಪಿಚ್ಚರ್ಸ್ನ ನಿರ್ಮಾಪಕರಾದ ಸಿ ಎಲ್ ಚಂದ್ರಧರ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ನಂತರ ಯೂಟ್ಯೂಬ್ ಮತ್ತು ಇತರ ಸಾಮಾಜಿಕ ಜಾಲತಾಣಗಳಲ್ಲಿ ಕಿರುಚಿತ್ರವು ಬಿಡುಗಡೆ ಆಗಲಿದೆ. ಹರಿಹರದ ಬಳಿಯಿರುವ ಬೆಳ್ಳೂಡಿ ಗ್ರಾಮದಲ್ಲಿ ಚಿತ್ರೀಕರಣ ಗೊಂಡಿರುವ ಈ ಕಿರುಚಿತ್ರದಲ್ಲಿ ಹೆಣ್ಣುಮಕ್ಕಳನ್ನು ಸಹ ಓದಿಸಬೇಕು, ಬಾಲ ಕಾರ್ಮಿಕ ಪದ್ದತಿಯನ್ನು ಬಿಡಬೇಕು ಮತ್ತು ಕುಡಿತದಿಂದ ಸಂಸಾರ ಹಾಳಾಗುತ್ತದೆ, ಅದರಿಂದ ಹೊರಬಂದರೆ ಬದುಕು ಬಂಗಾರವಾಗುತ್ತದೆ ಎಂಬ ಸಂದೇಶ ಇದೆ. ಈ ಕಿರುಚಿತ್ರದ ಪ್ರಮುಖ ಪಾತ್ರದಲ್ಲಿ ಜ್ಞಾನೇಶ್ವರ್ ಜವಳಿ, ಆಶಾ ಜಗದೀಶ್, ಬಾಲ ನಟಿ ಶ್ರೀಸನ್ನಿಧಿ, ಮಹಾಂತೇಶ್ ಹುಗ್ಗಿ, ಕೃಷ್ಣಸಾ ರಾಜೋಳಿ, ರಮೇಶ್ ಬಸವರಾಜ್, ತಿಪ್ಪೇಸ್ವಾಮಿ, ಮಂಜುನಾಥ್ ಪಿ ಎನ್, ಜಗದೀಶ್ ಮುಂತಾದವರು ನಟಿಸುತ್ತಿದ್ದು, ಗೋಲ್ಡನ್ ಮೀಡಿಯಾದವರು ಮೀಡಿಯಾ ನೆಕ್ಸ್÷್ಟ ಸಹಯೋಗದೊಂದಿಗೆ ನಿರ್ಮಿಸಿದ್ದಾರೆ. ಸಂಕೇತ್ ಚಿತ್ರಕತೆ ಬರೆದು ನಿರ್ದೇಶನ ಮಾಡಿದ್ದಾರೆ. ಕಾರ್ಯಕ್ರಮಕ್ಕೆ ಉಚಿತ ಪ್ರವೇಶ ಇರಲಿದೆ.