ರಾಮಕೃಷ್ಣ ಕೊಲೆ ಪ್ರಕರಣ,ಹಂತಕರ ವಿರುದ್ದ ಕಠಿಣ ಕ್ರಮಕ್ಕೆ ಆಗ್ರಹ

ದಾವಣಗೆರೆ: ಕನ್ನಡ ಪರ ಸಂಘಟನೆಯ ಜಗಳೂರು ತಾಲೂಕು ಅಧ್ಯಕ್ಷ,ಹೋರಾಟಗಾರ ರಾಮಕೃಷ್ಣ ಹತ್ಯೆ ಖಂಡಿತ,ಹಂತಕರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿ ಶಂಕರನಾಗ್ ಅಸೋಸಿಯೇಷನಿಂದ ನಗರದ ಜಯದೇವ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಮಾತನಾಡಿದ ಎಸ್.ಜಿ.ಸೋಮಶೇಖರ,ಜಗಳೂರು ಕನ್ನಡ ಪರ ಸಂಘಟನೆ ಮುಖಂಡ ರಾಮಕೃಷ್ಣರನ್ನು ಡಾಬಾವೊಂದರಲ್ಲಿ ಅಮಾನುಷವಾಗಿ ಹತ್ಯೆ ಮಾಡಲಾಗಿದೆ. ಹರಿತವಾದ ಆಯುಧ,ಚೂಪಾದ ಕಲ್ಲುಗಳಿಂದ ದಾಳಿ ಮಾಡಿ,ಕೊಲೆ ಮಾಡಿರುವುದನ್ನು ಪೋಲೀಸ್ ಇಲಾಖೆ ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು. ಈ ಕುರಿತು ಗೌರಿಪುರದ ಪಿಡಿಓ ನಾಗರಾಜ, ಇತರರು ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಒತ್ತಾಯಿಸಿದರು.
ಅನ್ಯಾಯ,ಭ್ರಷ್ಟಾಚಾರ,ಅಕ್ರಮದ ವಿರುದ್ಧ ಜಗಳೂರು ತಾಲೂಕಿನಲ್ಲಿ ರಾಮಕೃಷ್ಣ ಧ್ವನಿ ಎತ್ತಿದ್ದರು. ಅನ್ಯಾಯದ ವಿರುದ್ಧ ಕಾನೂನಾತ್ಮಕ ಹೋರಾಟ ನಡೆಸಿದವರ ಧ್ವನಿ ಅಡಗಿಸುವ ಹುನ್ನಾರ ನಡೆಯುತ್ತಿದೆ. ಜಗಳೂರಿನಲ್ಲಿ ರಾಮಕೃಷ್ಣ ಹತ್ಯೆ ಹಿಂದೆ ಕೆಲ ಕಾರಣದ ಕೈಗಳು ಇರುವ ಸಾಧ್ಯತೆ ಇದೆ. ಭ್ರಷ್ಟ ಸರ್ಕಾರಿ ಅಧಿಕಾರಿಗಳು,ಭ್ರಷ್ಟ ರಾಜಕಾರಣಿಗಳ ಪಾತ್ರವೂ ಇರುವ ಆರೋಪ ಕೇಳಿ ಬಂದಿದ್ದು,ರಾಮಕೃಷ್ಣ ಕೊಲೆ ಪ್ರಕರಣದ ಸಮಗ್ರ ತನಿಖೆ ನಡೆಸಿ,ದುಷ್ಕರ್ಮಿಗಳನ್ನು ಬಂಧಿಸಬೇಕು. ಈ ಮೂಲಕ ಮೃತನ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಅವರು ಆಗ್ರಹಿಸಿದರು.