ಭದ್ರಾ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಬೃಹತ್ ಮರಕಡಿತಲೆ.! ಮರ ಕಡಿಯಲು ಮಾಜಿ ಶಾಸಕ ಹೇಳಿದ್ದು ನಿಜನಾ.?
ದಾವಣಗೆರೆ: ಅರಣ್ಯ ಇಲಾಖೆಯಿಂದ ಯಾವುದೇ ಪರವಾನಿಗೆ ಪಡೆಯದೆ ಇಲ್ಲಿನ ಭದ್ರಾ ಸಹಕಾರಿ ಸಕ್ಕರೆ ಕಂಪನಿ ಆವರಣದಲ್ಲಿನ ಬೆಲೆಬಾಳುವ ಸುಮಾರು ಇಪ್ಪತ್ತಕ್ಕೂ ಹೆಚ್ಚು ಮರಗಳನ್ನು ಅಕ್ರಮವಾಗಿ ಕಡಿಯಲಾಗಿದ್ದು, ಇದಕ್ಕೆ ಮಾಜಿ ಶಾಸಕ, ಕಂಪನಿಯ ಅಧ್ಯಕ್ಷ ಹೆಚ್.ಎಸ್ ಶಿವಶಂಕರ್ ಕಾರಣ ಎಂಬ ಆರೋಪ ಕೇಳಿಬಂದಿದೆ.
ಮಾಜಿ ಶಾಸಕ ಹೆಚ್ ಎಸ್ ಶಿವಶಂಕರ್ ಆದೇಶದ ಮೇರೆಗೆ ಮರಗಳನ್ನು ಕಡಿಯಲಾಗಿದೆ ಎಂದು ಸ್ವತಃ ಮರ ಕಡಿದ ವ್ಯಕ್ತಿ ವಿಡಿಯೋವೊಂದರಲ್ಲಿ ತಪ್ಪೊಪ್ಪಿಕೊಂಡಿದ್ದಾನೆ.
ಅರಣ್ಯ ಇಲಾಖೆಗೆ ದೂರು ನೀಡಲು ಗ್ರಾಮಸ್ಥರು ಹಿಂದೇಟು ಹಾಕಲು ಸಹ ಶಾಸಕ ಶಿವಶಂಕರ್ ಬೆದರಿಕೆ ಹಾಕಿರುವುದೇ ಕಾರಣ ಎನ್ನಲಾಗುತ್ತಿದೆ.
ಕಡಿದ ಮರಗಳನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ಸಿಜ್ ಮಾಡಿದ್ದು, ಸ್ವತಃ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಈ ಬಗ್ಗೆ ‘ಗರುಡಾವಾಯ್ಸ್’ಗೆ ಇಲಾಖೆಯ ಡಿಎಫ್ಓ ಶ್ರೀನಿವಾಸ್ ಮೂರ್ತಿ ಮಾಹಿತಿ ನೀಡಿ, ಈಗಾಗಲೇ ಎಫ್ ಐಆರ್ ದಾಖಲಾಗಿದೆ. ಕಡಿದ ಮರಗಳಲ್ಲಿ ಕೆಲವು ಮಳೆ ಮರ ಹೀಗಾಗಿ ಅವುಗಳಿಗೆ ಪರವಾನಿಗೆ ಪಡೆಯುವ ಅಗತ್ಯವಿಲ್ಲ. ಬೇವಿನ ಮರಗಳು ಇದ್ದ ಕಾರಣ ಎಫ್ ಐಆರ್ ದಾಖಲಿಸಲಾಗಿದೆ ಎಂದು ತಿಳಿಸಿದರು.
ಮಾಜಿ ಶಾಸಕರಿಗೊಂದು ನ್ಯಾಯವಾದರೆ ಸಾರ್ವಜನಿಕರಿಗೆ ಮತ್ತೊಂದು ನ್ಯಾಯ ಮಾಡುತ್ತಿದ್ದಾರೆ ಅರಣ್ಯ ಇಲಾಖೆ ಎಂದು ಜನರು ಆರೋಪಿಸುತ್ತಿದ್ದಾರೆ.