ಭಯ ತೊರೆದು ಪರೀಕ್ಷೆಯ ಸಂಭ್ರಮಾಚರಣೆ ಮಾಡಿ- ಆದರ್ಶ ಗೋಖಲೆ
ದಾವಣಗೆರೆ : ಪರೀಕ್ಷೆ ಎಂದರೆ ಭಯಪಡಬಾರದು, ಹಬ್ಬದಂತೆ ಸಂಭ್ರಮಾಚರಣೆ ಮಾಡಬೇಕು ಎಂದು ಉಪನ್ಯಾಸಕರು ಹಾಗೂ ವಾಗ್ಮಿಗಳಾದ ಆದರ್ಶ ಗೋಖಲೆ ಅವರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ನಗರದ ಸೋಮೇಶ್ವರ ವಿದ್ಯಾಲಯದಲ್ಲಿ “ಮಕ್ಕಳಲ್ಲಿ ಪರೀಕ್ಷಾ ಭಯ ಹೋಗಲಾಡಿಸಲು ಹಾಗೂ ಭವಿಷ್ಯದಲ್ಲಿ ಎದುರಾಗುವ ಸವಾಲುಗಳು, ಜವಾಬ್ದಾರಿಗಳ ನಿರ್ವಹಣೆ” ಎಂಬ ವಿಷಯದ ಕುರಿತು ಉಪನ್ಯಾಸ ನೀಡುವ ಸಂದರ್ಭದಲ್ಲಿ ಈ ವಿಷಯ ತಿಳಿಸಿದರು. 10ನೇ ತರಗತಿ ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ಹಾಗೂ ಸಲಹೆ ನೀಡುವ ಉದ್ದೇಶದಿಂದ ಈ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ವಿದ್ಯಾರ್ಥಿಗಳಿಗೆ ನೀವು ಹಬ್ಬಕ್ಕೆ ಯಾವ ರೀತಿ ಸಿದ್ಧತೆ ಮಾಡಿಕೊಳ್ಳುತ್ತಿರೋ ಅದೇ ರೀತಿ ಸಿದ್ಧತೆಯಿಂದ ಸಂಭ್ರಮದಿಂದ ಪರೀಕ್ಷೆಯನ್ನು ಬರೆಯಬೇಕು. ದಿನವೊಂದಕ್ಕೆ 6 ವಿಷಯಗಳಿಂದ 6 ಪ್ರಶ್ನೆಯನ್ನು 12 ಬಾರಿ ನಿರಂತರ ಅಧ್ಯಯನ ಮಾಡಬೇಕು, ಕ್ರಮಬದ್ಧ ವ್ಯಾಯಾಮ ಹಾಗೂ ಯೋಗದಿಂದ ಏಕಾಗ್ರಹತೆಯನ್ನು ರೂಢಿಸಿಕೊಳ್ಳಿ, ಕೀಳರಿಮೆಯನ್ನು ತೊರೆದು ಸ್ವ ನಂಬಿಕೆ ಬೆಳಸಿಕೊಳ್ಳಿ, ತನ್ಮೂಲಕ ಪೋಷಕರ, ಶಿಕ್ಷಕರ, ದೇಶದ ಋಣ ಸಂದಾಯಕ್ಕೆ ಸನ್ನದ್ಧರಾಗಬೇಕೆಂದು ತಿಳಿಸಿದರು. ಪರೀಕ್ಷೆ ನಂತರವೂ ಭಾರತದ ಸನಾತನ ಧರ್ಮ, ಸಂಸ್ಕೃತಿ, ಪರಂಪರೆಯನ್ನು ಅಧ್ಯಯನ ಮಾಡಿ, ಅವುಗಳನ್ನು ಮುನ್ನಡೆಸಿಕೊಂಡು ಹೊಗುವ ಸತ್ ಪ್ರಜೆಗಳಾಗಿ ಎಂದು ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಈ ವೇಳೆ ಪ್ರಾಚಾರ್ಯರಾದ ಪ್ರಭಾವತಿ ಎನ್ ಆಡಳಿತಾಧಿಕಾರಿ ಹರೀಶ್ ಬಾಬು, ಮುಖ್ಯೋಪಾಧ್ಯಾಯರಾದ ಗಾಯತ್ರಿ, ಪ್ರಕಾಶ್ ಹಾಗೂ ಶಾಲಾ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.