ದಾವಣಗೆರೆ ಡಿಸಿಆರ್‌ಬಿ ಡಿವೈಎಸ್ಪಿ ತಾಯಿ ಇಂದುಮತಿಗೆ ಪ್ರತಿಷ್ಠಿತ ಡಾ.ಸಿದ್ದಲಿಂಗಯ್ಯ ಪ್ರಶಸ್ತಿ

ದಾವಣಗೆರೆ : ದಲಿತ ಸಾಹಿತ್ಯ ಲೋಕದಲ್ಲಿ ರಾಜ್ಯದಲ್ಲಿ ಹೆಸರು ಮಾಡಿರುವ ಇಂಧುಮತಿ ಲಮಾಣಿಗೆ ಕನ್ನಡ ಸಾಹಿತ್ಯ ಪರಿಷತ್ 2018ರಿಂದ 2023ರವರೆಗಿನ ಆರು ವರ್ಷಗಳ ಅವಧಿಯ ಡಾ.ಸಿದ್ದಲಿಂಗಯ್ಯ ಪ್ರಶಸ್ತಿ ನೀಡಲು ಆಯ್ಕೆ ಮಾಡಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ.. ಆದರೆ ಇವರು ದಾವಣಗೆರೆಯ ಡಿವೈಎಸ್ಪಿ ಒಬ್ಬರ ತಾಯಿ ಎಂದು ಕೆಲವೇ ಕೆಲವರಿಗೆ ಗೊತ್ತು.

ಹೌದು.. ದಾವಣಗೆರೆ ಜಿಲ್ಲೆಯ ಪಾತಕಿಗಳನ್ನು ಹೆಡೆಮುರಿ ಕಟ್ಟುವಲ್ಲಿ ಪ್ರಮುಖ ಪಾತ್ರವಹಿಸಿರುವ ಡಿಸಿಆರ್‌ಬಿ ಡಿ ವೈ ಎಸ್ ಪಿ ಬಿ.ಎಸ್.ಬಸವರಾಜ್, ಪ್ರಸಿದ್ಧ ಸಾಹಿತಿ ಇಂಧುಮತಿ ಲಮಾಣಿ ಪುತ್ರ. ಅಮ್ಮ ಸಾಹಿತ್ಯಲೋಕದಲ್ಲಿ ಸಾಧನೆ ಮಾಡಿದ್ರೆ, ಮಗ ಕ್ರೈಂ ಲೋಕದಲ್ಲಿ ಹೆಸರು ಮಾಡಿ,  ಕಾನೂನು ಎಂಬ ಅಸ್ತ್ರಗೆ ತಗುಲು ಹಾಕುತ್ತಿದ್ದಾರೆ. ಸದಾ ಮಮತೆಯನ್ನು ನೀಡುವ ತಾಯಿ ಇಂಧುಮತಿಯಾಗಿದ್ದು, ಮಕ್ಕಳ ಚಿಂತನೆ ಜತೆ ಸಾಮಾಜಿಕ ಚಿಂತನೆ ಬೆಳೆಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ತಾಯಿ ಶಿಕ್ಷಕಿಯಾಗಿರುವ ಕಾರಣ ತನ್ನ ಮಕ್ಕಳೂ ಕೂಡ ಶಿಕ್ಷಿತರಾಗಿ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕೆಂಬ ಹಂಬಲ ಮತ್ತು ಕನಸು ಕಂಡವರು. ಶಿಸ್ತಿಗೆ ಹೆಸರಾದ ಪೊಲೀಸ್ ಇಲಾಖೆಯ ಘನತೆ ಹೆಚ್ಚುವಂತೆ ಕೆಲಸ ಮಾಡುತ್ತಿರುವ ಡಿವೈಎಸ್ಪಿ ಬಿಎಸ್. ಬಸವರಾಜ್ ಅವರ ಸಾಧನೆಯ ಹಿಂದಿರುವ ಶಕ್ತಿಯೇ ಅವರ ಹೆತ್ತಮ್ಮ ಇಂದುಮತಿ ಲಮಾಣಿ,ಶಿಕ್ಷಕಿ, ಕವಯತ್ರಿ, ಸಮಾಜ ಸೇವಕಿ, ಹತ್ತು ಹಲವು ಸಂಘ, ಸಂಸ್ಥೆಗಳ ಪದಾಧಿಕಾರಿಗಳಾಗಿದ್ದಾರೆ. ದಣಿವರಿಯದೆ, ಬಿಡುವಿಲ್ಲದ ಸದಾ ಕ್ರಿಯಾಶೀಲರಾಗಿರುವ ಇಂದುಮತಿ ಅವರ ಹುಟ್ಟೂರು ವಿಜಯಪುರದ ಬರಟಗಿ ತಾಂಡಾ. ಆದರೆ ಬೆಳೆದದ್ದು ಐತಿಹಾಸಿಕ ಹಿನ್ನೆಲೆಯ ಬದಾಮಿಯಲ್ಲಿ.

