510 ಕೆ.ಜಿ ‘ರಕ್ತ ಚಂದನದ’ ತುಂಡುಗಳನ್ನ ವಶಕ್ಕೆ ಪಡೆದ ಚನ್ನಗಿರಿ ಪೊಲೀಸ್.! ಭರ್ಜರಿ ಬೇಟೆಯಾಡಿದ ರಿಷ್ಯಂತ್ ಟೀಮ್

ದಾವಣಗೆರೆ: ಜುಲೈ 14 ಮಧ್ಯರಾತ್ರಿ ಚನ್ನಗಿರಿ ಪಟ್ಟಣದಲ್ಲಿನ ಕೌಸರ್ ಮಸೀದಿಯ ಬಳಿ ಇರುವ ಮನೆಯೊಂದರಲ್ಲಿ ಅಕ್ರಮವಾಗಿ ರಕ್ತ ಚಂದನದ ಮರದ ತುಂಡುಗಳನ್ನು ಸಂಗ್ರಹಿಸಿರುತ್ತಾರೆ ಎಂಬ ಮಾಹಿತಿ ಡಾ.ಸಂತೋಷ್ ಕೆ.ಎಂ., ಪೊಲೀಸ್ ಉಪಾಧೀಕ್ಷಕರು, ಚನ್ನಗಿರಿ ಉಪವಿಭಾಗ ಇವರಿಗೆ ಬಂದಿದೆ.
ತಕ್ಷಣ ಚನ್ನಗಿರಿ ವೃತ್ತ ನಿರೀಕ್ಷಕರಾದ ಮಧು ಪಿಬಿ, ಚನ್ನಗಿರಿ ಪೊಲೀಸ್ ಠಾಣೆ ಪಿ.ಎಸ್.ಐ ಚಂದ್ರಶೇಖರ್ ಹಾಗೂ ಸಿಬ್ಬಂದಿಗಳಾದ ರಂಗಪ್ಪ, ಹಾಲೇಶ್ ಹಿರೇಮಠ, ಶ್ರೀನಿವಾಸಮೂರ್ತಿ, ನರೇಂದ್ರಸ್ವಾಮಿ, ಮೊಹಮ್ಮದ್ ಖಾನ್, ರೇವಣಸಿದ್ದಪ್ಪ, ರವಿಕುಮಾರ್, ಹರೀಶ್, ಅರುಣ್ ಕುಮಾರ್, ಸಂತೋಷ್ ಮೋಹನ್, ರೇವಣಸಿದ್ದಪ್ಪ, ಪರಮೇಶ್ವರ ನಾಯ್ಕ ರವರನ್ನೊಳಗೊಂಡ ತಂಡವನ್ನು ರಚಿಸಿ ಮಾಹಿತಿಯಿದ್ದ ಸ್ಥಳದಲ್ಲಿ ದಾಳಿ ಮಾಡಿದಾಗ ಅಕ್ರಮವಾಗಿ ಸಂಗ್ರಹಿಸಿ ಇಟ್ಟಿದ್ದ ಸುಮಾರು 510 ಕೆ.ಜಿ ತೂಕದ (ಸುಮಾರು 15.30 ಲಕ್ಷ ರೂ ಬೆಲೆ ಬಾಳುವ) ರಕ್ತ ಚಂದನವನ್ನು ವಶಪಡಿಸಿಕೊಂಡು ಈ ಸಂಬಂಧ ಓರ್ವ ಆರೋಪಿತನನ್ನು ದಸ್ತಗಿರಿ ಮಾಡಲಾಗಿ ಪ್ರಕರಣದ ತನಿಖೆಯನ್ನು ಮುಂದುವರೆಸಿದ್ದಾರೆ.
ಮೇಲ್ಕಂಡ ಕಾರ್ಯದಲ್ಲಿ ಭಾಗವಹಿಸಿದ ಅಧಿಕಾರಿ ಮತ್ತು ಸಿಬ್ಬಂದಿಯವರನ್ನು ಪೊಲೀಸ್ ಅಧೀಕ್ಷಕರಾದ ಸಿ.ಬಿ.ರಿಷ್ಯಂತ್ ಐಪಿಎಸ್ ರವರು, ದಾವಣಗೆರೆ ಜಿಲ್ಲೆ ಮತ್ತು ಆರ್.ಬಿ.ಬಸರಗಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು ದಾವಣಗೆರೆ ಜಿಲ್ಲೆ ಇವರುಗಳು ಚನ್ನಗಿರಿ ಪೊಲೀಸ್ ತಂಡದ ಕಾರ್ಯಕ್ಕೆ ಪ್ರಶಂಸೆಯನ್ನು ವ್ಯಕ್ತಪಡಿಸಿರುತ್ತಾರೆ.