ರೌಡಿಶೀಟರ್ ಗಳಿಗೆ ಖಡಕ್ ಎಚ್ಚರಿಕೆ ರವಾನಿಸಿದ ಎಸ್ಪಿ ರಿಷ್ಯಂತ್!

ದಾವಣಗೆರೆ: ರೌಡಿಶೀಟರ್ಗಳು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವುದು ಕಂಡು ಬಂದರೆ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ. ಬಿ. ರಿಷ್ಯಂತ್ ಖಡಕ್ ಎಚ್ಚರಿಕೆ ನೀಡಿದ್ದಾರೆ.
ನಗರದ ಪ್ರೌಢಶಾಲಾ ಮೈದಾನದಲ್ಲಿ ರೌಡಿ ಶೀಟರ್ ಪರೇಡ್ ವೇಳೆ ಮಾತನಾಡಿದ ಅವರು, ಜನರನ್ನು ಹೆದರಿಸೋದು, ಹಫ್ತಾ ವಸೂಲಿ ಮಾಡುವುದು, ಬಡ್ಡಿ ವ್ಯವಹಾರ, ಲ್ಯಾಂಡ್ ಡೀಲಿಂಗ್ ಮಾಡಲು ಮುಂದಾದರೆ ಅಂತಹವರ ವಿರುದ್ಧ ಕ್ರಮಕೈಗೊಳ್ಳುವುದಾಗಿ ಖಡಕ್ ಎಚ್ಚರಿಕೆ ಕೊಟ್ಟರು.
ನಗರದಲ್ಲಿ ವಿವಿಧ ಬಡಾವಣೆಯ ಸುಮಾರು ೧೫೬ ರೌಡಿ ಶೀಟರ್ಗಳಿದ್ದು, ಕೆಲವರು ಸುಧಾರಿಸಿಕೊಂಡಿದ್ದಾರೆ. ಹಿಂದಿನ ಕೃತ್ಯಗಳನ್ನು ಬಿಟ್ಟು ಒಳ್ಳೆಯ ಜೀವನ ನಡೆಸುತ್ತಿದ್ದಾರೆ. ಅವರ ಬಗ್ಗೆ ಸಂಬಂಧಪಟ್ಟ ಪೊಲೀಸ್ ಠಾಣೆಗಳಲ್ಲಿ ಮಾಹಿತಿ ಕಲೆ ಹಾಕಿ ಅಂತಹವರನ್ನು ರೌಡಿಶೀಟರ್ನಿಂದ ಕೈಬಿಡಲಾಗುವುದು ಎಂದು ತಿಳಿಸಿದರು.
ಸಾರ್ವಜನಿಕರು ಹಪ್ತಾ ವಸೂಲಿ ಮಾಡುವವರು, ಜನರಿಗೆ ತೊಂದರೆ ಕೊಡುವವರು ಕಂಡುಬಂದರೆ ಭಯ ಪಡದೇ ಪೊಲೀಸ್ ಠಾಣೆಗೆ ತಿಳಿಸಬೇಕು. ನಾವು ಅವರ ಬಗ್ಗೆ ನಿಗಾ ಇಡುತ್ತೇವೆ. ಇತ್ತೀಚಿನ ಭಾವಚಿತ್ರ, ವಿಳಾಸ ಕಲೆಹಾಕಲು ಪರೇಡ್ ಮಾಡಲಾಗಿದೆ. ಕಂಡಿಷನಲ್ ಬೇಲ್, ಜಾಮೀನು ಯಾವಾಗ ಬೇಕಿದ್ದರೂ ರದ್ಧಾಗಬಹುದು. ಕೃತ್ಯಗಳನ್ನು ಮುಂದುವರೆಸಿದರೆ ಜಾಮೀನು ರದ್ಧು ಮಾಡಲು ಕ್ರಮ ವಹಿಸುತ್ತೇವೆ ಎಂದರು.
ಎಸ್ಪಿ ರಾಜೀವ್, ಡಿವೈಎಸ್ಪಿ ನಾಗೇಶ್ ಐತಾಳ್, ಸಿಪಿಐ ಸುರೇಶ್ ಸಗರಿ, ಗಜೇಂದ್ರಪ್ಪ, ಮಂಜುನಾಥ್ ಸೇರಿದಂತೆ ಮತ್ತಿತರರು ಅಧಿಕಾರಿಗಳು ಉಪಸ್ಥಿತರಿದ್ದರು.