ಇಂದುಮತಿ ಲಮಾಣಿ ಅವರು 1959ರ ಜೂನ್ 1ರಂದು ವಿಜಯಪುರ ಜಿಲ್ಲೆಯ ಬರಟಗಿಯ ಮೂರನೇ ತಾಂಡದಲ್ಲಿ ಜನಿಸಿದ್ದು, ಪಿಯುಸಿಯವರೆಗೆ ಓದಿದ್ದಾರೆ. ಸಾಹಿತ್ಯದಲ್ಲಿ ಅಪಾರ ಆಸಕ್ತಿ ಉಳ್ಳ ಇಂದುಮತಿ ಲಮಾಣಿ ಅವರು ಬರವಣಿಗೆಯಲ್ಲೂ ಅಪಾರ ಸಾಧನೆ ಮಾಡಿದ್ದಾರೆ. ತಮ್ಮ ಬರವಣಿಗೆಯ ಕಾಳಜಿಗಳ ಕುರಿತಾಗಿ ಹೇಳುವ ಲಮಾಣಿ ಅವರು ಹೆಚ್ಚಾಗಿ ನನ್ನ ವಸ್ತು ವ್ಯಾಪ್ತಿ ಸಾಮಾಜಿಕ ಜೀವನ. ಪ್ರತಿಭೆಯ ಕತ್ತು ಹಿಸುಕುವಂಥಹ ಸನ್ನಿವೇಶ, ವಯಸ್ಸಿನ ಪರಿ ಇಲ್ಲದೆ ಹೆಣ್ಣಿನ ಮೇಲೆ ಘಟಿಸುವಂಥಾ ಅತ್ಯಾಚಾರ, ಅವಳ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಹೀನಾಯ ಬಂಧನ, ನೋವಿನ, ಆಕೆಯ ಜೀವನ ಪಥ, ಜಾತಿ ಭೇದ, ಹೆಣ್ಣೆಂಬ ತಾರತಮ್ಯ ಕುರಿತು ಹೆಚ್ಚು ಒಲವು ಹೊಂದಿದ್ದಾರೆ.

