ಬೆಣ್ಣೆನಗರಿಗೆ ಕಾಲಿಟ್ಟಿದೆ ತಿಪಟೂರು ತೆಂಗಿನ ಸಸಿ, ಹಾಗಾದ್ರೆ ಇದರ ವಿಶೇಷವೇನೂ ಗೊತ್ತಾ.?

ದಾವಣಗೆರೆ: ದಾವಣಗೆರೆ ಅಂದ್ರೆ ಸಾಕು ಬೆಣ್ಣೆನಗರಿ ಫೇಮಸ್, ಆದ್ರೆ ಇದೇ ಊರಿಗೆ ಈಗ ತಿಪಟೂರು ತೆಂಗಿನ ಸಸಿಗಳು ಲಗ್ಗೆ ಇಟ್ಟಿದ್ದು, ತೋಟಗಾರಿಕೆ ಇಲಾಖೆ ಅತಿ ಕಡಿಮೆ ಬೆಲೆಗೆ ಮಾರಾಟ ಮಾಡಲು ಮುಂದಾಗಿದೆ.

ಸಾಮಾನ್ಯವಾಗಿ ಈ ತಳಿಯನ್ನು ತಿಪಟೂರು ಭಾಗದಲ್ಲಿ ಬೆಳೆಯಲಾಗುತ್ತಿದ್ದು, ಕಾಯಿ ಗಾತ್ರ, ರುಚಿ, ಒಳಗಿನ ಕೊಬ್ಬರಿ ಹೀಗೆ ಹತ್ತಾರು ಪ್ರಯೋಜನಗಳನ್ನು ಈ ಗಿಡದ ಕಾಯಿಗಳು ಹೊಂದಿವೆ. ಅಲ್ಲದೇ ವರ್ಷಕ್ಕೆ ಕನಿಷ್ಠ 300 ಕಾಯಿಗಳನ್ನು ಈ ತಳಿ ಬಿಡಲಿದೆ. ಭಾರತೀಯ ಅಡುಗೆ ಮತ್ತು ಧಾರ್ಮಿಕ ಪರಂಪರೆಯಲ್ಲಿ ತೆಂಗಿಗೆ ಇರುವ ಪ್ರಾಮುಖ್ಯತೆ ಅಪಾರವಾದುದು. ಹಾಗಾಗಿ ತೆಂಗನ್ನು ಕಲ್ಪವೃಕ್ಷ ಎಂದೇ ಕರೆಯಲಾಗುತ್ತಿದೆ. ಇದು ಆರರಿಂದ ಎಂಟು ವರ್ಷಕ್ಕೆ ಫಲ ಬಿಡುತ್ತದೆ. ಜವಾರಿ ತಳಿಯಾಗಿದ್ದು, ಗುಣಮಟ್ಟದ ಕಾಯಿಗಳನ್ನು ನೀಡಲಿದೆ.

ಹೈ ಬ್ರಿಡ್ ತಳಿ ಕೇವಲ ನಾಲ್ಕು ವರ್ಷಕ್ಕೆ ಫಲನೀಡಿದರೂ, ಆಯುಷ್ಯ ಕಡಿಮೆ, ಆದರೆ ಈ ತಳಿ ಸುಮಾರು 50 ರಿಂದ 80 ವರ್ಷದ ತನಕ ಆಯುಷ್ಯ ನೀಡಲಿದ್ದು, ಗೊಬ್ಬರ ನೀರು ಹಾಕಿ ಚೆನ್ನಾಗಿ ನೋಡಿಕೊಂಡರೆ ವರ್ಷದಿಂದ ವರ್ಷಕ್ಕೆ ಫಲ ಹೆಚ್ಚಾಗಲಿದೆ. ಅಲ್ಲದೇ ಇದರ ಎಲ್ಲ ವಸ್ತುಗಳು ಉಪಯೋಗಕ್ಕೆ ಬರಲಿದೆ. ಸಣ್ಣ ಸಸಿಗಳಿಂದಲೇ ಉತ್ತಮ ಗೊಬ್ಬರ ಹಾಕಿ ನಿರ್ವಹಣೆ ಮಾಡಿರುವ ಕಾರಣ ಹೆಚ್ಚು ಆರೋಗ್ಯವಂತ ಸಸಿಗಳಾಗಿದ್ದು, ರೋಗ ಅಂಟುವುದು ಕಡಿಮೆ.


