ದಾವಣಗೆರೆ: (Suspected Terrorist) ದಾವಣಗೆರೆ ಜಿಲ್ಲಾ ಪೊಲೀಸ್ ಮತ್ತು ಕೇಂದ್ರ ಗುಪ್ತಚರ ಇಲಾಖೆಯ (ಐಬಿ) ಅಧಿಕಾರಿಗಳು ಜಂಟಿಯಾಗಿ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಯೊಂದಿಗೆ ನೇರ ಸಂಪರ್ಕ ಹೊಂದಿದ್ದ ಉತ್ತರ ಪ್ರದೇಶ ಮೂಲದ ಶಂಕಿತ ಉಗ್ರನೊಬ್ಬನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಬನ್ನಿಕೋಡು ಗ್ರಾಮದಲ್ಲಿ ಪೇಂಟಿಂಗ್ ಕೆಲಸ ಮಾಡುವ ನೆಪದಲ್ಲಿ ಅಡಗಿ ಕುಳಿತಿದ್ದ ಉತ್ತರ ಪ್ರದೇಶ ಮೂಲದ ಸುಹೇಲ್ ಎಂಬಾತನೇ ಬಂಧಿತ ಶಂಕಿತ ಭಯೋತ್ಪಾದಕ.
*ಬಂಧನದ ಹಿನ್ನೆಲೆ:*
ಇತ್ತೀಚೆಗಷ್ಟೇ ರಾಜ್ಯದ ತುಮಕೂರು ಹಾಗೂ ದಾವಣಗೆರೆ ನಗರದಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿದ್ದ ಇಬ್ಬರು ಶಂಕಿತ ಭಯೋತ್ಪಾದಕರನ್ನು ಪೊಲೀಸರು ಬಂಧಿಸಿದ್ದರು. ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಲಭ್ಯವಾದ ಮಹತ್ವದ ಸುಳಿವು ಮತ್ತು ಮಾಹಿತಿಯ ಆಧಾರದ ಮೇಲೆ ಸದ್ಯ ಈ ಮೂರನೇ ಶಂಕಿತ ಉಗ್ರ ಸುಹೇಲ್ನನ್ನು ಬನ್ನಿಕೋಡು ಗ್ರಾಮದಲ್ಲಿ ಸೆರೆಹಿಡಿಯಲಾಗಿದೆ. ಕಾರ್ಮಿಕನ ಸೋಗಿನಲ್ಲಿ ಹಳ್ಳಿಯೊಂದರಲ್ಲಿ ವಾಸವಿದ್ದ ಈತ, ಪಾಕಿಸ್ತಾನದ ಉಗ್ರಗಾಮಿ ಸಂಘಟನೆಗಳೊಂದಿಗೆ ನಿರಂತರವಾಗಿ ನೇರ ಸಂಪರ್ಕದಲ್ಲಿದ್ದ ಎನ್ನಲಾಗಿದೆ.
*ಜಂಟಿ ಕಾರ್ಯಾಚರಣೆ:*
ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಶೇಖರ್ ಹೆಚ್.ಟಿ. ಅವರ ನೇರ ಮಾರ್ಗದರ್ಶನದಲ್ಲಿ, ದಾವಣಗೆರೆ ಗ್ರಾಮಾಂತರ ಉಪ ವಿಭಾಗದ ಡಿವೈಎಸ್ಪಿ ಬಸವರಾಜ್, ಕೇಂದ್ರೀಯ ಗುಪ್ತಚರ ವಿಭಾಗದ ಸಿಬ್ಬಂದಿ ಹಾಗೂ ದಾವಣಗೆರೆ ಅಪರಾಧ ವಿಭಾಗದ ಸಿಬ್ಬಂದಿಗಳನ್ನೊಳಗೊಂಡ ವಿಶೇಷ ತಂಡ ಈ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಡೆಸಿದೆ.
ಬಂಧನದ ಬಳಿಕ ಮುಂದಿನ ತನಿಖೆಗಾಗಿ ಶಂಕಿತ ಉಗ್ರ ಸುಹೇಲ್ನನ್ನು ದಾವಣಗೆರೆ, ತುಮಕೂರು ಮತ್ತು ಕೇಂದ್ರ ಗುಪ್ತಚರ ವಿಭಾಗದ ಪೊಲೀಸರು ಬಿಗಿ ಭದ್ರತೆಯೊಂದಿಗೆ ದಾವಣಗೆರೆಯಿಂದ ತುಮಕೂರು ಜಿಲ್ಲೆಗೆ ಕರೆದೊಯ್ದಿದ್ದಾರೆ. ತನಿಖೆಯ ನಂತರ ಈ ಜಾಲದ ಕುರಿತು ಇನ್ನಷ್ಟು ಆತಂಕಕಾರಿ ವಿಷಯಗಳು ಹೊರಬರುವ ಸಾಧ್ಯತೆಯಿದೆ.
Leave a comment