ಶಾಲೆಯಲ್ಲಿ ಟೀಚರ್, ಮನೆಯಲ್ಲಿ ತಾಯಿ : ಇಂದುಮತಿ ಶಿಕ್ಷಕಿಯಾಗಿದ್ದು, ಮಕ್ಕಳ ಬೆಳವಣಿಗೆಗೆ ಕಾರಣವಾದರೆ, ಮನೆಯಲ್ಲಿ ಕುಟುಂಬದ ಬೆಳವಣಿಗೆಗೆ ಕಾರಣವಾಗಿದ್ದಾರೆ. ಮನೆ ಮತ್ತು ಶಾಲೆ ಎರಡನ್ನೂ ಒಂದೇ ತಟ್ಟೆಯಲ್ಲಿ ತೂಗುವ ಗುಣ ತಾಯಿಯದ್ದಾಗಿತ್ತು. ತಂದೆ ಶಂಕರ ಜಾಧವ, ತಾಯಿ ಸೋನಾಬಾಯಿ. ಪಿಯುಸಿತನಕ ಶಿಕ್ಷಣ ಪೂರೈಸಿದ್ದಾರೆ. ಪತಿ ಶಂಕರ ಲಮಾಣಿ, ನಾಲ್ವರು ಮಕ್ಕಳು ಹೀಗೆ ತುಂಬು ಸಂಸಾರದ ನೊಗ ಹೊತ್ತ ಇಂದುಮತಿಯವರು ಇಂದು ‘ಪ್ರಿಯ ಶಂಕರ’ ಎನ್ನುವ ಕಾವ್ಯನಾಮದಿಂದ ಹದಿನೆಂಟಕ್ಕೂ ಹೆಚ್ಚು ಸಾಹಿತ್ಯ ಕೃತಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ. ಸಾಮಾಜಿಕ ಕಾದಂಬರಿಗಳಾದ ಕೊರಡು ಕೊನರುವದು ಬರಡು ಹಯನಹುದು, ದಲನ, ಪತ್ತೆದಾರಿ ಕಾದಂಬರಿ ರತ್ನಸುರಾ ಬಾರ ರಹಸ್ಯ, ಕವನ ಸಂಕಲನಗಳಾದ ನನ್ನ ಸುತ್ತಲಿನ ಸತ್ಯಗಳು, ತಾಯಿ ಲೋಕ, ಬಾನ ಚಂದಿರ, ಹಾಸ್ಯ ನಾಟಕ ಎಟುಝಡ್, ನಾಮಾವಳಿ ಶ್ರೀ ಸತ್ಯ ಸೇವಾಲಾಲ್, ಶ್ರೀ ಮಿಟ್ಟು ಮಹಾರಾಜ್ ಅವರ ಜೀವನ ಚರಿತ್ರೆ, ಜೀವನ ಚರಿತ್ರೆ ಶ್ರೀ ಎಲ್.ಆರ್.ನಾಯಕ್ ಅವರ ಜೀವನ ಚರಿತ್ರೆ, ಚೌಪದಿ ಶ್ಯಮಂತಕ ಮಣಿ ಇಂಥಹ 18 ಸಾಹಿತ್ಯ ಕೃತಿಗಳನ್ನು ರಚಿಸಿ ಕನ್ನಡದ ತೇರನ್ನು ಎಳೆದವರಲ್ಲಿ ಇಂದುಮತಿ ಲಮಾಣಿ ಒಬ್ಬರು ಎನ್ನುವುದು ಹೆಮ್ಮೆಯ ಸಂಗತಿ.ಇದುಮತಿ ಲಮಾಣಿ ಅವರ ಪದ್ಯ ‘ನನ್ನಾಸೆ’ ಒಂಭತ್ತನೇ ತರಗತಿ ಮಕ್ಕಳ ಕನ್ನಡ ಪಠ್ಯದಲ್ಲಿದ್ದು, ಅವರ ಸಾಹಿತ್ಯ ಶ್ರೀಮಂತಿಕೆಗೆ ಸಾಕ್ಷಿಯಾಗಿದೆ.

ಪ್ರೇಮ ಯೋಗಿ ಕಾವ್ಯ ಸಂಕಲನಗಳು; ಏಕಾದಶ ಕಥಾಸಂಕಲನ; ಭಾವಲೋಕ ಎಂಬುದು ಜನಪದ ಕವನ ಸಂಕಲನ; ಬಂಜಾರ ಸ್ತ್ರೀಯರ ವಸ್ತ್ರಾಭರಣ ಮುಂತಾದವು ಸಮುದಾಯದ ಸಾಂಸ್ಕೃತಿಕ ಕೃತಿಗಳು, ಬಂಜಾರಾ ಭೀಷ್ಮ, ಕಬ್ಬಡಿ, ಶ್ಯಮಂತಕ ಮಣಿ ಲಲಿತ ಪ್ರಬಂಧಗಳು ಹೀಗೆ ಅನೇಕ ರೀತಿಯಲ್ಲಿ ಅವರ ಸಾಹಿತ್ಯ ಕೃಷಿ ಸಾಗಿದೆ.

ಡಿವೈಎಸ್ಪಿ ತಾಯಿ ಸರಳ ಮತ್ತು ಸೌಮ್ಯ ಸ್ವಭಾವದ ಗುಣ ಹೊಂದಿದ್ದು, ತಮ್ಮ ಜೀವನದುದ್ದಕ್ಕೂ ಸಾಕಷ್ಟು ನೋವು ನಲಿವು ಅವಮಾನಗಳ ನೋವುಂಡು ಈ ದಿನ ಸಾಕಷ್ಟು ಸಾಧನಗಳಿಗೆ ಭಾಜನರಾಗಿದ್ದಾರೆ, ಈ ಮಹಾನ್ ಮಹಿಳಾ ಸಾಹಿತ್ಯ ಸಾಧಕಿಯನ್ನು ಸರ್ಕಾರ ಹದಿನೆಂಟು ಕೃತಿಗಳು ಮತ್ತು ಸಂಘ ಸಂಸ್ಥೆಗಳು ಗುರುತಿಸಿ ಇವರಿಗೆ ಪ್ರಶಸ್ತಿ ಪುರಸ್ಕಾರಗಳನ್ನು ನೀಡಿ ಗೌರವಿಸಿದ್ದಾರೆ.