ತೆಂಗಿನ ಪ್ರತಿಯೊಂದು ಭಾಗ ಕೂಡ ಅಷ್ಟೊಂದು ಉಪಯುಕ್ತ ಹಾಗಾಗಿ ಇದಕ್ಕೆ ಕಲ್ಪವೃಕ್ಷ ಎಂಬ ಮತ್ತೊಂದು ಹೆಸರು ಸೂಕ್ತ. ಕಲ್ಪವೃಕ್ಷ ಎಂದೇ ಕರೆಯಲಾಗುವ ತೆಂಗಿನ ಮರ ವರ್ಷಪೂರ್ತಿ ಫಲ ನೀಡುವ ಮರ. ಧಾರ್ಮಿಕ ಕಾರ್ಯಗಳಿಂದ ಹಿಡಿದು, ಔಷಧಗಳು, ಅಡಿಗೆ ಮತ್ತು ಸೌಂದರ್ಯವರ್ಧಕಗಳವರೆಗೆ ಇದನ್ನು ಬಳಸಲಾಗುತ್ತದೆ. ಕರ್ನಾಟಕದಲ್ಲಿ ತೆಂಗನ್ನು ಅತಿಹೆಚ್ಚಾಗಿ ಬೆಳೆಯಲಾಗುತ್ತದೆ ಮತ್ತು ತೆಂಗು ಕೃಷಿಯಲ್ಲಿ ಕರ್ನಾಟಕ ದೇಶದಲ್ಲಿಯೇ ಎರಡನೇ ಸ್ಥಾನದಲ್ಲಿರುವುದು ರಾಜ್ಯಕ್ಕೆ ಹೆಮ್ಮೆಯ ವಿಚಾರವೂ ಹೌದು.

ತೆಂಗಿನ ಮರದ ಕೃಷಿ ಹಲವಾರು ಪ್ರಯೋಜನಗಳನ್ನು ಹೊಂದಿದೆ. ಇನ್ನು ತೆಂಗು-ಆಧರಿತ ಸಮಗ್ರ ಕೃಷಿ ಮತ್ತಷ್ಟು ಲಾಭದಾಯಕವಾಗಿದೆ ಎಂದು ಹೊಸ ಅಧ್ಯಯನವೊಂದು ತಿಳಿಸಿದೆ. ಈ ಕೃಷಿ ಪದ್ಧತಿ ಇತರೆ ಬೆಳೆಗಳನ್ನು ಬೆಳೆಯಲು ಅನುವು ಮಾಡಿಕೊಡುತ್ತದೆ, ಬೆಳೆಗಳ ಜೀವವೈವಿಧ್ಯ ಮತ್ತು ಕೃಷಿ ಉತ್ಪಾದಕತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇತ್ತೀಚಿನ ಅಧ್ಯಯನ ಹೇಳಿರುವ ಪ್ರಕಾರ ತೆಂಗು ಆಧಾರಿತ ಸಮಗ್ರ ಕೃಷಿ ಇಂಗಾಲವನ್ನು ಬೇರ್ಪಡಿಸುವ ವಿಧಾನವನ್ನೂ ಸಹ ನೀಡುತ್ತದೆ ಎಂದು ಹೇಳಿದೆ.ಈ ಎಲ್ಲ ಅಂಶಗಳನ್ನು ಮುಂದಿಟ್ಟುಕೊಂಡು ದಾವಣಗೆರೆ ತೋಟಗಾರಿಕೆ ಇಲಾಖೆ ದಾವಣಗೆರ ಸಮೀಪದ ಆವರಗೊಳ್ಳ ಬಳಿ 5 ಎಕರೆ ಪ್ರದೇಶದಲ್ಲಿ ದೇಶದಲ್ಲಿಯೇ ಹೆಸರಾಂತ ತಳಿಯಾಗಿರುವ ತಿಪಟೂರು ತೆಂಗಿನ ಸಸಿಗಳನ್ನು ಬೆಳೆಸಿದೆ.

