ಬಳೆಗಾರ ಹನುಮವ್ವ ನಾಟಕದ ಸಮಾರೋಪ ಸಮಾರಂಭ ಇಂದು
ದಾವಣಗೆರೆ : ಶ್ರೀ ಸಂತ ಶರೀಫ ಶಿವಯೋಗಿ ನಾಟ್ಯ ಸಂಘ ತೆಗ್ಗಿಹಳ್ಳಿ ಇವರ ವತಿಯಿಂದ ಶ್ರೀ ಮಂಜುನಾಥ ಕುಂದೂರ ಅವರ ರಚನೆ ಮತ್ತು ನಿರ್ದೇಶನದ ‘ಬಳೆಗಾರ ಹನುಮವ್ವ’ ಸಾಮಾಜಿಕ ನಾಟಕದ 101ನೇ ಪ್ರದರ್ಶನ ಹಾಗೂ ಸಮಾರೋಪ ಸಮಾರಂಭವು ಆ.3 ರಂದು ಸಂಜೆ 6 ಗಂಟೆಗೆ ನಗರದ ಪಿ.ಬಿ. ರಸ್ತೆಯಲ್ಲಿರುವ ಟಿ.ಎಂ. ವಿನಾಯಕ ಪಿ.ಎಂ.ಪಿ.ಎಸ್. ಕಾಂಪೌಂಡ್ನಲ್ಲಿ ಹಮ್ಮಿಕೊಳ್ಳಲಾಗಿದೆ.
ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಸಾನಿಧ್ಯದಲ್ಲಿ ನಡೆಯುವ ಕಾರ್ಯಕ್ರಮವನ್ನು ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಉದ್ಘಾಟಿಸಲಿದ್ದಾರೆ. ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ಜ್ಯೋತಿ ಬೆಳಗಿಸಲಿದ್ದು, ಮೇಯರ್ ವಿನಾಯಕ ಪೈಲ್ವಾನ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಸಂಘದ ವ್ಯವಸ್ಥಾಪಕ ಮಹಾಂತೇಶ್ ಬಿ. ಬಿರಾದಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಚಂದ್ರ, ಪಾಲಿಕೆ ಸದಸ್ಯರಾದ ಆಶಾ ಉಮೇಶ್, ಕ.ನಿ.ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಇ..ಎಂ.ಮಂಜುನಾಥ್, ವರದಿಗಾರರ ಕೂಟದ ಪ್ರಧಾನ ಕಾರ್ಯದರ್ಶಿ ಡಾ| ಸಿ. ವರದರಾಜ್, ತಾಪಂ ಮಾಜಿ ಸದಸ್ಯ ಆಲೂರು ನಿಂಗರಾಜ್, ಶೋಷಿತ ವರ್ಗಗಳ ಒಕ್ಕೂಟದ ಅಧ್ಯಕ್ಷ ಬಾಡದ ಆನಂದರಾಜ್, ಪತ್ರಿಕೆ ಸಂಪಾದಕ ಸುರೇಶ್ ಕುಣೇಬೆಳಕೆರೆ, ಕೆ.ಬಿ.ಆರ್.ಡ್ರಾಮಾ ಕಂಪನಿ ಮಾಲೀಕ ಚಿಂದೋಡಿ ಚಂದ್ರಧರ,ವಿಶ್ವ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಕೆ.ಜಿ.ಯಲ್ಲಪ್ಪ, ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಬಸವರಾಜ ಐರಣಿ ಇವರು ಪಾಲ್ಗೊಳ್ಳಲಿದ್ದಾರೆ. ಇದೇ ವೇಳೆ ಮಹಾಲಿಂಗ ರಂಗ ಪ್ರಶಸ್ತಿ ಪುರಸ್ಕೃತ ಬಾಮ ಬಸವರಾಜಯ್ಯ ಅವರಿಗೆ ಸನ್ಮಾನಿಸಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಹಮದ್ ಅಲಿ ಮುಲ್ಲಾ ಮತ್ತಿತರರು ಇದ್ದರು.