ರಾಜ್ಯ ಸರ್ಕಾರದ ಕಿತ್ತೂರು ರಾಣಿ ಚೆನ್ನಮ್ಮಪುರಸ್ಕಾರ, ಜಿಲ್ಲಾಡಳಿತದಿಂದ ರಾಜ್ಯೋತ್ಸವ ಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿ, ಟರ್ಕಿ ದೇಶದಿಂದ ದ ಡಾರ್ಟ ಆನ್ ನೈಲ್ ಪ್ರಶಸ್ತಿ, ರಾಣಿ ಚೆನ್ನಮ್ಮ ಪ್ರಶಸ್ತಿ, ಸದ್ಭಾವನಾ ಪುರಸ್ಕಾರ, ಬಸವ ಶಾಂತಿ ಪುರಸ್ಕಾರಗಳು ಹುಡುಕಿಕೊಂಡು ಬಂದಿವೆ. ಹತ್ತಾರು ಕವಿಗೋಷ್ಠಿಗಳಲ್ಲಿ ಕವನ ವಾಚನ, ಕಥಾ ಕಮ್ಮಟಗಳಲ್ಲಿ ಭಾಗಿಯಾಗಿರುವುದು, ಜಾರ್ಖಂಡಲ್ಲಿ ನಡೆದ ಬುಡಕಟ್ಟು ಮಹಿಳಾ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡಿರುವುದು. ನವದೆಹಲಿಯಲ್ಲಿ ನಡೆದ ಬುಡಕಟ್ಟು ಮಹಿಳಾ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿರುವುದು ಅವರ ಸಾಹಿತ್ಯ ಸಂವೇದನೆಗೆ ಸಾಕ್ಕಿಯಾಗಿದೆ. ಒಟ್ಟಾರೆ ತನ್ನ ಸಾಧನೆ ಜತೆ ಮಕ್ಕಳನ್ನು ಬೆಳೆಸಿದ ಮಹಾನ್ ಕೀರ್ತಿ ತಾಯಿಗೆ ಸಲ್ಲುತ್ತದೆ.

ವಿದೇಶದಲ್ಲಿ ಹವಾ : ಇಂದುಮತಿ ಲಮಾಣಿ ಅವರು ಬಿಜಾಪುರದ ಬಂಜಾರ ಸಮಾಜ ಸೇವಾ ಸಂಘದ ಅಧ್ಯಕ್ಷರಾಗಿ ಸಮಾಜ ಸೇವೆ ಮಾಡುತ್ತಿದ್ದಾರೆ. ಬಿಜಾಪುರ ಮಹಿಳಾ ಸೇನಾ ಸಾಹಿತ್ಯ ಸಂಗಮದ ಅಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾರೆ. ಟರ್ಕಿ, ಈಜಿಪ್ಟ್ ದೇಶಗಳ ಪ್ರವಾಸ ಮಾಡಿದ್ದಾರೆ. ಬಂಜಾರ ನೃತ್ಯ ಸಂಸ್ಕೃತಿ ಉಳಿಸಲು ತಂಡ ಕಟ್ಟಿ ಶ್ರಮಿಸುತ್ತಿದ್ದಾರೆ.

ಅಮ್ಮ ಸಾಹಿತ್ಯ ಲೋಕದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ಹೆಣ್ಣಿನ ಅಂತರಾಳದ ನೋವು, ಅನುಭವಿಸುವ ಯಾತನೆ ಬಗ್ಗೆ ಕೃತಿ ಮೂಲಕ ಬೆಳಕು ಚೆಲ್ಲಿದ್ದಾರೆ. ಪ್ರತಿಷ್ಠಿತ ಡಾ.ಸಿದ್ದಲಿಂಗಯ್ಯ ಪ್ರಶಸ್ತಿ ಬಂದಿರುವುದು ಸಂತಸ ತಂದಿದೆ. ಸಮಾಜಕ್ಕೆ ಇನ್ನಷ್ಟು ಕೊಡುಗೆ ಕೊಡಲಿ ಎಂಬುದಷ್ಟೇ ನನ್ನ ಆಶಯ
ಡಿ ವೈ ಎಸ್ ಪಿ ಬಸವರಾಜ್, ಸಾಹಿತಿ ಇಂದುಮತಿ ಮಗ

Leave a Reply

Your email address will not be published. Required fields are marked *

error: Content is protected !!