ಎಸ್ ಯು ಸಿ ಐ ಕಮ್ಯುನಿಸ್ಟ್ ಪಕ್ಷದ ಅಭ್ಯರ್ಥಿಯಿಂದ ವೋಟು ಕೊಡಿ ನೋಟು ಕೊಡಿ ಅಭಿಯಾನ!!

ಇಂದು ನಗರದ ಎಸ್ ಎಸ್ ಬಡಾವಣೆ ಮಾರುಕಟ್ಟೆ, ಎಪಿಎಂಸಿ, ಕೆ ಆರ್ ಮಾರುಕಟ್ಟೆ ಸೇರಿದಂತೆ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ಎಸ್ ಯು ಸಿ ಐ ಕಮ್ಯುನಿಸ್ಟ್ ಪಕ್ಷದ ದಾವಣಗೆರೆ ಲೋಕಸಭಾ ಅಭ್ಯರ್ಥಿ ಅಣಬೇರು ತಿಪ್ಪೇಸ್ವಾಮಿಯವರು ‘ಓಟು ಕೊಡಿ ನೋಟು ಕೊಡಿ’ ಅಭಿಯಾನ ಕೈಗೊಂಡರು.

ಕಳೆದ ಎರಡು ದಶಕಗಳಿಂದ ದಾವಣಗೆರೆಯಲ್ಲಿ ರೈತ-ಕಾರ್ಮಿಕರು, ವಿದ್ಯಾರ್ಥಿ, ಯುವಜನ, ಮಹಿಳೆಯರು ಸೇರಿದಂತೆ ಎಲ್ಲಾ ಜನಸಾಮಾನ್ಯರ ನ್ಯಾಯಯುತ ಬೇಡಿಕೆಗಳೊಂದಿಗೆ ಹೋರಾಟದಲ್ಲಿ ನಿರತರಾಗಿರುವ ಎಸ್ ಯು ಸಿ ಐ ಕಮ್ಯುನಿಸ್ಟ್ ಪಕ್ಷವು ಪ್ರಸ್ತುತ ಲೋಕಸಭಾ ಚುನಾವಣೆಯಲ್ಲಿ ಕೂಡ ಹೋರಾಟದ ಭಾಗವಾಗಿ ಸ್ಪರ್ಧಿಸುತ್ತಿದೆ. ಜನರ ದೇಣಿಗೆ ಮೇಲೆ ನಡೆಯುವ ಪಕ್ಷದ ಹೋರಾಟಗಳಂತೆಯೇ ಚುನಾವಣೆಯನ್ನು ಕೂಡ ಜನಸಾಮಾನ್ಯರ ದೇಣಿಗೆಯಿಂದ ನಡೆಸಲಾಗುತ್ತಿದೆ. ಈ ಪ್ರಯುಕ್ತ ಪಕ್ಷದ ದಾವಣಗೆರೆ ಲೋಕಸಭಾ ಅಭ್ಯರ್ಥಿ ಅಣಬೇರು ತಿಪ್ಪೇಸ್ವಾಮಿಯವರು ಕೈಯಲ್ಲಿ ದೇಣಿಗೆ ಪೆಟ್ಟಿಗೆ ಹಿಡಿದು ಬೀದಿಬದಿ ವ್ಯಾಪಾರಿಗಳಿಂದ ಹಾಗೂ ಜನಸಾಮಾನ್ಯರಿಂದ ಚುನಾವಣೆ ಖರ್ಚಿಗಾಗಿ ದೇಣಿಗೆ ಸಂಗ್ರಹ ಮಾಡಿದರು. ಮತ್ತು ತಮಗೆ ಓಟು ನೀಡುವುದರ ಮೂಲಕ ಜನಹೋರಾಟಗಳನ್ನು ಗಟ್ಟಿಗೊಳಿಸಬೇಕೆಂದು ಮತಯಾಚಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಆಡಳಿತರೂಢ ಬಿಜೆಪಿ ಕಾಂಗ್ರೆಸ್ ಮುಂತಾದ ಪಕ್ಷಗಳು ದೇಶದ ಬಂಡವಾಳಗಾರರಾದ ಅಂಬಾನಿ, ಅದಾನಿ, ಜಿಂದಾಲ್ ಮುಂತಾದವರಿಂದ ಚುನಾವಣಾ ಬಾಂಡ್ ಗಳ ಮುಖಾಂತರ ಸಾವಿರಾರು ಕೋಟಿ ಜನರಿಗೆ ಸಂಗ್ರಹಿಸುತ್ತಾರೆ. ದೇಶದ ಕೈಗಾರಿಕಾಪತಿಗಳ ದೇಣಿಗೆ ಪಡೆಯುವ ಈ ಪಕ್ಷಗಳು ಅಧಿಕಾರಕ್ಕೆ ಬಂದ ಮೇಲೆ ಅವರ ಸೇವೆಯನ್ನೇ ಮಾಡುತ್ತಾ ಬಂದಿವೆ. ಇದಕ್ಕೆ ವಿರುದ್ಧವಾಗಿ ಎಸ್ ಯು ಸಿ ಐ ಕಮ್ಯುನಿಸ್ಟ್ ಪಕ್ಷ ಮಾತ್ರ ದೇಶದವ್ಯಾಪಿ ಜನಸಾಮಾನ್ಯರ ದೇಣಿಗೆ ಸಹಾಯದಿಂದ ಏಕಾಂಗಿಯಾಗಿ ಚುನಾವಣೆಯನ್ನು ಎದುರಿಸುತ್ತಿದೆ. ಹೀಗಾಗಿ, ಬಂಡವಾಳಶಾಹಿಗಳ ಸೇವಕರಾಗಿರುವ ಬಿಜೆಪಿ, ಕಾಂಗ್ರೆಸ್ ಮುಂತಾದ ಪಕ್ಷಗಳು ಹಾಗೂ ದುಡಿಯುವ ಜನಗಳ ಪ್ರತಿನಿಧಿಯಾಗಿರುವ ಎಸ್ ಯು ಸಿ ಐ ಕಮ್ಯುನಿಸ್ಟ್ ಪಕ್ಷದ ಮಧ್ಯೆ ಇರುವ ಮೂಲಭೂತ ವ್ಯತ್ಯಾಸವನ್ನು ಜನಸಾಮಾನ್ಯರು ಗುರುತಿಸಬೇಕು ಮತ್ತು ದುಡಿಯುವ ಜನಗಳ ಸಮಸ್ಯೆಗಳ ವಿರುದ್ಧ ಹೋರಾಟದ ಕೂಗನ್ನು ಲೋಕಸಭೆಯಲ್ಲಿ ಮೊಳಗಿಸಲು ಎಸ್ ಯು ಸಿ ಐ ಕಮ್ಯುನಿಸ್ಟ್ ಪಕ್ಷಕ್ಕೆ ಮತ ನೀಡಬೇಕೆಂದು ಅವರು ಕ್ಷೇತ್ರದ ಜನತೆಯಲ್ಲಿ ಮನವಿ ಮಾಡಿದರು.