ನೋಂದಾಯಿತ ನರ್ಸರಿಗಳಿಂದ ಕೃಷಿ ವಿಜ್ಞಾನ ಕೇಂದ್ರ ಮತ್ತು ಅಧಿಕಾರಿಗಳು ಮತ್ತು ಸೇರಿಕೊಂಡ ಅಲ್ಲಿಂದ ಬೀಜದ ತೆಂಗಿನ ಕಾಯಿಗಳನ್ನು ತಂದು ಕಳೆದ ವರ್ಷ ಡಿಸೆಂಬರ್ ಜನವರಿಯಲ್ಲಿ ಬಿತ್ತನೆ ಮಾಡಲಾಗಿದ್ದು, ಇದೀಗ 14 ತಿಂಗಳ ಅವಧಿ ಪೂರೈಸಿದ್ದು ಇದೀಗ ಮಾರಾಟಕ್ಕೆ ಸಿದ್ಧಗೊಂಡಿದೆ.ಆಸಕ್ತ ರೈತರು ಆವರಗೊಳ್ಳ ನರ್ಸರಿಗೆ ಹೋಗಿ ಈ ಉತ್ಕೃಷ್ಟ ತಳಿಯ ತೆಂಗಿನ ಸಸಿಗಳನ್ನು ಪಡೆಯಬಹುದಾಗಿದೆ ಎನ್ನುತ್ತಾರೆ ತಾಲ್ಲೂಕು ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕಿ ರೇಷ್ಮಾ ಅವರು.

ಪ್ರಸ್ತುತ 5 ಸಾವಿರ ತೆಂಗಿನ ಸಸಿಗಳು ಮಾರಾಟಕ್ಕೆ ಸಿದ್ದವಿದ್ದು, ಖಾಸಗಿಯವರು ಈ ತಳಿಯನ್ನು 150 ರಿಂದ 200 ರೂಗೆ ಒಂದರಂತೆ ಮಾರಾಟ ಮಾಡುತ್ತಿದ್ದಾರೆ. ಆದರೆ ತೋಟಗಾರಿಕಾ ಇಲಾಖೆ ಕೇವಲ 75 ರೂಗೆ ಒಂದರಂತೆ ಮಾರಾಟ ಮಾಡುತ್ತಿದೆ. ಇದು ಸಹಜವಾಗಿಯೇ ತೆಂಗು ಬೆಳೆಯುವ ಆಸಕ್ತ ರೈತರಿಗೆ ಉತ್ತೇಜನ ನೀಡಿದಂತಾಗಿದೆ. ಹಾಗಾದ್ರೆ ಇನ್ನೇಕೆ ತಡ ನೀವು ಇಲ್ಲಿಗೆ ಬಂದು ತಿಪಟೂರು ಟಾಲ್ ತೆಂಗಿನ ಸಸಿಗಳನ್ನು ತೆಗೆದುಕೊಂಡು ಹೋಗಿ, ಇಲ್ಲದೇ ಹೋದರೆ ಸ್ಟಾಕ್ ಸಿಗೋದಿಲ್ಲ ಎಂಬ ಉತ್ತರ ತೋಟಗಾರಿಕೆ ಇಲಾಖೆ ಅಧಿಕಾರಿಗಳಿದ್ದು.

Leave a Reply

Your email address will not be published. Required fields are marked *

error: Content is protected !!