ಕರ್ನಾಟಕಕ್ಕೆ ಗಡ್ಕರಿ ಗಿಫ್ಟ್: ಹೆದ್ದಾರಿ ಯೋಜನೆಗಳಿಗಾಗಿ 1345 ಕೋಟಿ ರೂ. ಮಂಜೂರು

ನವದೆಹಲಿ: ಕರ್ನಾಟಕ ರಾಜ್ಯಕ್ಕೆ ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಬಹುದೊಡ್ಡ ಗಿಫ್ಟ್ ನೀಡಿದ್ದಾರೆ.
ಹೌದು, ವಿವಿಧ ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗಾಗಿ ಕರ್ನಾಟಕಕ್ಕೆ 1,345 ಕೋಟಿ ಮಂಜೂರು ಮಾಡಲಾಗಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಗುರುವಾರ ಹೇಳಿದ್ದಾರೆ.
ರಾಯಚೂರು ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 150ಎ ಯಲ್ಲಿ ವೆಂಕಟೇಶ್ವರ ಕ್ಯಾಂಪ್ನಿಂದ ದಡೇಸುಗೂರು ಕ್ಯಾಂಪ್ವರೆಗೆ 13.8 ಕಿ.ಮೀ. ಉದ್ದದ ರಸ್ತೆಯನ್ನು ವಿಸ್ತರಣೆ ಮಾಡಲು 142 ಕೋಟಿ ಹಾಗೂ ಇದೇ ಹೆದ್ದಾರಿಯ ಸಿಂದಿಗೇರಿ– ಬಳ್ಳಾರಿ ವಿಭಾಗದಲ್ಲಿ ರಸ್ತೆ ವಿಸ್ತರಣೆಗೆ 120 ಕೋಟಿ ಮಂಜೂರು ಮಾಡಲಾಗಿದೆ ಎಂದೂ ವಿವರಿಸಿದ್ದಾರೆ.
ಕಾರವಾರ ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ –52 ರಲ್ಲಿ 18 ಕಿ.ಮೀ.ಉದ್ದದ ರಸ್ತೆಯನ್ನು ದ್ವಿಪಥದಿಂದ ಚತುಷ್ಪಥಕ್ಕೆ ವಿಸ್ತರಿಸಲು ಒಟ್ಟು 232.84 ಕೋಟಿ ಮಂಜೂರು ಮಾಡಲಾಗಿದೆ ಎಂದೂ ಸಚಿವರು ಟ್ವೀಟ್ ಮಾಡಿದ್ದಾರೆ.
ಶಿವಮೊಗ್ಗ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ –69ರ ಹೊನ್ನಾವರ –ಚಿತ್ತೂರು ವಿಭಾಗದಲ್ಲಿ ಮೇಲ್ಸೇತುವೆ ನಿರ್ಮಿಸಲು 198 ಕೋಟಿ ಮಂಜೂರು ಮಾಡಲಾಗಿದೆ ಎಂದಿದ್ದಾರೆ. ಇದೇ ಹೆದ್ದಾರಿಯಲ್ಲಿ ರಸ್ತೆಯನ್ನು ದ್ವಿಪಥದಿಂದ ಚತುಷ್ಪಥಕ್ಕೆ ವಿಸ್ತರಿಸಲು ಹಾಗೂ ಇತರ ಕಾಮಗಾರಿಗಳಿಗೆ 653 ಕೋಟಿ ಮಂಜೂರು ಮಾಡಲಾಗಿದೆ ಎಂದೂ ಗಡ್ಕರಿಯವರು ಹೇಳಿದ್ದಾರೆ.