ಪಕ್ಷದ ರಾಜ್ಯ ಸಮಿತಿ ಸದಸ್ಯರು ಹಾಗೂ ಜಿಲ್ಲಾ ಉಸ್ತುವಾರಿಗಳಾದ ಅಪರ್ಣಾ ಬಿ ಆರ್, ಜಿಲ್ಲಾ ಸಮಿತಿ ಸದಸ್ಯರಾದ ಮಧು ತೊಗಲೇರೆ, ಭಾರತಿ, ಪರಶುರಾಮ್, ಮಹಾಂತೇಶ್ ಸೇರಿದಂತೆ ಪಕ್ಷದ ಕಾರ್ಯಕರ್ತರು ಹಾಗೂ ಬೆಂಬಲಿಗರು ಇಂದಿನ ‘ಓಟು ಕೊಡಿ ನೋಟು ಕೊಡಿ’ ಅಭಿಯಾನದಲ್ಲಿ ಭಾಗವಹಿಸಿದ್ದರು. ದೇಣಿಗೆ ನೀಡಿದ ಜನಸಾಮಾನ್ಯರು ಹಾಗೂ ಬೀದಿ ಬದಿ ವ್ಯಾಪಾರಸ್ಥರು ಅಭ್ಯರ್ಥಿಗೆ ಶುಭ ಹಾರೈಸಿ ದೇಣಿಗೆ ನೀಡಿ ಮತ ನೀಡುತ್ತೇವೆ ಹೋರಾಟದ ಪಕ್ಷವನ್ನು ಬೆಂಬಲಿಸುತ್ತೇವೆ ಎಂದು ಹೇಳಿದರು.

ಈ ಚುನಾವಣೆಯ ಅಂಗವಾಗಿ ವಿದ್ಯಾರ್ಥಿಗಳು, ಯುವಜನರು, ವಿವಿಧ ಕ್ಷೇತ್ರಗಳ ಕಾರ್ಮಿಕರು, ರೈತರು ಸೇರಿದಂತೆ ಹಲವಾರು ಜನ ಕಾರ್ಯಕರ್ತರು ಸ್ವಯಂಸೇವಕರಾಗಿ ಎಸ್ ಯು ಸಿಐ (ಕಮ್ಯುನಿಸ್ಟ್) ಪಕ್ಷದ ಅಭ್ಯರ್ಥಿಯ ಪರವಾಗಿ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ. ಈ ಸಂದರ್ಭದಲ್ಲಿ ಪ್ರಚಾರ ಮುಂತಾದ ವ್ಯವಸ್ಥೆಗಳಿಗೆ ಎಸ್ ಯು ಸಿ ಐ (ಕಮ್ಯುನಿಸ್ಟ್) ಪಕ್ಷವು ದೆಣಿಗೆ ನೀಡಲು ಜನರಲ್ಲಿ ಮನವಿ ಮಾಡುತ್ತದೆ. ಸಹೃದಯರು ಕೆಳಗಿನ ಮೊಬೈಲ್ ಸಂಖ್ಯೆಗೆ ಸಂಪರ್ಕಿಸಿ ಹಣ, ಧವಸ-ಧಾನ್ಯ ಮುಂತಾದ ರೂಪದಲ್ಲಿ ಸಹಾಯ ಮಾಡಬಹುದು. ಮೊ: 9535510912

ಸುದ್ದಿ ಇವರಿಂದ
ಭಾರತಿ ಕೆ.
ಜಿಲ್ಲಾ ಸಮಿತಿ ಸದಸ್ಯರು. SUCI (C)

Leave a Reply

Your email address will not be published. Required fields are marked *

error: Content is protected !!